ಮಹಾರಾಷ್ಟ್ರದಲ್ಲಿ ಭಾರೀ ಮಳೆ; 112 ಸಾವು, 99 ಜನರು ನಾಪತ್ತೆ
ಮುಂಬೈ, ಜುಲೈ 25; ಮಹಾರಾಷ್ಟ್ರದಲ್ಲಿ ನೈಋತ್ಯ ಮುಂಗಾರು ಮಳೆ ಅಪಾರವಾದ ಹಾನಿಯನ್ನು ಮಾಡಿದೆ. ಇದುವರೆಗೂ 112 ಜನರು ಮೃತಪಟ್ಟಿದ್ದು, 99 ಜನರು ನಾಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದ ಪರಿಹಾರ ಮತ್ತು ಪುನರ್ವಸತಿ ಇಲಾಖೆ ಶನಿವಾರ ಈ ಕುರಿತು ಮಾಹಿತಿ ನೀಡಿದೆ. ಶನಿವಾರ ರಾತ್ರಿಯ ಅಂಕಿ ಸಂಖ್ಯೆಯಂತೆ 1.35 ಲಕ್ಷ ಜನರನ್ನು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಜುಲೈ 24ರ ರಾತ್ರಿ 9.30ರ ಮಾಹಿತಿಯಂತೆ 112 ಜನರು ಮೃತಪಟ್ಟಿದ್ದಾರೆ. 99 ಜನರು ನಾಪತ್ತೆಯಾಗಿದ್ದು, 53 ಜನರು ಗಾಯಗೊಂಡಿದ್ದಾರೆ. 3221 ಪ್ರಾಣಿಗಳು ಮೃತಪಟ್ಟಿವೆ.

ಸಾಂಗ್ಲಿಯಲ್ಲಿ ಮಳೆ ನೀರು ರಸ್ತೆ, ಹೊಲಗಳಿಗೆ ನುಗ್ಗಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸ್ಥಳೀಯ ಆಡಳಿತ ಪರಿಸ್ಥಿತಿಯ ಮೇಲೆ ನಿಗಾವಹಿಸಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ರಕ್ಷಣೆ ಮಾಡುವ ಕಾರ್ಯವೂ ನಡೆಯುತ್ತಿದೆ.
ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ 26 ಎನ್ಡಿಆರ್ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಥಾಣೆ, ರತ್ನಗಿರಿ, ಫಾಲ್ಗಾಟ್, ರಾಯಘಡ್, ಸಾಂಗ್ಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್ಡಿಆರ್ಎಫ್ ಪಡೆ ಭಾರತೀಯ ಹವಾಮಾನ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಯಾವ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂಬ ವರದಿಯನ್ನು ಪಡೆದುಕೊಳ್ಳುತ್ತಿದೆ.
ಕೊಲ್ಹಾಪುರ, ಸಾಂಗ್ಲಿ, ಸತಾರಾ ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಮುಂದುವರೆದಿದೆ. ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ನಡುವಿನ ಸಂಚಾರಕ್ಕೆ ಅಡ್ಡಿಯಾಗಿದೆ.
ಸತಾರಾ ಜಿಲ್ಲೆಯ ಅಂಬೇಘರ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿತ್ತು. ಈ ಪ್ರದೇಶದಲ್ಲಿ 13 ಶವಗಳು ಸಿಕ್ಕಿವೆ. ರಾಯಗಢದಲ್ಲಿ 47, ಮುಂಬೈನಲ್ಲಿ 4, ರತ್ನಗಿರಿಯಲ್ಲಿ 11, ಕೊಲ್ಹಾಪುರದಲ್ಲಿ 5 ಜನರು ಮೃತಪಟ್ಟಿದ್ದಾರೆ.












Click it and Unblock the Notifications