ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ; ಮೋದಿಗೆ ಅಜಿತ್ ಪವಾರ್ ಪತ್ರ

ಮುಂಬೈ, ಆಗಸ್ಟ್ 11: ಕರ್ನಾಟಕ-ಮಹಾರಾಷ್ಟ್ರ ಗಡಿ ವಾದದ ಚರ್ಚೆ ಬುಧವಾರ ಮತ್ತೆ ಮುನ್ನೆಲೆಗೆ ಬಂದಿದೆ. ದೀರ್ಘಕಾಲದಿಂದ ಉಳಿದುಕೊಂಡಿರುವ ಮಹಾರಾಷ್ಟ್ರ- ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದವನ್ನು ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪತ್ರ ಬರೆದಿದ್ದಾರೆ.

ಆಗಸ್ಟ್ 9ರಂದು ಪ್ರಧಾನಿ ಮೋದಿಗೆ ಅಜಿತ್ ಪವಾರ್ ಪತ್ರ ಬರೆದಿದ್ದು, ಕರ್ನಾಟಕದಲ್ಲಿ ನೆಲೆಸಿರುವ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರದ ದೌರ್ಜನ್ಯವನ್ನು ತಡೆಯಲು ಹಾಗೂ ಮಹಾರಾಷ್ಟ್ರಕ್ಕೆ ಕರ್ನಾಟಕದಲ್ಲಿನ ಕೆಲವು ಪ್ರದೇಶಗಳನ್ನು ಸೇರಿಸಲು ಮುಂದಾಗುವಂತೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

"ಮಹಾರಾಷ್ಟ್ರ ರಾಜ್ಯ ರಚನೆಯಾಗಿ, ಮುಂಬೈ ರಾಜಧಾನಿಯಾಗಿ 60 ವರ್ಷಗಳಿಗಿಂತ ಹೆಚ್ಚು ಕಾಲವಾಗಿದೆ. ಆದರೂ ರಾಜ್ಯಕ್ಕೆ ಸೇರಿರುವ ಬೆಳಗಾವಿ, ಕಾರವಾರ, ಬೀದರ್, ಬಾಲ್ಕಿ, ನಿಪ್ಪಾಣಿ ಹಾಗೂ ಮರಾಠಿ ಮಾತನಾಡುವ ಇತರೆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಲ್ಲ" ಎಂದು ಪವಾರ್ ಪತ್ರದಲ್ಲಿ ದೂರಿದ್ದಾರೆ.

Maharashtra DCM Ajit Pawar Seeks PM Intervention In Maharashtra-Karnataka Border Row

ಮಹಾರಾಷ್ಟ್ರದ ಜನರು ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದ, ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುವವರ ಸಮಸ್ಯೆಯನ್ನು ಇನ್ನೂ ಬಗೆಹರಿಸಿಲ್ಲ ಎಂದು ಎನ್‌ಸಿಪಿ ನಾಯಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸಂಯುಕ್ತ ಮಹಾರಾಷ್ಟ್ರ"ದ ಕನಸು ನನಸಾಗುವವರೆಗೂ ಮಹಾರಾಷ್ಟ್ರ ಸರ್ಕಾರ ಸುಮ್ಮನಿರುವುದಿಲ್ಲ. ಗಡಿಯಲ್ಲಿರುವ ನಮ್ಮ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸುವವರಿಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಕಾನೂನಿನ ಹೋರಾಟು ಮುಂದುವರೆಯಲಿದೆ. ಮಹಾರಾಷ್ಟ್ರದಲ್ಲಿ ಈ ನಿಟ್ಟಿನಲ್ಲಿ ಕೇಂದ್ರ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೂ ನಮಗಿದೆ. ಮರಾಠಿ ಜನರಿಗೆ ನ್ಯಾಯ ಒದಗಿಸಿ. ನೀವು ಈ ಕಾರ್ಯವನ್ನು ಮಾಡುತ್ತೀರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಕರ್ನಾಟಕದ ಕೆಲವು ಭಾಗಗಳಾದ ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಹಲವು ಪ್ರದೇಶಗಳು ನಮ್ಮ ರಾಜ್ಯಕ್ಕೆ ಸೇರಿವೆ ಎಂದು ಹಿಂದಿನಿಂದಲೂ ಮಹಾರಾಷ್ಟ್ರ ಹೇಳಿಕೊಳ್ಳುತ್ತಿದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುವವರಿದ್ದಾರೆ. ಹೀಗಾಗಿ ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿವೆ ಎಂಬ ವಾದ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ಬೆಳಗಾವಿ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದ ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಎಚ್ಚರಿಕೆ ಕೊಟ್ಟಿದ್ದ ಸಂಜಯ್ ರಾವತ್:
ಈಚೆಗಷ್ಟೆ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಮರಾಠಿ ಭಾಷೆ ಫಲಕ ತೆರವುಗೊಳಿಸಿ ದಾಳಿ ನಡೆಸಲಾಗಿದೆ. ಕನ್ನಡಪರ ಸಂಘಟನೆಗಳು ಈ ಹಲ್ಲೆಗೆ ಕಾರಣ. ಕರ್ನಾಟಕ ಸರ್ಕಾರ ಮರಾಠಿಗರ ಮೇಲೆ ದದೌರ್ಜನ್ಯ ಎಸಗುತ್ತಿದೆ ಎಂದು ಶಿವಸೇನಾ ಪಕ್ಷ ದೂರಿತ್ತು.

"ಮಹಾರಾಷ್ಟ್ರ ಈ ವಿಷಯದಲ್ಲಿ ಗಟ್ಟಿ ನಿಲುವು ತಳೆಯಬೇಕು. ಇಲ್ಲಿನ ಸರ್ವ ಪಕ್ಷ ನಿಯೋಗವು ಬೆಳಗಾವಿಗೆ ಶೀಘ್ರವೇ ಭೇಟಿ ನೀಡಿ, ಅಲ್ಲಿ ಕಷ್ಟಪಡುತ್ತಿರುವ ಮರಾಠಿ ಜನರೊಂದಿಗೆ ನಮ್ಮ ಬೆಂಬಲ, ಏಕತೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಶಿವಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳು ಬಿಜೆಪಿ ಪ್ರಾಯೋಜಿತವಾಗಿವೆ" ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದರು.

"ಮಹಾರಾಷ್ಟ್ರ-ಕರ್ನಾಟಕದ ಈ ವಿವಾದ ಭಾಷಾ ವಿವಾದ. ಇದು ಬಹು ಸಮಯದವರೆಗೂ ಮುಂದುವರೆಯಲು ಬಿಡಬಾರದು ಹಾಗೂ ಇದು ಕರ್ನಾಟಕ ಸರ್ಕಾರದ ಜವಾಬ್ದಾರಿ ಕೂಡ ಹೌದು. ಪರಿಸ್ಥಿತಿ ನಮ್ಮ ಕೈ ಮೀರಿ ಹೋದರೆ, ಶಿವಸೇನೆ, ಮಹಾರಾಷ್ಟ್ರ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ. ನಮ್ಮಿಂದ ಬರುವುದು ಅಧೀಕೃತ ಪ್ರತಿಕ್ರಿಯೆಯಾಗಿರುವುದಿಲ್ಲ, ರಾಜಕೀಯವಾಗಿರುತ್ತದೆ" ಎಂದು ಎಚ್ಚರಿಕೆ ನೀಡಿದ್ದರು.

ಇದರೊಂದಿಗೆ, ಕರ್ನಾಟಕದ ಜತೆಗಿನ ಗಡಿ ವಿವಾದವನ್ನು ಮತ್ತಷ್ಟು ಕೆದಕಲು ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು. ಇದೇ ಜನವರಿಯಲ್ಲಿ ಬೆಳಗಾವಿ, ಕಾರವಾರ, ಬೀದರ್, ಬಾಲ್ಕಿ, ಹುಮನಾಬಾದ್ ಮುಂತಾದ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ವಾದಕ್ಕೆ ಪುಷ್ಟಿ ನೀಡಲು 50 ವರ್ಷದ ಹಳೆಯ ಸಾಕ್ಷ್ಯಚಿತ್ರವನ್ನು ಉದ್ಧವ್ ಠಾಕ್ರೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿಸಿದ್ದರು. ಜೊತೆಗೆ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಮರಾಠಿ ಹೊರತು ಪಡಿಸಿ ಅನ್ಯ ಭಾಷಿಕರ ಸಮೀಕ್ಷೆಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆದೇಶಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+