ಪಾತಕಿಗಳ ಸ್ಕೆಚ್ ಮಿಸ್, ಮಹೇಶ್ ಭಟ್ ಸುರಕ್ಷಿತ
ಮುಂಬೈ,ನ.18: ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಇಡೀ ಕುಟುಂಬದ ನಾಶಕ್ಕೆ ಭೂಗತ ಪಾತಕಿಗಳು ಹಾಕಿದ್ದ ಸಂಚನ್ನು ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ವಿಫಲಗೊಳಿಸಿದ್ದಾರೆ. ಭಟ್ ಅವರ ಕೊಲೆ ಸಂಚು ರೂಪಿಸಿದ್ದ ಇಡೀ ತಂಡವನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಭಟ್ ಅವರ ಕೊಲೆ ಸಂಚು ರೂಪಿಸಿದ್ದ 13 ಮಂದಿ ಗ್ಯಾಂಗ್ ಸ್ಟರ್ ಗಳನ್ನು ಮುಂಬೈ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮತ್ತೊಬ್ಬ ಚಿತ್ರ ನಿರ್ಮಾಪಕ ಕರೀಮ್ ಮೊರಾನಿ ಅವರ ಬಂಗಲೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಬಾಲಿವುಡ್ ನ ಪ್ರಮುಖ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವ ಸಂಚುಗಳನ್ನು ರೂಪಿಸಿದ್ದ 13 ಜನ ಗ್ಯಾಂಗ್ ಸ್ಟರ್ ಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಕ್ರೈಂ) ಸದಾನಂದ ದಾತೆ ಹೇಳಿದ್ದಾರೆ.[ಮೊರಾನಿ ಜೊತೆ ಬರೀ ಪರ್ಸನಲ್ ಕನೆಕ್ಷನ್: ಶಾರುಖ್]
ಈ ಪ್ರಕರಣ ಕುರಿತಂತೆ ಸಹಾಯಕ ಪೊಲೀಸ್ ಆಯುಕ್ತ ಸುನೀಲ್ ದೇಶ್ ಮುಖ್ ಅವರು ತನಿಖೆ ಕೈಗೊಂಡಿದ್ದಾರೆ. ಬಂಧಿತರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಸದಾನಂದ ದಾತೆ ಹೇಳಿದ್ದಾರೆ.
ಎಸಿಪಿ ಸುನಿಲ್ ದೇಶ್ ಮುಖ್, ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಸಾಹಿಲ್ ಅವರಿದ್ದ ತಂಡ ಖಾರ್ ಪ್ರದೇಶದಲ್ಲಿ ದುಷ್ಕರ್ಮಿಗಳನ್ನು ರೌಂಡಪ್ ಮಾಡಿ ಬಂಧಿಸಿದೆ. ತಂಡದಲ್ಲಿ ಏಳು ಜನರ ಬಳಿ ಶಸ್ತ್ರಾಸ್ತ್ರಗಳಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಎಲ್ಲರೂ ಬಾಲಿವುಡ್ ನ ಗಣ್ಯಾತಿಗಣ್ಯರ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದು ತಿಳಿದು ಬಂದಿದೆ.
ಈ ದುಷ್ಕರ್ಮಿಗಳ ತಂಡದ ಒಬ್ಬ ಸದಸ್ಯ ಮಹೇಶ್ ಭಟ್ ಅವರ ಮನೆಯಲ್ಲಿ ವಾಚ್ ಮನ್ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದ. ಖಾರ್ ಪ್ರದೇಶದ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ತಂಡದಲ್ಲಿ ಕೆಲವರು ದಂಧೆಗೆ ಹೊಸಬರಾಗಿದ್ದು, 11 ಲಕ್ಷ ರು ಸುಪಾರಿ ಪಡೆದುಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.












Click it and Unblock the Notifications