ಕಸಬ್ನಿಗೆ ವಿದಾಯ ಹೇಳಿದ ವ್ಯಕ್ತಿಯೇ ಯಾಕೂಬ್ ಕತ್ತಿನ ಹಗ್ಗ ಎಳೆಯಲಿದ್ದಾನೆ
ನಾಗಪುರ, ಜುಲೈ 23 : 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ಗಲ್ಲಿಗೆ ದಿನಗಣನೆ ಆರಂಭವಾಗಿದೆ. ಜುಲೈ 30ರ ಬೆಳಿಗ್ಗೆ ಸರಿಯಾಗಿ 7 ಗಂಟೆಗೆ ಯಾಕೂಬ್ ಕುತ್ತಿಗೆಗೆ ನೇಣಿನ ಕುಣಿಕೆ ಬೀಳಲಿದೆ. ಇದಕ್ಕೆ ಸರ್ವಸಿದ್ಧತೆಗಳೂ ನಡೆಯುತ್ತಿವೆ.
2012ರ ನವೆಂಬರ್ 21ರಂದು ಉಗ್ರ ಅಜ್ಮಲ್ ಕಸಬ್ ನೇಣಿನ ಹಬ್ಬವನ್ನು ಎಲೆದ ವ್ಯಕ್ತಿಯೇ ಯಾಕೂಬ್ ಮೆಮನ್ ಕುತ್ತಿಗೆಯ ಹಗ್ಗವನ್ನು ಎಳೆಯಲಿದ್ದಾನೆ ಎಂದು ನಾಗಪುರ ಜೈಲಿನ ಅಧಿಕಾರಿಗಳು ಅಧಿಕೃತವಾಗಿ ಹೇಳಿದ್ದಾರೆ. ಯಾಕೂಬ್ ಗಲ್ಲಿನ ದಿನಾಂಕ ನಿಗದಿಯಾಗುತ್ತಿದ್ದಂತೆ ಹಗ್ಗ ಎಳೆಯಲು ಈ ವ್ಯಕ್ತಿಗೂ ಬುಲಾವ್ ಹೇಳಲಾಗಿದೆ. [ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸಿಜರ್]
ಕಠಿಣ ಪ್ರಕ್ರಿಯೆ : ಅಪರಾಧಿಯನ್ನು ನೇಣಿಗೇರಿಸುವ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ. ಹಗ್ಗ ಎಳೆಯುವವನ ಗುಂಡಿಗೆ ಗಟ್ಟಿಯಾಗಿರಬೇಕು. ಆತ ಕೂಡ ಮಾನಸಿಕವಾಗಿ ಸಿದ್ಧನಾಗಿರಬೇಕು. ಅಂತಿಮವಾಗಿ ಕತ್ತಿನ ಹಗ್ಗ ಎಳೆಯುವ ಮೊದಲು ನಾಲ್ಕೈದು ಬಾರಿ ಅದರ ಅಭ್ಯಾಸ ಮಾಡಬೇಕು. ವರ್ಷಗಳ ಕಾಲ ಕೆಲಸ ಮಾಡದ ಗಲ್ಲಿಗೇರಿಸುವ ಸಾಧನವನ್ನು ಸುಸ್ಥಿತಿಯಲ್ಲಿಡುವ ಕೆಲಸವನ್ನೂ ಆತನೇ ಮಾಡಬೇಕಾಗುತ್ತದೆ.

ಹತ್ತು ದಿನಗಳ ಹಿಂದೆಯಷ್ಟೇ ನಾಗಪುರ ಜೈಲಿಗೆ ಗಲ್ಲಿಗೇರಿಸುವ ಸಾಧನದ ಮಾದರಿಯನ್ನು ತಂದಿರಿಸಲಾಗಿದೆ. ಅಪರಾಧಿ ಯಾಕೂಬ್ ಮೆಮನ್ ತೂಕವನ್ನು ಗಲ್ಲಿಗೇರಿಸುವ ವ್ಯಕ್ತಿಗೆ ತಿಳಿಸಲಾಗಿದ್ದು, ಅದಕ್ಕೆ ತಕ್ಕಂತೆ ಹಗ್ಗವನ್ನು, ಮತ್ತಿತರ ಸಲಕರಣೆಗಳನ್ನು ಆತ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. [ಗಲ್ಲು ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಮೊರೆ]
ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿದ ವ್ಯಕ್ತಿ ಕೂಡ ವೃತ್ತಿಪರ ಹ್ಯಾಂಗ್ ಮ್ಯಾನ್ ಅಲ್ಲ. ಆದರೆ, ಇದಕ್ಕಾಗಿಯೇ ಆತನಿಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. ತನಗೆ ನಿರ್ವಹಿಸಲಾಗಿರುವ ಕೆಲಸವನ್ನು ಆತ ಅತ್ಯಂತ ನಿಷ್ಠೆಯಿಂದ, ನಿರ್ಭಾವುಕತೆಯಿಂದ, ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ. ಹಗ್ಗ ಎಳೆಯುವ ಮುನ್ನ ಆತ ಹೇಳುವ ಮಾತು ಇದು, "ನಾನು ಆಜ್ಞಾಧಾರಕ ಅಷ್ಟೆ. ದಯವಿಟ್ಟು ನನ್ನ ಕ್ಷಮಿಸು. ನಾನು ಹುಕುಂ ಪಾಲಿಸುವ ಗುಲಾಮನಷ್ಟೆ!"
ಕೂಲಾಗಿರುವ ಯಾಕೂಬ್ : ಈ ನಡುವೆ, ಜೈಲಿನ ಅಧಿಕಾರಿಗಳು, ವೈದ್ಯರು ಯಾಕೂಬ್ ಮೆಮನ್ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸುತ್ತಿದ್ದಾರೆ. ನೇಣು ಹಾಕುವ ಮುನ್ನ ಅಪರಾಧಿ ಅತ್ಯಂತ ಆರೋಗ್ಯದಿಂದಿರಬೇಕಾಗಿರುವುದು ಕೂಡ ನಿಮಯಗಳಲ್ಲೊಂದು.
ಕ್ಷಮಾದಾನ ಅರ್ಜಿ ತಿರಸ್ಕೃತಿವಾದಂದಿನಿಂದ ಆತ ನಿರ್ಭಾವುಕನಾಗಿದ್ದಾನೆ, ಯಾರೊಂದಿಗೂ ಮಾತನಾಡುತ್ತಿಲ್ಲ. ಆತನ ವಕೀಲರ ಮಾತಿಗೆ ಕೂಡ ತಲೆಯಾಡಿಸುವುದು ಬಿಟ್ಟು ಆತ ಏನನ್ನೂ ಮಾತನಾಡುತ್ತಿಲ್ಲ. ಯಾಕೂಬ್ ಕುಟುಂಬ ಗುರುವಾರ ಆತನನ್ನು ಭೇಟಿಯಾಗಲಿದೆ.
ನಾಲ್ಕು ಪೊಲೀಸ್ ಪೇದೆಗಳು ಆತನನ್ನು ಸದಾಕಾಲ ಕಾಯುತ್ತಿರುತ್ತಾರೆ. ರಾತ್ರಿ ಕೂಡ ನಿದ್ದೆ ಮಾಡದೆ ಆತ ಕಾಲವನ್ನು ತಳ್ಳುತ್ತಿದ್ದಾನೆ. ಈ ನಡುವೆ ಗಲ್ಲು ಶಿಕ್ಷೆಗೆ ತಡೆಕೋರಿ ಸುಪ್ರೀಂ ಕೋರ್ಟಿಗೆ ಯಾಕೂಬ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾನೆ. ಕೊನೆ ಕ್ಷಣದಲ್ಲಿ ತನ್ನ ಮನವಿಗೆ ಪುರಸ್ಕಾರ ಸಿಗಬಹುದು ಎಂಬ ಆಶಾಭಾವವನ್ನು ಆತ ಹೊಂದಿದ್ದಾನೆ.












Click it and Unblock the Notifications