ಮೈತ್ರಿ ಸರ್ಕಾರ ಉರುಳಿಸುವುದಿಲ್ಲ, ಇನ್ಮುಂದೆ ಗೊತ್ತಿಲ್ಲ: ಶಿವಸೇನೆ
ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಬಿಜೆಪಿ ಜತೆಗಿನ ಮೈತ್ರಿ ಭವಿಷ್ಯ ಮತ್ತೆ ಡೋಲಾಯಮಾನವಾಗಿದೆ. ಆದರೆ, ಹಾಲಿ ಮೈತ್ರಿ ಸರ್ಕಾರ ಉರುಳಿಸುವುದಿಲ್ಲ, ಇನ್ಮುಂದೆ ಮೈತ್ರಿ ಸಾಧ್ಯತೆ ಇಲ್ಲ ಎಂದು ಶಿವಸೇನಾ ಹೇಳಿದೆ.
ಮುಂಬೈ ಜನವರಿ 27: ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಬಿಜೆಪಿ ಜತೆಗಿನ ಮೈತ್ರಿ ಭವಿಷ್ಯ ಮತ್ತೆ ಡೋಲಾಯಮಾನವಾಗಿದೆ. ಆದರೆ, ಹಾಲಿ ಮೈತ್ರಿ ಸರ್ಕಾರ ಉರುಳಿಸುವುದಿಲ್ಲ, ಇನ್ಮುಂದೆ ಮೈತ್ರಿ ಸಾಧ್ಯತೆ ಇಲ್ಲ ಎಂದು ಶಿವಸೇನಾ ಹೇಳಿದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಶಿವಸೇನೆ, ಈಗ ಬಿಜೆಪಿ ವಿರುದ್ಧ ಗೂಂಡಾಗಿರಿ ಆರೋಪ ಹೊರೆಸಿ ಮೈತ್ರಿ ಕಡಿತಕ್ಕೆ ಮುಂದಾಗಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸಲು ಶೀವಸೇನೆ ನಿರ್ಧರಿಸಿದೆ.

ಬಿಜೆಪಿ ಜತೆಗಿನ ಮೈತ್ರಿ ಭವಿಷ್ಯದ ಕಥೆ ಏನು? ಸರ್ಕಾರ ಏನಾದರೂ ಉರುಳಿ ಬೀಳುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಸೇನೆ ಹಿರಿಯ ನಾಯಕರೊಬ್ಬರು, ದೇವೇಂದ್ರ ಫಡ್ನವೀಸ್ ಸರ್ಕಾರದ ಸ್ಥಿರತೆಗೆ ಭಂಗ ತರುವುದಿಲ್ಲ ಎಂದಿದ್ದಾರೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿ, ಬಿಜೆಪಿ ಜತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.
ಬಿಜೆಪಿಯಲ್ಲಿ ಹಲವು ಗೂಂಡಾಗಳಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾರೂ ಗೂಂಡಾಗಳಿಲ್ಲ. ನಾವು ಸೈನಿಕರಂತೆ ಕೆಲಸ ಮಾಡುತ್ತಿದ್ದೇವೆ. ಈ ಸೈನಿಕರನ್ನು ಎದುರಿಸಲಾಗದೇ ಬಿಜೆಪಿ ಗೂಂಡಾಗಳನ್ನು ಬಾಡಿಗೆಗೆ ಪಡೆದುಕೊಂಡಿದೆ ಎಂದಿದ್ದರು.
ಇದಕ್ಕೆ ಪೂರಕವಾಗಿ ಥಾಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಮುಂಬೈ ಪಾಲಿಕೆ ಚುನಾವಣೆಗೆ ಫೆ. 21ರಂದು ಮತದಾನ ನಡೆಯಲಿದ್ದು, 23ಕ್ಕೆ ಫಲಿತಾಂಶ ಹೊರಬೀಳಲಿದೆ.












Click it and Unblock the Notifications