ಹೊತ್ತಿ ಉರಿದ ಗಲಭೆಯ ನಂತರ ಮುಂಬೈ ಸಹಜ ಸ್ಥಿತಿಗೆ!
ಮುಂಬೈ, ಜನವರಿ 04: ಕಳೆದ ಮೂರ್ನಾಲ್ಕು ದಿನದಿಂದ ಗಲಭೆಯಿಂದ ನಲುಗಿಹೋಗಿದ್ದ ಮುಂಬೈ ಇಂದು(ಜ.4) ಸಹಜ ಸ್ಥಿತಿಗೆ ಮರಳಿದೆ. ಶಾಲೆಗಳು ತೆರದಿವೆ. ಬಸ್ಸು, ಟ್ಯಾಕ್ಸಿ, ರೈಲುಗಳು ಎಂದಿನಂತೆ ಓಡಾಡುತ್ತಿವೆ. ಎಲ್ಲೂ ಗಲಭೆಯ ವಾತಾವರಣ ಕಂಡುಬರುತ್ತಿಲ್ಲ. ಒಟ್ಟಿನಲ್ಲಿ ವಾಣಿಜ್ಯ ನಗರ ಮತ್ತೆ ತನ್ನ ಮೊದಲ ಛಾರ್ಮ್ ಪಡೆದಿದೆ.
ಭೀಮಾ ಕೊರೆಗಾಂವ್ ವಿಜಯ ದಿವಸ ಆಚರಣೆಯ ಸಂದರ್ಭದಲ್ಲಿ, ಬ್ರಿಟೀಶರ ಗೆಲುವನ್ನು ಸಂಭ್ರಮಿಸುತ್ತಿದ್ದಾರೆಂದು ಆರೋಪಿಸಿ ಕೆಲ ಬಲಪಂಥೀಯ ಸಂಘಟನೆಗಳು ದಲಿತರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕ್ರಮೇಣ ಈ ಪ್ರತಿಭಟನೆಯೇ ಗಲಭೆಯಾಗಿ ಬದಲಾಗಿತ್ತು.

ಜ.3 ರಂದು ಮಹಾರಾಷ್ಟ್ರದಾದ್ಯಂತ ಬಂದ್ ಗೆ ಕರೆನೀಡಲಾಗಿತ್ತು. ದಲಿತ ನಾಯಕ, ಡಾ.ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಈ ಬಂದ್ ಗೆ ಕರೆನೀಡಿದ್ದರು. ಇದಕ್ಕೆ ಹಲವು ದಲಿತಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಬಂದ್ ಸಂದರ್ಭದಲ್ಲಿ ಹಲವೆಡೆ ರಸ್ತೆ ತಡೆ, ರೈಲು ತಡೆ ನಡೆದವು. ಬಸ್, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಎಲ್ಲಾ ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಬಹುತೇಕ ಶಾಲೆಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲಾಗಿತ್ತು. ಆಟೋ, ಕ್ಯಾಬ್ ಗಳಿಲ್ಲದೆ ಜನ ಪರಿತಪಿಸಬೇಕಾಯ್ತು. ಆದರೆ ಇಂದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.












Click it and Unblock the Notifications