Breaking;ನವನೀತ್ ಕೌರ್ ಬಂಧನ; ವರದಿ ಕೊಡಿ ಎಂದ ಲೋಕಸಭೆ
ಮುಂಬೈ, ಏಪ್ರಿಲ್ 26; ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ ಬಂಧನದ ಬಗ್ಗೆ 24 ಗಂಟೆಗಳಲ್ಲಿ ವರದಿ ಕೊಡಿ ಎಂದು ಲೋಕಸಭೆ ಸಚಿವಾಲಯ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಶನಿವಾರ ಮುಂಬೈ ಪೊಲೀಸರು ಸಂಸದೆ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್ಗೆ ಪೊಲೀಸರು ನೋಟಿಸ್ ನೀಡಿದ್ದರು.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ದಂಪತಿಗಳು ಹನುಮಾನ್ ಚಾಲೀಸಾ ಪಠಿಸುವ ತೀರ್ಮಾನದಿಂದ ಹಿಂದೆ ಸರಿದಿದ್ದೇವೆ ಎಂದು ಹೇಳಿದ್ದರು. ಆದರೆ ಅಂದು ರಾತ್ರಿ ದಂಪತಿಗಳ ಬಂಧನವಾಗಿತ್ತು. ಭಾನುವಾರ ನ್ಯಾಯಾಲಯ ಇಬ್ಬರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಗೆ ಆದೇಶ ಹೊರಡಿಸಿದೆ.

ಲೋಕಸಭೆ ಸಚಿವಾಲಯ ಮಹಾರಾಷ್ಟ್ರ ಸರ್ಕಾರಕ್ಕೆ ಇ-ಮೇಲ್ ಮೂಲಕ ಪತ್ರವೊಂದನ್ನು ಬರೆದಿದೆ. ನವನೀತ್ ಕೌರ್ ರಾಣಾ ಬಂಧನದ ಬಗ್ಗೆ 24 ಗಂಟೆಯಲ್ಲಿ ವಿವರವಾದ ವರದಿ ನೀಡಬೇಕು ಎಂದು ಸೂಚನೆ ನೀಡಿದೆ.
ಸೋಮವಾರ ನವನೀತ್ ಕೌರ್ ರಾಣಾ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಪತ್ರವೊಂದನ್ನು ಬರೆದಿದ್ದರು. ಶಾಂತಿ ಸುವ್ಯವಸ್ಥೆಕ್ಕೆ ಧಕ್ಕೆ ತರುವ ಕೆಲವವನ್ನು ತಾವು ಮಾಡಿಲ್ಲ ಎಂದು ವಿವರಣೆ ನೀಡಿದ್ದರು. ಈ ಪತ್ರದ ಬಳಿಕ ಸಚಿವಾಲಯ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ದಂಪತಿಗಳು ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ.












Click it and Unblock the Notifications