ನಟಿ ಕಂಗನಾ ರಣಾವತ್ ಕಚೇರಿ ವಶಕ್ಕೆ ಪಡೆದ ಬಿಎಂಸಿ?: ಮಹಾರಾಷ್ಟ್ರ ಸರ್ಕಾರದ ಸೇಡಿನ ಕ್ರಮ
ಮುಂಬೈ, ಸೆಪ್ಟೆಂಬರ್ 7: ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಯುದ್ಧ ತಾರಕಕ್ಕೇರುವ ಸೂಚನೆ ಕಂಡುಬಂದಿದೆ. ಆರೋಪ-ಪ್ರತ್ಯಾರೋಪ, ಬೆದರಿಕೆಗಳ ಬಳಿಕ ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ.
ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ರಣಾವತ್ ಅವರ ಕಚೇರಿಗೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿದ ಬೃಹನ್ ಮುಂಬೈ ಪಾಲಿಕೆ ಅಧಿಕಾರಿಗಳು (ಬಿಎಂಸಿ), ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದರು. ಕಂಗನಾ ಅವರ ಕಚೇರಿಯಲ್ಲಿ ಅನಧಿಕೃತ ವಿಸ್ತರಣೆ ನಡೆದಿದೆ. ಅನುಮೋದಿತ ಯೋಜನೆಯಾಚೆ ನಡೆದಿರುವ ಬದಲಾವಣೆಗಳನ್ನು ಪರಿಶೀಲಿಸಲು ಕಟ್ಟಡ ಪ್ರಸ್ತಾವ ಇಲಾಖೆಯ ತಂಡವೊಂದು ಆವರಣವನ್ನು ಪರಿಶೀಲನೆ ನಡೆಸಿತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕಂಗನಾ ಅವರ ಕಚೇರಿ ಕಟ್ಟಡ ನಿರ್ಮಾಣದ ವಿರುದ್ಧ ದೂರುಗಳೇನಾದರೂ ಬಂದಿದೆಯೇ ಅಥವಾ ಹಳೆಯ ದೂರುಗಳು ಇದ್ದವೇ ಎಂಬುದರ ಬಗ್ಗೆ ಬಿಎಂಸಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಇದರ ಬಗ್ಗೆ ವಿವರ ಪಡೆದುಕೊಳ್ಳುವುದಾಗಿ ಬಿಎಂಸಿಯ ಉಪ ಆಯುಕ್ತ ಪರಾಗ್ ಮಸುರ್ಕರ್ ಹೇಳಿದ್ದಾರೆ. ಮುಂದೆ ಓದಿ.

ನಾಳೆ ಕಟ್ಟಡ ಉರುಳಿಸುತ್ತಾರೆ
ಈ ಘಟನೆ ಬಳಿಕ ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ. 'ಅವರು ಬಲವಂತವಾಗಿ ನನ್ನ ಕಚೇರಿಯನ್ನು ವಶಕ್ಕೆ ಪಡೆದು ಎಲ್ಲವನ್ನೂ ಅಳತೆ ಮಾಡಿದ್ದಾರೆ. ನನ್ನ ಬಳಿ ಎಲ್ಲ ದಾಖಲೆಗಳು, ಬಿಎಂಸಿ ಅನುಮತಿ ಇದೆ. ನನ್ನ ಆಸ್ತಿಯಲ್ಲಿ ಯಾವುದೇ ಅಕ್ರಮ ಇಲ್ಲ. ಅಕ್ರಮ ನಿರ್ಮಾಣದ ಬಗ್ಗೆ ತೋರಿಸಲು ಬಿಎಂಸಿ ನೋಟಿಸ್ ಜತೆಗೆ ನಿರ್ಮಾಣ ಯೋಜನೆಯನ್ನು ಕಳುಹಿಸಬೇಕು. ಇಂದು ಅವರು ನನ್ನ ಜಾಗದ ಮೇಲೆ ದಾಳಿ ನಡೆಸಿದ್ದಾರೆ. ನಾಳೆ ಯಾವುದೇ ನೋಟಿಸ್ ನೀಡದೆ ಇಡೀ ಕಟ್ಟಡವನ್ನು ಧ್ವಂಸಗೊಳಿಸಬಹುದು' ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಡಿದ್ದಕ್ಕೆ ಅನುಭವಿಸಬೇಕಾಗುತ್ತದೆ
ಬಿಎಂಸಿಯ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ನನ್ನ ಕಟ್ಟಡವನ್ನು ವಶಕ್ಕೆ ಪಡೆದಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ನನ್ನ ನೆರೆಹೊರೆಯವರಿಗೆ ಕಿರುಕುಳ ನೀಡಿದ್ದಾರೆ. 'ಮೇಡಂ ಏನು ಮಾಡಿದ್ದಾರೋ ಅದಕ್ಕೆ ಎಲ್ಲರೂ ಅಂತಹ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ' ಎಂದು ಅಧಿಕಾರಿಗಳು ಹೇಳಿದ್ದಾರೆ' ಎಂದು ಕಂಗನಾ ಆರೋಪಿಸಿದ್ದಾರೆ

ಹಳೆಯ ಪ್ರಕರಣ ನ್ಯಾಯಾಲಯದಲ್ಲಿ
ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ (ಎಂಆರ್ಟಿಪಿ) ಕಾಯ್ದೆಯಡಿ ಬಾಂದ್ರಾ ವೆಸ್ಟ್ನ ಕಂಗನಾ ಮನೆಯ ಅಕ್ರಮ ನಿರ್ಮಾಣಕ್ಕಾಗಿ ಅವರಿಗೆ 2018ರಲ್ಲಿ ನೋಟಿಸ್ ನೀಡಲಾಗಿತ್ತು. ಈ ಪ್ರಕರಣವು ದಿಂಡೋಶಿ ಕೋರ್ಟ್ನಲ್ಲಿ ಬಾಕಿ ಉಳಿದಿದೆ. ಬಿಎಂಸಿ ನೋಟಿಸ್ಅನ್ನು ಅವರು ಪ್ರಶ್ನಿಸಿದ್ದರು ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲೇ ನೋಟಿಸ್ ನೀಡಿತ್ತೇ?
ಆದರೆ ಕಚೇರಿಯ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಕಂಗನಾಗೆ ಬಿಎಂಸಿ ನೋಟಿಸ್ ನೀಡಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ. ಕಂಗನಾ ಕಚೇರಿಗೆ ಬಂದಿದ್ದ ಏಳು ಮಂದಿ ವಿಶಾಲ ಡೈನಿಂಗ್ ಟೇಬಲ್ ಸುತ್ತ ಸೇರಿದ್ದರು. ಇಬ್ಬರು ಕುಳಿತು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರೆ ಉಳಿದವರು ನಿಂತಿದ್ದ ವಿಡಿಯೋ ದಾಖಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಅವರ ಮುಖ ಕಾಣಿಸುವುದಿಲ್ಲ.












Click it and Unblock the Notifications