ಎಚ್ಡಿಕೆ ವಿಶ್ವಾಸಮತ ಯಾಚನೆ: ರೆಬೆಲ್ ಶಾಸಕರಿಂದ ಸದನಕ್ಕೆ ಗೈರು?
ಮುಂಬೈ, ಜುಲೈ 15: ಬೆಂಗಳೂರು ಬಿಟ್ಟು ಮುಂಬೈನ ಹೋಟೆಲ್ ಸೇರಿರುವ ಕರ್ನಾಟಕ ಕಾಂಗ್ರೆಸ್ಸಿನ ಶಾಸಕರು ಮಂಗಳವಾರ(ಜುಲೈ 16)ದಂದು ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಎದುರು ನೋಡುತ್ತಿದ್ದಾರೆ. ತೀರ್ಪಿನ ಆಧಾರ ಮೇಲೆ ತಮ್ಮ ಮುಂದಿನ ನಡೆ ಇಡಲು ನಿರ್ಧರಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ವಿಶ್ವಾಸಮತ ಯಾಚನೆಗೆ ಎರಡು ದಿನ ಬಾಕಿ ಇರುತ್ತದೆ. ಆ ಅವಧಿಯಲ್ಲಿ ಏನೆಲ್ಲ ಘಟನೆಗಳು ನಡೆಯಬಹುದು ಎಂಬ ಕುತೂಹಲ ಮೂಡಿದೆ.
ಆದರೆ, ಲಭ್ಯ ಮಾಹಿತಿಯಂತೆ ಜುಲೈ 18ರಂದು ನಡೆಯಲಿರುವ ವಿಧಾನಸಭೆ ಕಲಾಪಕ್ಕೆ ಎಲ್ಲಾ ರೆಬೆಲ್ ಶಾಸಕರು ಗೈರು ಹಾಜರಾಗಲಿದ್ದಾರೆ.

ಕಾಂಗ್ರೆಸ್ -ಜೆಡಿ ಸ್ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕುವಂತೆ ಸೂಚಿಸಲಾಗಿದೆ. ಆದರೆ, ರೆಬೆಲ್ ಶಾಸಕರು ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದು, ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಈ ಮೂಲಕ ಸಂದೇಶ ರವಾನಿಸಿದ್ದಾರೆ.
ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ನೆಲೆಸಿರುವ 10 ಮಂದಿ ಕಾಂಗ್ರೆಸ್ ಶಾಸಕರು ತಮಗೆ ಯಾವುದೇ ವಿಪ್ ಅನ್ವಯಿಸುವುದಿಲ್ಲ, ರಾಜೀನಾಮೆ ನೀಡಿಯಾಗಿದೆ, ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ ಎಂದಿದ್ದಾರೆ.
ಖರ್ಗೆ ಭೇಟಿಗೂ ನಿರ್ಬಂಧ: "ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್ ಆಗಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಉದ್ದೇಶ ನಮಗಿಲ್ಲ, ನಮಗೆ ಭದ್ರತೆ ಒದಗಿಸಿ" ಎಂದು ಮುಂಬೈ ಸಿಟಿ ಪೊಲೀಸರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದಾರೆ. ಈ ಹಿಂದೆ ಮುಂಬೈನ ರೈನಾಸಾನ್ಸ್ ಹೋಟೆಲ್ ಬಳಿ ಬಂದಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಪೊಲೀಸರು ತಡೆದಿದ್ದಲ್ಲದೆ, ವಶಕ್ಕೆ ಪಡೆದು, ಬಲವಂತವಾಗಿ ಬೆಂಗಳೂರಿಗೆ ಹಿಂತಿರುಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications