ಸ್ಪೀಕರ್ ರಮೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಭಿನ್ನಮತೀಯ ಶಾಸಕರು
Recommended Video
ಮುಂಬೈ, ಜುಲೈ 10: ಕರ್ನಾಟಕದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅಸ್ತಿತ್ವ ಹಾಗೂ ಬಿಜೆಪಿಯ ಹೊಸ ಸರ್ಕಾರ ಉದಯಕ್ಕೆ ನಿರ್ಣಾಯಕವಾಗಬಲ್ಲ ನಿರ್ಣಯವನ್ನು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಂಡಿದ್ದಾರೆ. ಆದರೆ, 13 ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿದ್ದು, ಈ ಪೈಕಿ 8 ಶಾಸಕರದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದಿರುವುದು ಭಿನ್ನಮತೀಯ ಶಾಸಕರಿಗೆ ಅಸಮಾಧಾನ ಉಂಟು ಮಾಡಿದೆ.
ಕ್ರಮಬದ್ಧವಾದ ರಾಜೀನಾಮೆಗಳನ್ನು ಕೂಡಾ ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿಲ್ಲ, ಉಳಿದ ರಾಜೀನಾಮೆಗಳನ್ನು ತಿರಸ್ಕರಿಸಲು ಸೂಕ್ತ ಕಾರಣ ಕೂಡಾ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ರಮೇಶ್ ಕುಮಾರ್ ವಿರುದ್ಧ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಗುರುವಾರ(ಜುಲೈ 11) ಅರ್ಜಿ ವಿಚಾರಣೆಗೆ ಬರಲಿದೆ. ಅತೃಪ್ತರ ಪರ ಮುಕುಲ್ ರೋಹ್ಟಗಿ ಅವರು ವಾದಿಸಲಿದ್ದಾರೆ.
ರಾಜೀನಾಮೆ ಪತ್ರ ಪರಿಶೀಲಿಸಿದ ನಂತರ ವಿಧಾನಸೌದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಐವರು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿವೆ, 13 ಜನ ಶಾಸಕರು ನನ್ನ ಕಚೇರಿ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದಾರೆ. ನಾನು ಕಚೇರಿಯಿಂದ ಮನೆಗೆ ತೆರಳಿದ ಬಳಿಕ ಶಾಸಕರು ಬಂದಿದ್ದಾರೆ. ಸೋಮವಾರದಂದು ನಾನು ಕಚೇರಿಗೆ ಬಂದಿರಲಿಲ್ಲ. ಇವತ್ತು ರೋಷನ್ ಬೇಗ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು.

ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ: ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಉಳಿದ 8 ಜನ ಶಾಸಕರ ರಾಜೀನಾಮೆ ರೂಲ್ಸ್ 202ರ ಪ್ರಕಾರ ಕ್ರಮಬದ್ಧವಾಗಿಲ್ಲ.ಸಂವಿಧಾನ ಬದ್ಧವಾಗಿ ನಾನು ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುತ್ತಿದ್ದೇನೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದು ರಮೇಶ್ ಕುಮಾರ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಜುಲೈ 10ರಂದು ವಿಧಾನಸಭೆ ಬಲಾಬಲ:
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 106
ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)












Click it and Unblock the Notifications