ಮಹಾ ಸರ್ಕಾರ ಪತನ ಖಚಿತ?: ಮುಖ್ಯಮಂತ್ರಿ ನಿವಾಸ ತೊರೆದ ಉದ್ಧವ್ ಠಾಕ್ರೆ
ಮುಂಬೈ, ಜೂನ್ 22: ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಕುರಿತು ಭಾವನಾತ್ಮಕ ಭಾಷಣ ಮಾಡಿದ ನಂತರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಅಧಿಕೃತ ನಿವಾಸ "ವರ್ಷ"ದಿಂದ ಸ್ವಂತ ನಿವಾಸ "ಮಾತೋಶ್ರೀ"ಗೆ ತೆರಳಿದರು.
ಉದ್ಧವ್ ಠಾಕ್ರೆ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಸದ್ಯ ಕ್ವಾರಂಟೈನ್ನಲ್ಲಿದ್ದರೂ ಕೂಡ ಶಿವಸೇನೆ ಪಕ್ಷದ ಸಂಸ್ಥಾಪಕ ಮತ್ತು ತಂದೆ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಬಲವಾಗಿ ಸಂಬಂಧ ಹೊಂದಿರುವ ಕುಟುಂಬದ ಮನೆಗೆ ತೆರಳಿರುವುದು ಮಹಾರಾಷ್ಟ್ರದಲ್ಲಿ ಮುಂದೆ ನಡೆಯಬಹುದಾದ ರಾಜಕೀಯ ಚಟುವಟಿಕೆಗಳಿಗೆ ಮುನ್ಸೂಚನೆಯಾಗಿದೆ.
ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶಿವಸೇನೆ ಮುಖಂಡ ಏಕನಾಥ್ ಶಿಂಧೆ 34 ಶಾಸಕರ ಜೊತೆ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದು ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಿವಸೇನೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳಿಗೆ ಮಾತ್ರ ಲಾಭವಾಗುತ್ತಿದೆ, ಶಿವಸೇನೆ ಪಕ್ಷದ ಉಳಿವಿಗಾಗಿ ಮತ್ತು ಶಿವಸೈನಿಕರಿಗಾಗಿ ಮೈತ್ರಿ ಸರ್ಕಾರದಿಂದ ಹೊರಬರಬೇಕಿದೆ ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಮೈತ್ರಿ ಪಕ್ಷಗಳ ವಿರುದ್ದ ಏಕನಾಥ್ ಶಿಂಧೆ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ನಿವಾಸ ತೊರೆಯುವ ಮಾತನಾಡಿದ್ದ ಠಾಕ್ರೆ
ಇದಕ್ಕೂ ಮೊದಲು ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಈ ರಾಜಕೀಯ ಬೆಳವಣಿಗೆ ದುರದೃಷ್ಟಕರ ಎಂದಿದ್ದರು. ಶಾಸಕರಿಗೆ ನಾನು ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲದಿದ್ದರೆ ನೇರವಾಗಿ ನನ್ನ ಬಳಿಯಲ್ಲಿ ಹೇಳಬಹುದಿತ್ತು, ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ ಎಂದು ಹೇಳಿದ್ದರು. ನಾನು ಬಾಳಾ ಸಾಹೇಬ್ ಠಾಕ್ರೆ ಮಗ, ಅಧಿಕಾರದ ಹಿಂದೆ ಹೋದವನಲ್ಲ" ಎಂದಿದ್ದ ಠಾಕ್ರೆ ಸಿಎಂ ಅಧಿಕೃತ ನಿವಾಸ ತೊರೆಯುವುದಾಗಿ ಹೇಳಿದ್ದರು.

ಬಂಡಾಯ ಶಾಸಕರಿಗೆ ಠಾಕ್ರೆ ಸವಾಲು
ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ ಆದರೆ ಮುಂದಿನ ಮುಖ್ಯಮಂತ್ರಿ ಶಿವಸೇನೆಯಿಂದ ಎಂದು ನನಗೆ ಭರವಸೆ ನೀಡುತ್ತೀರಾ? ಎಂದು ಬಂಡಾಯಗಾರರಿಗೆ ಪ್ರಶ್ನಿಸಿದ್ದಾರೆ.
ತನ್ನ ಬಣವನ್ನು ನಿಜವಾದ ಶಿವಸೇನೆ ಎಂದು ಬಿಂಬಿಸುತ್ತಿರುವ ಮತ್ತು ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವ ಸಿದ್ಧಾಂತವನ್ನು ಉಲ್ಲೇಖಿಸುತ್ತಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರಿಗೆ ಇದು ನೇರ ಸವಾಲಾಗಿ ಕಂಡುಬಂದಿದೆ.
ಬಂಡಾಯ ಶಾಸಕರಿಗೆ ಠಾಕ್ರೆ ಸರ್ಕಾರವನ್ನು ಉರುಳಿಸಿದರೆ ಮತ್ತು ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದರೆ ಶಿವಸೇನೆಯ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಸಿಗುವುದು ಸುಲಭವಲ್ಲ, ಇದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.

ಸಿಎಂ ಸ್ಥಾನದ ವಿಚಾರಕ್ಕೆ ಮುರಿದು ಬಿದ್ದಿದ್ದ ಮೈತ್ರಿ
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು 106 ಸ್ಥಾನಗಳಲ್ಲಿ ಜಯ ಗಳಿಸಿತ್ತು, ಶಿವ ಸೇನೆ 55 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಉದ್ದವ್ ಠಾಕ್ರೆಗೆ ಉನ್ನತ ಹುದ್ದೆಯನ್ನು ನೀಡಲು ಬಿಜೆಪಿ ನಿರಾಕರಿಸಿದ್ದರಿಂದಲೇ ದೀರ್ಘಕಾಲದ ಮಿತ್ರಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಬಿಜೆಪಿ-ಶಿವಸೇನೆ ಮೈತ್ರಿ ಮುರಿದುಬಿದ್ದಿತ್ತು.
ನಂತರ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿದ್ದ ಶಿವಸೇನಾ ಮಹಾ ವಿಕಾಸ್ ಅಘಾಡಿ (MVA) ಹೆಸರಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಸಿಎಂ ಆಗಿ ಆಯ್ಕೆಯಾಗಿದ್ದರು.

ಏಕನಾಥ್ ಶಿಂಧೆಗೆ ಮೈತ್ರಕೂಟ ಆಫರ್
ಆಡಳಿತಾರೂಢ ಮೈತ್ರಿಕೂಟದ ಇತರ ಮಿತ್ರ ಪಕ್ಷವಾದ ಶರದ್ ಪವಾರ್ ಜೊತೆಗೆ ಪಕ್ಷವು ಬಿಕ್ಕಟ್ಟನ್ನು ಕೊನೆಗೊಳಿಸುವ ಮಾರ್ಗವಾಗಿ ಏಕನಾಥ್ ಶಿಂಧೆಗೆ ಉನ್ನತ ಹುದ್ದೆ ನೀಡುವ ಆಲೋಚನೆಯನ್ನು ಮಾಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿಕೊಂಡಿವೆ.
ಬುಧವಾರ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿತ ಶಾಸಕರು ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಮತ್ತು ಡೆಪ್ಯುಟಿ ಸ್ಪೀಕರ್ಗೆ ಪತ್ರ ಬರೆಯುವ ಮೂಲಕ ತಮ್ಮ ಅವಿಶ್ವಾಸವನ್ನು ತಿಳಿಸಿದ್ದರು.
ನಾಲ್ವರು ಪಕ್ಷೇತರ ಶಾಸಕರು ಸೇರಿ 34 ಶಾಸಕರು ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕ ಎಂದು ಘೋಷಿಸಿದ್ದಾರೆ. ಬಂಡಾಯಗಾರರು ಮೈತ್ರಿ ಸರ್ಕಾರದ ಬಗ್ಗೆ ಅದರಲ್ಲೂ ಮಿತ್ರ ಪಕ್ಷಗಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಕೊಡುವ ಆಫರ್ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.












Click it and Unblock the Notifications