ಯಾಕೂಬ್ ಮೆಮನ್ಗೆ ಕ್ಷಮಾದಾನ ನೀಡದ ರಾಜ್ಯಪಾಲರು
ಮುಂಬೈ, ಜುಲೈ 29 : 1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಮಹಾರಾಷ್ಟ್ರದ ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಆದ್ದರಿಂದ, ಯಾಕೂಬ್ ಗಲ್ಲಿಗೇರುವುದು ಖಚಿತವಾಗಿದೆ.
ಮಹಾರಾಷ್ಟ್ರ ರಾಜ್ಯಪಾಲರ ಮುಂದೆ ತನ್ನ ಕ್ಷಮಾದಾನ ಅರ್ಜಿ ಬಾಕಿ ಇದೆ. ಆದ್ದರಿಂದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಯಾಕೂಬ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಕೋರ್ಟ್ ಬುಧವಾರ ಆ ಅರ್ಜಿಯನ್ನು ವಜಾಗೊಳಿಸಿದೆ. [ಯಾಕೂಬ್ ಅರ್ಜಿ ತಿರಸ್ಕರಿಸಿದ ಕೋರ್ಟ್]

ಯಾಕೂಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಬುಧವಾರ ತಿರಸ್ಕರಿಸಿದ್ದಾರೆ. ಇದರಿಂದ ಯಾಕೂಬ್ನನ್ನು ಗಲ್ಲಿಗೇರಿಸಲು ಇದ್ದ ಅಚಡಣೆಗಳು ನಿವಾರಣೆಯಾಗಿವೆ. ಜುಲೈ 30ರ ಗುರುವಾರ ಬೆಳಗ್ಗೆ ಯಾಕೂಬ್ ಗಲ್ಲಿಗೇರಿಸಲು ನಾಗ್ಪುರ ಜೈಲಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. [ಗಲ್ಲು ಶಿಕ್ಷೆ ದಿನ ಯಾಕೂಬ್ ದಿನಚರಿ]
ಒಂದು ಅರ್ಜಿ ಬಾಕಿ ಇದೆ : ಬುಧವಾರ ಬೆಳಗ್ಗೆ ತನಗೆ ಕ್ಷಮಾದಾನ ನೀಡಬೇಕು ಎಂದು ಯಾಕೂಬ್ ಮೆಮನ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ. ಹಿಂದೆ ರಾಷ್ಟ್ರಪತಿಗಳು ಯಾಕೂಬ್ ಅರ್ಜಿಯನ್ನು ತಿರಸ್ಕರಿಸಿದ್ದರು. ಇಂದು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾನೆ.
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಕೂಬ್ ಸೇರಿದಂತೆ 10 ಮಂದಿಗೆ ಮುಂಬೈ ವಿಶೇಷ ಟಾಡಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಾಕೂಬ್ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ 2015ರ ಏಪ್ರಿಲ್ನಲ್ಲಿ ತಿರಸ್ಕರಿಸಿತ್ತು.
1993ರ ಮಾರ್ಚ್ 12ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸ್ಫೋಟದ ತನಿಖೆ ನಡೆಸಿದ ಸಿಬಿಐ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಯಾಕೂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದಾನೆ.












Click it and Unblock the Notifications