'ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಜೈಲಿಗೆ ಹಾಕ್ತೀವಿ'
ಮುಂಬೈ, ಏಪ್ರಿಲ್ 4: ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಎರಡು ದಿನ ಜೈಲಿಗೆ ಹಾಕುತ್ತೇವೆ ಎನ್ನುವ ಮೂಲಕ ದಲಿತ ನಾಯಕ, ಸಂಸದ ಪ್ರಕಾಶ್ ಅಂಬೇಡ್ಕರ್ ವಿವಾದ ಸೃಷ್ಟಿಸಿದ್ದಾರೆ.
ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಘಟನೆಯನ್ನು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡದೆ ಇರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ : ಬಿಜೆಪಿ ಶಾಸಕರ ದೂರು, ಎಸ್ಪಿ ಎತ್ತಂಗಡಿ ಮಾಡಿದ ಆಯೋಗ
'ಪುಲ್ವಾಮಾ ದಾಳಿಯಲ್ಲಿ ನಾವು 40 ಸೈನಿಕರನ್ನು ಕಳೆದುಕೊಂಡಿದ್ದೇವೆ. ಆದರು ಸುಮ್ಮನೆ ಕುಳಿತಿದ್ದೇವೆ. ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡದಂತೆ ನಮಗೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗ ನಮ್ಮನ್ನು ಹೇಗೆ ಹತ್ತಿಕ್ಕುತ್ತದೆ? ನಮ್ಮ ಸಂವಿಧಾನ ನಮಗೆ ಮಾತನಾಡುವ ಹಕ್ಕು ನೀಡಿದೆ. ನಾನು ಬಿಜೆಪಿಯಲ್ಲ. ನಮಗೆ ಅಧಿಕಾರ ನೀಡಿದರೆ, ಚುನಾವಣಾ ಆಯೋಗವನ್ನು ಎರಡು ದಿನ ಜೈಲಿನಲ್ಲಿ ಇರಿಸುತ್ತೇವೆ' ಎಂದು ಹೇಳಿದರು.
'ಮೋದಿ ಸೇನೆ' ಹೇಳಿಕೆ ಯೋಗಿ ಆದಿತ್ಯನಾಥಗೆ ಆಯೋಗ ನೊಟೀಸ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಪ್ರಕಾಶ್ ಅಂಬೇಡ್ಕರ್ ಮೂರು ಬಾರಿ ಸಂಸದರಾಗಿದ್ದಾರೆ. ವಂಚಿತ್ ಬಹುಜನ ಅಘಾದಿ (ವಿಬಿಎ) ಪಕ್ಷದಿಂದ ಮಹಾರಾಷ್ಟ್ರದ ಸೊಲಾಪುರ್ ಮತ್ತು ಅಕೋಲಾ ಕ್ಷೇತ್ರಗಳಿಂದ ಲೋಕಸಭೆಗೆ ಅವರು ಸ್ಪರ್ಧಿಸಿದ್ದಾರೆ. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಮತ್ತು ಭರೀಪ್ ಬಹುಜನ್ ಮಹಾಸಂಘ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿವೆ. ರಾಜ್ಯದಲ್ಲಿ ಎಲ್ಲ 48 ಕ್ಷೇತ್ರಗಳಲ್ಲಿಯೂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.