ಮುಂಬೈನಲ್ಲಿ ಕೊರೊನಾವೈರಸ್ ಮೂರನೇ ಅಲೆ ಶುರು; ತಜ್ಞರು ಹೇಳುವುದೇನು?
ಮುಂಬೈ, ಡಿಸೆಂಬರ್ 30: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಶುರುವಾಯಿತಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮುಂದುವರಿದಿದೆ. ಓಮಿಕ್ರಾನ್ ರೂಪಾಂತರಿಯು ಹೊಸ ಅಲೆಗೆ ಕಾರಣವಾಯಿತೇ ಎಂಬ ಬಗ್ಗೆ ಕೊವಿಡ್-19 ಕಾರ್ಯಪಡೆ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.
ಮುಂಬೈನಲ್ಲಿ ಕೊರೊನಾವೈರಸ್ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಮಹಾರಾಷ್ಟ್ರದ ಕೊವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಶಶಾಂಕ್ ಜೋಶಿ ಹೇಳಿದ್ದಾರೆ. ಇನ್ನೊಂದು ಕಡೆಯಲ್ಲಿ ಬ್ರೀಚ್ ಕ್ಯಾಂಡಿ, ಜಸ್ಲೋಕ್, ಭಾಟಿಯಾ ಮತ್ತು ರಿಲಯನ್ಸ್ ಆಸ್ಪತ್ರೆಯ ಡಾ. ಹೇಮಂತ್ ಠಾಕೂರ್, ಭಾರತವು ಆರು ವಾರಗಳಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಮಧ್ಯೆ ಮೂರನೇ ಅಲೆಗೆ ನಾಂದಿ ಹಾಡುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸುತ್ತಿದೆ. ಈ ಕುರಿತಾದ ಹಲವು ಪ್ರಶ್ನೆಗಳಿಗೆ ಮಹಾರಾಷ್ಟ್ರದ ಕೊವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಶಶಾಂಕ್ ಜೋಶಿ ಉತ್ತರಿಸಿದ್ದಾರೆ.

ಮುಂಬೈನಲ್ಲಿ ಆರಂಭವಾಯಿತೇ ಮೂರನೇ ಅಲೆ
* ಪ್ರಶ್ನೆ: ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 2500 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದು ಆತಂಕಕ್ಕೆ ಕಾರಣವಾಗುತ್ತಿದೆಯೇ?, ಹಿಂದಿನ ಹೋಲಿಕೆಯನ್ನು ನೋಡಿದಾಗ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದನ್ನು ತೆಗೆದುಕೊಂಡು ಮಾಡುವುದೇನು?, ಈ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಗೆ ಹೊಸ ರೂಪಾಂತರಿ ಓಮಿಕ್ರಾನ್ ಕಾರಣವೇ ಅಥವಾ ಮುಂಬೈನಲ್ಲಿ ಕೊರೊನಾವೈರಸ್ ಮೂರನೇ ಅಲೆ ಶುರುವಾಗಿದೆಯೇ?.
* ಉತ್ತರ: ಇದು ಮುನ್ನೆಚ್ಚರಿಕೆ ಹಾಗೂ ಜಾಗರೂಕತೆಯನ್ನು ವಹಿಸುವ ಸಮಯವಾಗಿದ್ದು, ಯಾವುದೇ ರೀತಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಸೋಂಕಿತ ಪ್ರಕರಣಗಳ ಡಬಲಿಂಗ್ ದರ (ಎರಡರಷ್ಟು ಆಗುವ ಸಂಖ್ಯೆ) ನಾಲ್ಕು ದಿನಗಳಾಗಿದ್ದು, ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಡೆಲ್ಟಾಗಿಂತ ಓಮಿಕ್ರಾನ್ ಸೋಂಕಿತರಲ್ಲಿ ರೋಗದ ತೀವ್ರತೆ ಕಡಿಮೆಯಾಗಿರುತ್ತದೆ ಎಂಬ ವಿಶ್ವಾಸವಿದೆ. ಅಂಕಿ-ಸಂಖ್ಯೆಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ, ಆದರೆ ಎಲ್ಲರಲ್ಲೂ ಸೌಮ್ಯ ಲಕ್ಷಣಗಳು ಗೋಚರಿಸಿವೆ. ಕೊರೊನಾವೈರಸ್ ಸೋಂಕಿತರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಶೇ.80ರಷ್ಟು ಜನರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಮುಂಬೈನಲ್ಲಿ ಕೊವಿಡ್-19 ಮೂರನೇ ಅಲೆ ಶುರುವಾಗಿದೆ.

ಓಮಿಕ್ರಾನ್ ತೀವ್ರತೆ ಆರು ವಾರದಲ್ಲೇ ತಗ್ಗುವುದೇ?
ಪ್ರಶ್ನೆ: ನೀವು ಆಸ್ಪತ್ರೆಗಳಲ್ಲಿ ಏನನ್ನು ನೋಡುತ್ತಿರುವಿರಿ ಎಂಬುದನ್ನು ಅದು ದೃಢೀಕರಿಸುತ್ತದೆಯೇ?
ಉತ್ತರ: ಹೌದು. ರೋಗ ಲಕ್ಷಣಗಳೇ ಇಲ್ಲದೇ ಇರುವವರಲ್ಲಿ ಸೋಂಕು ಪತ್ತೆಯಾಗಿರುವುದು ಇದೆ. ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಸೋಂಕಿತರನ್ನು ನಾವು ನೋಡಿಲ್ಲ. ಈ ಅಲೆಯು ಬರುತ್ತದೆ, ಹಾಗೆ ಹೋಗುತ್ತದೆ. ನಾವು ಏಕೆ ಆತಂಕಗೊಳ್ಳಬೇಕು. ಇದು ಬಹಳ ವೇಗವಾಗಿ ಹರಡುತ್ತದೆ, ಆದರೆ ಸಾಮಾನ್ಯ ಶೀತ ಅಥವಾ ಜ್ವರದಂತೆ ಇರುತ್ತದೆ. ಓಮಿಕ್ರಾನ್ ಸೋಂಕಿನ ಅಲೆಯು ಈ ಹಿಂದಿನ ಡೆಲ್ಟಾ ರೂಪಾಂತರವನ್ನು ಮರೆ ಮಾಡುತ್ತದೆ. ಮುಂಬೈನಲ್ಲಿ ದಿನವೊಂದಕ್ಕೆ 10,000ಕ್ಕಿಂತ ಹೆಚ್ಚು ಓಮಿಕ್ರಾನ್ ಪ್ರಕರಣಗಳು ವರದಿಯಾಗುವ ಮಟ್ಟಕ್ಕೆ ಹೆಚ್ಚಾಗಿ ಹರಡಬಹುದು, ಆದರೆ ಅಷ್ಟೇ ವೇಗವಾಗಿ ರೋಗಿಗಳು ಗುಣಮುಖರಾಗುತ್ತಾರೆ. ಭಾರತದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ತೀವ್ರತೆಯು ಆರು ವಾರಗಳಲ್ಲಿ ಇಳಿಮುಖವಾಗುತ್ತದೆ, ಯಾವುದೇ ರೀತಿ ಆತಂಕಗೊಳ್ಳುವ ಅಗತ್ಯವಿಲ್ಲ. ವೈದ್ಯರ ಸಲಹೆಯನ್ನು ಪಾಲಿಸಿ, ಕೊವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿರಿ.

ಓಮಿಕ್ರಾನ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು?
ಪ್ರಶ್ನೆ: ನೀವು ಸಹ ಸೌಮ್ಯ ರೋಗಲಕ್ಷಣಗಳನ್ನು ನೋಡುತ್ತಿದ್ದೀರಾ? ರೋಗಲಕ್ಷಣಗಳು ಯಾವುವು?
ಉತ್ತರ: ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ಹೆಚ್ಚಿವೆ, ಆದರೆ ಅವು ಕೇವಲ ಸೌಮ್ಯವಾಗಿವೆ. ಜ್ವರ, ಗಂಟಲು ಕೆರೆತ, ಮೂಗು ಸ್ರವಿಸುವಿಕೆ, ಆಯಾಸ, ಬೆನ್ನುನೋವು ಮತ್ತು ತಲೆನೋವು ಇವುಗಳ ಓಮಿಕ್ರಾನ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಸೌಮ್ಯ ಲಕ್ಷಣಗಳಾಗಿರುತ್ತವೆ. ಅನೇಕ ಸಂದರ್ಭದಲ್ಲಿ ಓಮಿಕ್ರಾನ್ ಸೋಂಕು ತಗುಲಿದ್ದರೂ ಸಹಿತ ರುಚಿ ಮತ್ತು ವಾಸನೆಯ ನಷ್ಟದ ಅನುಭವ ಆಗಿರುವುದಿಲ್ಲ. ಇದನ್ನು ನಾವು ಸೋಂಕಿತರಲ್ಲ ಎಂದು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಅದಿನ್ನೂ ದೊಡ್ಡ ಅಪಾಯಗಳನ್ನು ಉಂಟುಮಾಡುತ್ತದೆ.

ಕೊವಿಡ್-19 ಲಸಿಕೆ ಪಡೆದರೆ ಸೋಂಕು ಅಂಟುವುದಿಲ್ಲವೇ?
ಪ್ರಶ್ನೆ: ನಿಮ್ಮ ಪ್ರತಿಕ್ರಿಯೆ ಏನು? ನೀವು ಆಶಾವಾದವನ್ನು ಹಂಚಿಕೊಳ್ಳುತ್ತೀರಾ?
ಉತ್ತರ: ಕೊರೊನಾವೈರಸ್ ಲಸಿಕೆಗಳು ರೋಗದ ತೀವ್ರತೆಯನ್ನು ತಡೆಗಟ್ಟುವ ಉದ್ದೇಶ ಹೊಂದಿವೆಯೇ ಹೊರತೂ ಸೋಂಕು ಅಂಟಿಕೊಳ್ಳದಂತೆ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ, ಜನರಲ್ಲಿ ಕೊವಿಡ್-19 ಸೋಂಕು ಪತ್ತೆಯಾದರೆ, ಅದರಲ್ಲಿ ಆಶ್ಚರ್ಯಗೊಳ್ಳುವ ಅಗತ್ಯವಿಲ್ಲ.

ದೇಶದಲ್ಲಿ ಕೊವಿಡ್-19 ಹೊಸ ದಾಖಲೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ 13,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ 268 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು, ಇದೇ ಅವಧಿಯಲ್ಲಿ 7,486 ಸೋಂಕಿತರು ಗುಣಮುಖರಾಗಿದ್ದಾರೆ. ಡಿಸೆಂಬರ್ 29ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೂ 3,42,58,778 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,80,860 ಮಂದಿ ಸೋಂಕಿನಿಂದ ಜೀವ ಬಿಟ್ಟಿದ್ದಾರೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರ ಸೋಂಕಿತರ ಸಂಖ್ಯೆಯು 961ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications