ಘಾಯ್ ಮತ್ತು ಬರಿಸಿ ರೇಪ್ ಮಾಡಿದರು : ಮಹಿಳೆಯ ಭಯಾನಕ ಕಥೆ
ಮುಂಬೈ, ಅಕ್ಟೋಬರ್ 12 : ಕಾಲಿಚರಣ್, ಹೀರೋ, ಮೇರಿ ಜಂಗ್, ಕರ್ಮಾ, ರಾಮ್ ಲಖನ್, ಸೌದಾಗರ್, ಪರದೇಸ್, ತಾಲ್ ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿಂದಿ ಚಿತ್ರರಂಗದ 'ಶೋ ಮ್ಯಾನ್' ಎಂದೇ ಖ್ಯಾತಿ ಗಳಿಸಿರುವ ಸುಭಾಷ್ ಘಾಯ್ ಅವರನ್ನು ಈಗ 'ಖಳನಾಯಕ' ಸ್ಥಾನದಲ್ಲಿ ನಿಲ್ಲಿಸಲಾಗಿದೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕ ಖ್ಯಾತನಾಮರು, ತಮ್ಮ ಘನತೆ ಗೌರವಗಳನ್ನೆಲ್ಲ ಮಣ್ಣುಪಾಲು ಮಾಡಿಕೊಂಡು ಹೇಗೆ, ದುರ್ಬಲ ಮಹಿಳೆಯರನ್ನು ತಮ್ಮ ಕಾಮಕ್ಕೆ ಬಳಸಿಕೊಂಡರು ಎಂಬ ಕಥೆಗಳು ಪುಂಖಾನುಪುಂಖವಾಗಿ ಸಾಮಾಜಿಕ ತಾಣದಲ್ಲಿ ಹರಿದುಬರುತ್ತಿವೆ. #MeToo ಎಂಬ ಅಭಿಯಾನದಿಂದಾಗಿ ಈ ಪುರುಷರ 'ಪೌರುಷ'ವನ್ನು ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಬಯಲು ಮಾಡುತ್ತಿದ್ದಾರೆ.
ಇದೀಗ #ಮಿಟೂ ಕಟಕಟೆಯಲ್ಲಿ ನಿಂತಿರುವವರು ದಿ ಶೋ ಮ್ಯಾನ್ ಸುಭಾಷ್ ಘಾಯ್. ಈಗ 73 ವರ್ಷದವರಾಗಿರುವ ಸುಭಾಷ್ ಅವರು, ತಮ್ಮ ದೌರ್ಬಲ್ಯವನ್ನೇ ಹೇಗೆ ದುರ್ಬಳಸಿಕೊಂಡು ತಮಗೆ ಮತ್ತು ಬರಿಸುವ ಪೇಯ ಕುಡಿಸಿದ್ದಲ್ಲದೆ, ತಮ್ನ ಮೇಲೆ ಅತ್ಯಾಚಾರ ಹೇಗೆ ಎಸಗಿದರು ಎಂಬ ದಾರುಣ ಕಥಾನಕವನ್ನು ನತದೃಷ್ಟ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಆ ಕಥೆಯನ್ನು ಮಮತಾ ಕುಕ್ರೇಜಾ ಎಂಬ ಬರಹಗಾರ್ತಿ, ಕವಯಿತ್ರಿ, ಮಹಿಳಾ ಹೋರಾಟಗಾರ್ತಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿ, ಸುಭಾಷ್ ಘಾಯ್ ಅವರ ಕಳಂಕಿತ ಚರಿತ್ರೆಯನ್ನು ಬಿಡಿಸಿಟ್ಟಿದ್ದಾರೆ.
ತಮ್ಮ ದಾರುಣ ಕಥೆಯನ್ನು ಹೇಳಿಕೊಂಡಿರುವ ಮಹಿಳೆ ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ. ಟ್ವಿಟ್ಟರ್ ಮೂಲಕ ಅವರು ಹೇಳಿಕೊಂಡಿರುವ ಭಾಯಾನಕ ಕಥಾನಕ ಕೆಳಗಿನಂತಿದೆ.
|
ಸ್ವರ್ಗಕ್ಕೇ ಏಣಿ ಹಾಕಿದ ಹಾಗೆ
ಮುಂಬೈನವರಲ್ಲದ ಆ ಮಹಿಳೆ ಹಿಂದಿ ಚಿತ್ರರಂಗದಲ್ಲಿ ಭವಿಷ್ಯ ಅರಸಿಕೊಂಡು ಬಂದಿದ್ದರು. ಸುಭಾಷ್ ಘಾಯ್ ಜೊತೆ ಕೆಲಸ ಮಾಡುವುದೆಂದರೆ ಸ್ವರ್ಗಕ್ಕೇ ಏಣಿ ಹಾಕಿದ ಹಾಗೆ ಎಂದು ಅಂದುಕೊಂಡಿದ್ದರು. ಅವರ ಕಲಿಯುವ ಆಸಕ್ತಿಯನ್ನು ಗಮನಿಸಿದ ಸುಭಾಷ್ ಅವರನ್ನು ಮ್ಯೂಸಿಕ್ ರೆಕಾರ್ಡಿಂಗ್ ಇದ್ದಾಗ ಕರೆದುಕೊಂಡು ಹೋಗುತ್ತಿದ್ದರು. ಹೆಚ್ಚಾಗಿ ಪುರುಷರೇ ತುಂಬಿರುತ್ತಿದ್ದ ರೆಕಾರ್ಡಿಂಗ್ ರೂಂನಲ್ಲಿ ತಡರಾತ್ರಿಯವರೆಗೆ ಆ ಮಹಿಳೆಯನ್ನು ಸುಭಾಷ್ ಘಾಯ್ ಇರಿಸಿಕೊಂಡಿರುತ್ತಿದ್ದರು. ರೆಕಾರ್ಡಿಂಗ್ ಮುಗಿದ ನಂತರ ತಮ್ಮ ಕಾರಿನಲ್ಲಿ ಡ್ರಾಪ್ ಮಾಡುತ್ತಿದ್ದರು. ಇದು ಸುಮಾರು ಬಾರಿ ಹೀಗೆಯೇ ನಡೆದಿದೆ. ಒಂದು ರಾತ್ರಿ ಅವರನ್ನು ಡ್ರಾಪ್ ಮಾಡುವಾಗ, ಮಹಿಳೆಯ ತೊಡೆಯ ಮೇಲೆ ಕೈಹಾಕಿದ ಸುಭಾಷ್ ಘಾಯ್, ನಂತರ ಅವರನ್ನು ಬಿಗಿಯಾಗಿ ತಬ್ಬಿಕೊಂಡು 'ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಿಯಾ' ಎಂದು ಪ್ರೋತ್ಸಾಹಿಸಿದರು. ಸ್ವಲ್ಪ ಆಘಾತವಾದರೂ ಇದು ಸಾಮಾನ್ಯ ಎಂದುಕೊಂಡು ಮಹಿಳೆ ಸುಮ್ಮನಾಗಿದ್ದಾರೆ.
|
ಫ್ಲಾಟೊಂದಕ್ಕೆ ಕರೆದುಕೊಂಡು ಹೋದ ಘಾಯ್
ಅಷ್ಟರಲ್ಲಿ ಹುಲಿ ರಕ್ತದ ರುಚಿ ಕಂಡುಬಿಟ್ಟಿದೆ. ನಾನು ನಿನ್ನನ್ನು ಸ್ಕ್ರಿಪ್ಟ್ ಸೆಷನ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಒಂದು ಫ್ಲಾಟ್ ಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಅದನ್ನು ಅವರು 'ಥಿಂಕ್ ಪ್ಯಾಡ್' ಎಂದು ಕರೆಯುತ್ತಿದ್ದರಂತೆ. ಆದರೆ, ಆ ಫ್ಲಾಟ್ ನಲ್ಲಿ ಅವರು ಪತ್ನಿಯೊಂದಿಗೆ ಇರುತ್ತಿರಲಿಲ್ಲ. ಅಲ್ಲಿ ಇತರ ಮಹಿಳೆಯರೂ ಸ್ಕ್ರಿಪ್ಟ್ ಸೆಷನ್ ನಲ್ಲಿ ಇರುತ್ತಾರೆಂದರೆ ಯಾರೂ ಇರಲಿಲ್ಲ. ಯಾಕೋ ಎಲ್ಲವೂ ಸರಿಯಿಲ್ಲ ಎಂಬ ಸುಳಿವು ಮಹಿಳೆಗೆ ಸಿಕ್ಕಿದೆ. ಆದರೆ, ತಾನಿನ್ನೂ ಕಲಿಯುತ್ತಿರುವವಳು, ಏಕಾಂಗಿಯಾಗಿರುವ ತಾನು ದುಡಿದು ಹಣಗಳಿಸಿ ಜೀವನವನ್ನು ಹೊರೆದುಕೊಳ್ಳಬೇಕು ಎಂದು ಸುಮ್ಮನಾಗಿದ್ದಾರೆ. ಅಷ್ಟರಲ್ಲಿ ಮತ್ತೊಂದು ನಾಟಕದ ಅನಾವರಣವಾಗಲು ಆರಂಭಿಸಿದೆ.

ಏನಾಗುತ್ತಿದೆ ಎಂದು ಅರಿಯುವ ಮೊದಲೇ ಮುತ್ತು
ಮಹಿಳೆಯ ಪಕ್ಕ ಕುಳಿತ ಸುಭಾಷ್, ತನ್ನನ್ನು ಸಿನೆಮಾ ರಂಗದಲ್ಲಿ ಹೇಗೆ ಅಪಾರ್ಥ ಮಾಡಿಕೊಂಡಿದ್ದಾರೆ, ಹೇಗೆ ತನ್ನನ್ನು ದೂರ ಮಾಡಿದ್ದಾರೆ ಎಂದೆಲ್ಲ ರೀಲು ಬಿಡುತ್ತ, ಮಹಿಳೆಯ ತೊಡೆಯ ಮೇಲೆ ತಲೆಯಿಟ್ಟು ಕಣ್ಣೀರು ಸುರಿಸಿದ್ದಾರೆ. ಇದು ನಿಜವಿರಬಹುದು ಎಂದು ಮಹಿಳೆ ತಿಳಿಯುವಷ್ಟರಲ್ಲಿ ಮುತ್ತು ಕೊಟ್ಟಿದ್ದಾರೆ ಸುಭಾಷ್. ಬೇರೆ ಕೆಲಸವಿಲ್ಲ, ಹಣಕಾಸಿನ ಭದ್ರತೆಯಿಲ್ಲ ಎಂಬುದನ್ನು ಅರಿತಿದ್ದ ಮಹಿಳೆ ಇದನ್ನೆಲ್ಲ ಸಹಿಸಿಕೊಂಡಿದ್ದಾರೆ. ನನ್ನ ಹಣೆಬರಹವೇ ಇಷ್ಟು ಎಂದು ಅಂದುಕೊಳ್ಳುವಾಗ ಮತ್ತೊಂದು ಕರಾಳರಾತ್ರಿ ಅವರಿಗಾಗಿ ಕಾಯುತ್ತಿತ್ತು, ಹುಲಿ ಬೇಟೆಗಾಗಿ ಹೊಂಚು ಹಾಕಿ ಕುಳಿತಿತ್ತು.

ಮನೆಗೆ ಬದಲು ಹೋಟೆಲಿಗೆ
ಮತ್ತೊಂದು ಮ್ಯೂಸಿಕ್ ರೆಕಾರ್ಡಿಂಗ್ ಸೆಷನ್ ಮುಗಿದಿದೆ. ಇಬ್ಬರ ಸವಾರಿ ಕಾರಿನಲ್ಲಿ ಹೊರಟಿದೆ. ನಿರ್ದೇಶಕರು ತನ್ನನ್ನು ಎಂದಿನಂತೆ ಮನೆಗೆ ಡ್ರಾಪ್ ಮಾಡುತ್ತಾರೆ ಎಂದು ಮಹಿಳೆ ಅಂದುಕೊಂಡಿದ್ದಾರೆ. ಆದರೆ, ಅಲ್ಲಿ ಆಗಿದ್ದೇ ಬೇರೆ. ಅವರ ಡ್ರೈವರ್ ಅವರಿಗೆ ಇಷ್ಟವಾದ ವಿಸ್ಕಿಯನ್ನು ಯಾವಾಗಲೂ ಕಾರಿನಲ್ಲಿ ತುಂಬಿಸಿಟ್ಟಿರುತ್ತಿದ್ದ. ತಾವು ಏರಿಸಿದ್ದಲ್ಲದೆ, ಮಹಿಳೆಗೂ ಬಲವಂತವಾಗಿ ಕುಡಿಸಿದ್ದಾರೆ. ಆದರೆ, ಮಹಿಳೆಗೆ ಕುಡಿಸಿದ್ದ ವಿಸ್ಕಿಯಲ್ಲಿ ಮತ್ತು ಬರುವ ವಸ್ತುವನ್ನು ಸೇರಿಸಿದ್ದಾರೆ. ನಶೆಯಲ್ಲಿ ಜಗತ್ತನ್ನೇ ಮರೆತಿದ್ದ ಮಹಿಳೆಯನ್ನು ಮನೆಗೆ ಬಿಡುವ ಬದಲು, ಹೋಟೆಲೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗಾಗಿ ಒಂದು ಸೂಟ್ ಯಾವತ್ತೂ ಕಾದಿರುತ್ತಿತ್ತು. ಅಲ್ಲಿ ಆಗ ನಡೆದ ಘಟನೆಯನ್ನು ಮಹಿಳೆ ಈ ಜೀವನಮಾನದಲ್ಲೇ ಮರೆಯುವುದಿಲ್ಲ. (ಚಿತ್ರದಲ್ಲಿರುವವರು ಈ ಕಥೆಯನ್ನು ಪ್ರಕಟಿಸಿದ ಲೇಖಕಿ ಮಹಿಮಾ ಕುಕ್ರೇಜಾ)

ಜಿಗರಿಯ ಮೇಲೆರಗಿದ ಹುಲಿ
ತಮ್ಮ ಹಿಡಿತದಲ್ಲೇ ಇರದಿದ್ದ ಮಹಿಳೆಯ ಜೀನ್ಸ್ ಪ್ಯಾಂಟನ್ನು ಕಳಚಿದ ಸುಭಾಷ್ ಘಾಯ್ ಅವರು, ಜಿಗರಿಯ ಮೇಲೆರಗಿದ ಹುಲಿಯಂತೆ ಎಗರಿದ್ದಾರೆ. ಮಹಿಳೆ ಕಿರುಚಿಕೊಳ್ಳಲು ಯತ್ನಿಸಿದರೂ ಅವರ ಬಾಯಿ ಮುಚ್ಚಿದ್ದಾರೆ. ಶಕ್ತಿಯೆಲ್ಲ ಬಸಿದುಹೋದಂತಿದ್ದ ಮಹಿಳೆ ಕಣ್ಣೀರು ಸುರಿಸುತ್ತಲೇ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡಿದ್ದಾರೆ. ಮರುದಿನ ಬೆಳಿಗ್ಗೆ ಸೂರ್ಯನ ಕಿರಣ ಬಿದ್ದಾಗ ಮೈಮೇಲೆ ಬಟ್ಟೆಯಿರಲಿಲ್ಲ. ತಮ್ಮ ಸ್ಥಿತಿಯನ್ನು ನೋಡಿ ಮಹಿಳೆ ಅಲ್ಲಿಯೇ ವಾಂತಿ ಮಾಡಿಕೊಂಡಿದ್ದಾರೆ. ಅವರನ್ನು 'ಖಳನಾಯಕ' ಚಿತ್ರದ ನಿರ್ದೇಶಕ ಮನೆಗೆ ಬಿಟ್ಟಿದ್ದಾರೆ. ನಂತರ ನೀನು ಕೆಲಸ ಬಿಟ್ಟರೆ ಸಂಬಳವೂ ಸಿಗುವುದಿಲ್ಲ ಎಂಬ ಧಮ್ಕಿಯನ್ನೂ ಹಾಕಿದ್ದಾರೆ. ಸಂಬಳಕ್ಕಿಂತ ಮಾನ ಮುಖ್ಯ ಅಂತ ಮಹಿಳೆ ರಾಜೀನಾಮೆ ಬಿಸಾಕಿದ್ದಾರೆ.
|
ಆರೋಪಗಳಿಗೆ ಸುಭಾಷ್ ಘಾಯ್ ಸ್ಪಷ್ಟನೆ
ತಮ್ಮ ಮೇಲೆ ಮಾಡಲಾಗಿರುವ ಅತ್ಯಾಚಾರದ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸುಭಾಷ್ ಘಾಯ್ ಅವರು, ನನಗೆ ತಿಳಿದಿರುವ ಸತ್ಯವೇನೆಂದರೆ, ಎಲ್ಲ ಆರೋಪಗಳು ಸುಳ್ಳು. ನಾನು ಯಾವತ್ತಿದ್ದರೂ ಮಹಿಳೆಯನ್ನು ಕೆಲಸದಲ್ಲಾಗಲಿ, ವೈಯಕ್ತಿಕ ಜೀವನದಲ್ಲಾಗಲಿ ತುಂಬಾ ಗೌರವಿಸಿದ್ದೇನೆ. ಈರೀತಿ ಆರೋಪ ಹೊರಿಸುವುದು ಮತ್ತು ಸತ್ಯದ ಅಂಶವೂ ಇಲ್ಲದ ಇಂಥ ಏನೇನೋ ಕಥೆ ಕಟ್ಟಿ ತಮಗೆ ಗೊತ್ತಿರುವವರ ಗೌರವಕ್ಕೆ ಮಸಿ ಬಳಿಯುವುದು ಫ್ಯಾಷನ್ ಆಗಿದೆ. ಅವರಿಗೆ ಆರೀತಿ ಅನ್ಯಾಯ ಆಗಿದ್ದರೆ ಕೋರ್ಟಿಗೆ ಹೋಗಿ ಪ್ರೂವ್ ಮಾಡಬಹುದಿತ್ತು. ಆರೋಪವನ್ನು ಸಾಬೀತುಪಡಿಸದಿದ್ದರೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸುಭಾಷ್ ಘಾಯ್ ಹೇಳಿಕೆ ನೀಡಿದ್ದಾರೆ. ಸತ್ಯಾಂಶ ಏನೆಂದು ಹೊರಬರಲಿ.












Click it and Unblock the Notifications