Breaking: ಮುಂಬೈನಲ್ಲಿ ಕಟ್ಟಡ ಕುಸಿತ, ಸಾವಿನ ಸಂಖ್ಯೆ 19ಕ್ಕೆ ಏರಿಕೆ
ಮುಂಬೈ, ಜೂನ್ 28: ಮುಂಬೈನ ಕುರ್ಲಾದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಸಾವನ್ನಪ್ಪಿರುವವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮಂಗಳವಾರ ಮಾಹಿತಿ ನೀಡಿದೆ.
ಶಿವಸೇನೆಯ ಬಂಡಾಯ ಶಾಸಕ ಮಂಗೇಶ್ ಕುಡಾಲ್ಕರ್ ಘಟನೆಯಲ್ಲಿ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.
"ಮುಂಬೈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ, ಗಾಯಗೊಂಡವರಿಗೆ 1 ಲಕ್ಷ ರೂ" ಎಂದು ಕುಡಾಲ್ಕರ್ ಟ್ವೀಟ್ನಲ್ಲಿ ತಿಳಿಸಿದರು.

ಕಳೆದ ಸೋಮವಾರ ತಡರಾತ್ರಿ ಮುಂಬೈನ ಕುರ್ಲಾದ ನಾಯಕ್ ನಗರ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಈ ಘಟನಾ ಸ್ಥಳಕ್ಕೆ ದೌಡಾಯಿಸಿದ ಎನ್ಡಿಆರ್ಎಫ್ ಸಿಬ್ಬಂದಿಯು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಕಟ್ಟಡದ ದುರಸ್ತಿ ಕಾರ್ಯ ಆಗಿರಲಿಲ್ಲ: ಶಿವಸೇನಾ ಶಾಸಕ ಸಂಜಯ್ ಪೋಟ್ನಿಸ್, "2016 ರಲ್ಲಿ ಕಟ್ಟಡವನ್ನು C1 ವರ್ಗದ ಅಡಿಯಲ್ಲಿ ಪಟ್ಟಿ ಮಾಡಲಾಗಿತ್ತು. ಆಡಿಟ್ ನಂತರ, ಅದನ್ನು C2 ಅಡಿಯಲ್ಲಿ ಮರು ವರ್ಗೀಕರಿಸಲಾಯಿತು, ಅದನ್ನು ದುರಸ್ತಿ ಮಾಡಬೇಕಾಗಿತ್ತು, ಆದರೆ ಅದು ಸಾಧ್ಯವಾಗಿರಲಿಲ್ಲ.

ಸೋಮವಾರ ರಾತ್ರಿ ಸಚಿವ ಆದಿತ್ಯ ಠಾಕ್ರೆ ಕಟ್ಟಡ ಕುಸಿದ ಕುರ್ಲಾಗೆ ಭೇಟಿ ನೀಡಿದ್ದು, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೂಚನೆ ಮೇರೆಗೆ ಅಂತಹ ಆಸ್ತಿಯನ್ನು ತೆರವು ಮಾಡಬೇಕು ಎಂದು ಹೇಳಿದ್ದಾರೆ.












Click it and Unblock the Notifications