ಮುಂಬೈನಲ್ಲಿ ಮತ್ತೆರಡು ಓಮಿಕ್ರಾನ್ ಪ್ರಕರಣಗಳು ಪತ್ತೆ: ಒಟ್ಟು 23 ಮಂದಿಗೆ ಸೋಂಕು
ಮುಂಬೈ, ಡಿಸೆಂಬರ್ 06: ಮುಂಬೈನಲ್ಲಿ ಮತ್ತೆರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳು 23ಕ್ಕೇರಿದೆ.
ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಓಮಿಕ್ರಾನ್ ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತದೆ. ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಹೇಳಲಾಗುತ್ತಿದೆ.

ಇದರ ವಿರುದ್ಧ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಲಾಗುತ್ತಿದೆ. ಇದುವರೆಗೆ ಓಮಿಕ್ರಾನ್ನಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಇವರಿಬ್ಬರಲ್ಲಿ ಒಬ್ಬರು ಅಮೆರಿಕದಿಂದ ಹಾಗೂ ಮತ್ತೊಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದಾರೆ. ಇಬ್ಬರೂ ಫೈಜರ್ ಕೋವಿಡ್ ಲಸಿಕೆ ಪಡೆದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ. ಆದರೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಓಮಿಕ್ರಾನ್ ಬಳಿಕ 38 ರಾಷ್ಟ್ರಗಳಿಗೆ ಹರಡಿದೆ. ಡಿಸೆಂಬರ್ 2 ರಂದು ಭಾರತದ ಮೊದಲೆರಡು ಕೇಸ್ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಇದೀಗ ಮಹಾರಾಷ್ಟ್ರದಲ್ಲಿ 10, ರಾಜಸ್ಥಾನದಲ್ಲಿ 9, ಗುಜರಾತ್ನಲ್ಲಿ 1 ಹಾಗೂ ದೆಹಲಿಯಲ್ಲಿ 1 ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 23 ಮಂದಿಗೆ ಅಂಟಿದಂತಾಗಿದೆ.
ಕೊರೊನಾ ವೈರಸ್ನ ಎರಡನೇ ಅಲೆಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದ ಭಾರತ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಸೋಂಕು ಒಮಿಕ್ರಾನ್ ಭಯ ಶುರುವಾಗಿದ್ದು, ದೇಶದಲ್ಲಿ ಈಗಾಗಲೇ 23 ಪ್ರಕರಣ ದಾಖಲಾಗಿವೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮುಖ್ಯಸ್ಥ ಡಾ. ಜೆಎ ಜಯಲಾಲ್ ಮಾತನಾಡಿದ್ದು, ಹೊಸ ರೂಪಾಂತರಿಯಿಂದಲೇ ಭಾರತದಲ್ಲಿ ಕೋವಿಡ್ 3ನೇ ಅಲೆ ಲಗ್ಗೆ ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಓಮಿಕ್ರಾನ್ನಿಂದ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ತೊಂದರೆ ಅನುಭವಿಸುತ್ತಿದ್ದು, ನಮ್ಮ ದೇಶದಲ್ಲೂ ದಿನದಿಂದ ದಿನಕ್ಕೆ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಅದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿವೆ. ಇದೀಗ ಜನರು ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಈಗಾಗಲೇ 23 ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಕೋವಿಡ್-19ರ ಡೆಲ್ಟಾ ರೂಪಾಂತರಕ್ಕಿಂತಲೂ ಓಮಿಕ್ರಾನ್ ವೇಗವಾಗಿ ಹರಡಲಿದೆ ಎಂಬ ಎಚ್ಚರಿಕೆ ನೀಡಿದರು. ಹೊಸ ರೂಪಾಂತರ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನುಂಟು ಮಾಡುವ ಕಾರಣ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅದಷ್ಟು ಬೇಗ ಕೋವಿಡ್-19 ಲಸಿಕೆ ನೀಡುವ ಬಗ್ಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕು ಎಂದರು.
ಭಾರತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಮತ್ತಷ್ಟು ವೇಗಗೊಳಿಸಬೇಕು ಎಂದಿರುವ ಅವರು, ಕೋವಿಡ್-19 ಎಲ್ಲ ವೈರಸ್ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅದಕ್ಕೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಮಿಕ್ರಾನ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಸಾಮೂಹಿಕ ಸಮಾರಂಭ ಹಾಗೂ ಅನಗತ್ಯ ಪ್ರವಾಸದ ಮೇಲೆ ಕಡಿವಾಣ ಹಾಕುವಂತೆ ಡಾ. ಜಯಲಾಲ್ ಸಲಹೆ ನೀಡಿದ್ದಾರೆ.












Click it and Unblock the Notifications