ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ವಸೂಲಿ ದಂಧೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ
ನವದೆಹಲಿ, ಏಪ್ರಿಲ್ 2: ಬಂಧನಕ್ಕೊಳಗಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ನಾರಿಮನ್ ಪಾಯಿಂಟ್ ಎಂಬ ಪಂಚತಾರಾ ಹೋಟೆಲ್ನ ಕೊಠಡಿಯೊಂದರಲ್ಲಿ ಕುಳಿತು ಸುಲಿಗೆ ದಂಧೆ ನಡೆಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಿಸಿದೆ. ವಾಜೆ ಅವರಿಗಾಗಿ ಉದ್ಯಮಿಯೊಬ್ಬರು 12 ಲಕ್ಷ ರೂಪಾಯಿಗೆ 100 ದಿನಗಳ ಕಾಲ ಕೊಠಡಿ ಬುಕ್ ಮಾಡಿದ್ದರು ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಸುಶಾಂತ್ ಸದಾಶಿವ್ ಖಮ್ಕಾರ್ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಗುರುತಿನ ಚೀಟಿ ಬಳಸಿ ಸಚಿನ್ ವಾಜೆ ಅಲ್ಲಿ ಉಳಿದುಕೊಂಡಿದ್ದರು. ನಾರಿಮನ್ ಪಾಯಿಂಟ್ ಪಂಚತಾರಾ ಹೋಟೆಲ್ನ ಕೊಠಡಿ ಸಂಖ್ಯೆ 1964ರಲ್ಲಿ ತಂಗಿದ್ದ ಅವರು, ಅಲ್ಲಿಂದ ಹಣ ವಸೂಲಿ ಚಟುವಟಿಕೆಗಳನ್ನು ನಡೆಸುತ್ತಿದ್ದರು.
ಮನ್ಸುಖ್ ಹಿರೇನ್ ಕೊಲೆ ಸಂಚಿನ ಸಭೆಯಲ್ಲಿ ವಾಜೆ ಮತ್ತು ಶಿಂದೆ ಭಾಗಿ: ಎನ್ಐಎ
'ಉದ್ಯಮಿಯೊಬ್ಬರು 100 ದಿನಗಳ ಕಾಲ 12 ಲಕ್ಷ ರೂಪಾಯಿಗೆ ಈ ಹೋಟೆಲ್ ಬುಕ್ ಮಾಡಿದ್ದರು. ಯಾವುದೋ ವಿವಾದದಲ್ಲಿ ಸಿಲುಕಿದ್ದ ಉದ್ಯಮಿಗೆ ವಾಜೆ ಸಹಾಯ ಮಾಡುತ್ತಿದ್ದರು. ಟ್ರಾವೆಲ್ ಏಜೆಂಟ್ ಮುಖಾಂತರ ಬುಕಿಂಗ್ ಮಾಡಲಾಗಿತ್ತು. ಫೆಬ್ರವರಿ ತಿಂಗಳಲ್ಲಿ ಕ್ರೈಂ ಬ್ರ್ಯಾಂಚ್ಗೆ ಕರ್ತವ್ಯ ವರದಿ ಮಾಡುತ್ತಿದ್ದಾಗಲು ವಾಜೆ ಈ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು' ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 16ರಂದು ಇನ್ನೋವಾ ಕಾರ್ನಲ್ಲಿ ಹೋಟೆಲ್ ಪ್ರವೇಶಿಸಿದ್ದ ವಾಜೆ, ಫೆ. 20ರಂದು ಕೊಠಡಿ ಖಾಲಿ ಮಾಡಿಕೊಂಡು ಲ್ಯಾಂಡ್ ಕ್ರೂಸರ್ನಲ್ಲಿ ತೆರಳಿದ್ದರು. ಮುಂಬೈನ ವಿವಿಧ ಸಂಸ್ಥೆಗಳ ಮೇಲೆ ಪರವಾನಗಿ ಉಲ್ಲಂಘನೆ ಆರೋಪದಡಿ ರಾತ್ರಿ ವೇಳೆ ವಾಜೆ ಮತ್ತು ಅವರ ತಂಡ ದಾಳಿಗಳನ್ನು ನಡೆಸಿದ್ದಕ್ಕೂ, ಈ ದಿನಾಂಕಗಳಿಗೂ ಹೊಂದಾಣಿಕೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆಯ ಒಂದು ಫ್ಲ್ಯಾಟ್ ಮತ್ತು ದಕ್ಷಿಣ ಮುಂಬೈನ ಹೋಟೆಲ್ ಹಾಗೂ ಕ್ಲಬ್ ಒಂದರಲ್ಲಿ ಕೂಡ ಎನ್ಐಎ ಗುರುವಾರ ಪರಿಶೀಲನೆ ನಡೆಸಿತ್ತು. ಅಲ್ಲದೆ, ವಾಜೆ ಅವರ ಸಹವರ್ತಿಯಾಗಿದ್ದ ಮಹಿಳೆಯೊಬ್ಬರನ್ನು ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಲಾಗಿದೆ. ಥಾಣೆಯ ಮೀರಾ ರಸ್ತೆ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾದ ಫ್ಲ್ಯಾಟ್ ಈ ಮಹಿಳೆಗೆ ಸೇರಿದ್ದು ಎನ್ನಲಾಗಿದೆ.
ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ಸಚಿನ್ ವಾಜೆಗೆ ಸೇರಿದ ಮತ್ತೊಂದು ಕಾರು ವಶ
ಅಂಬಾನಿಗೆ ಬಾಂಬ್ ಬೆದರಿಕೆ ಹಾಗೂ ಮನ್ಸುಖ್ ಹಿರೇನ್ ಕೊಲೆ ಪ್ರಕರಣದಲ್ಲಿ ಎನ್ಐಎ ಇದುವರೆಗೂ ಉಪ ಪೊಲೀಸ್ ಆಯುಕ್ತರವರೆಗಿನ ಹುದ್ದೆಗಳ ಸುಮಾರು 35 ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಸಚಿನ್ ವಾಜೆ ನಡೆಸುತ್ತಿದ್ದ ವ್ಯವಹಾರಗಳು ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದವು. ಇದನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.