"ಫಡ್ನವೀಸ್-ರಾವತ್ 2 ಗಂಟೆ ಟೀ-ಬಿಸ್ಕಟ್ ಬಗ್ಗೆ ಚರ್ಚಿಸಲು ಸಾಧ್ಯವೇ?"
ಮುಂಬೈ, ಸಪ್ಟೆಂಬರ್.29: ಎರಡು ದೊಡ್ಡ ಪಕ್ಷದ ನಾಯಕರ ಭೇಟಿ ಸಂದರ್ಭದಲ್ಲಿ ರಾಜಕೀಯ ಚರ್ಚೆ ನಡೆಸುವುದು ಪಾಪವೇ ಎಂದು ಶಿವಸೇನೆ ಹಿರಿಯ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಚರ್ಚಿಸುವಂತಾ ಬೇರೆ ಯಾವ ವಿಚಾರಗಳೇ ಇಲ್ಲವೇ ಎಂದು ಹೇಳಿದ್ದಾರೆ.
ಭಾರತದಲ್ಲಿ ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಷಯಗಳಿವೆ. ಕೃಷಿ ಸಂಬಂಧಿತ ಕಾಯ್ದೆ, ಜಮ್ಮು ಕಾಶ್ಮೀರದ ವಿಚಾರ, ಚೀನಾ ಮತ್ತು ಭಾರತದ ನಡುವಿನ ಸಂಘರ್ಷ, ಗಡಿಯಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ, ಅತಿಮುಖ್ಯವಾಗಿ ಕೊರೊನಾವೈರಸ್ ಸೋಂಕು ಹರಡುವಿಕೆ ಸೇರಿದಂತೆ ಹಲವು ವಿಷಯಗಳಿವೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ತಮ್ಮ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಯಾವ ರಾಜಕಾರಣ ವಿಷಯಗಳು ಚರ್ಚೆಯಾಗಿಲ್ಲ ಎಂದು ಸಂಸದ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದರು.

ಟೀ-ಬಿಸ್ಕಟ್ ಬಗ್ಗೆ ಚರ್ಚಿಸಲು ಸಾಧ್ಯವೇ:
"ಎರಡು ದೊಡ್ಡ ಪಕ್ಷದ ನಾಯಕರು ಭೇಟಿ ಮಾಡಿದ ಸಂದರ್ಭದಲ್ಲಿ ರಾಜಕಾರಣದ ಬಗ್ಗೆ ಚರ್ಚಿಸದೇ ಇರುವುದಕ್ಕೆ ಸಾಧ್ಯವಿದೆಯೇ ಎಂದು ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ. ಎರಡರಿಂದ ಎರಡೂವರೆ ಗಂಟೆಗಳವರೆಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಸಂಸದ ಸಂಜಯ್ ರಾವತ್ ಅವರು ಕೇವಲ ಟೀ-ಬಿಸ್ಕಟ್ ಬಗ್ಗೆ ಚರ್ಚೆ ನಡೆಸಲಾಗುತ್ತದೆಯೇ" ಎಂದು ಪ್ರಶ್ನಿಸಿದ್ದಾರೆ.
ಮೊದಲೇ ಸ್ಪಷ್ಟನೆ ನೀಡಿದ್ದ ಸಂಜಯ್ ರಾವತ್:
ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ. ಅಲ್ಲದೇ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಮ್ಮಿಬ್ಬರ ಸೈದ್ಧಾಂತಿಕ ಚಿಂತನೆಗಳು ವಿಭಿನ್ನವಾಗಿವೆಯೇ ಹೊರತೂ ನಾವಿಬ್ಬರೂ ವೈರಿಗಳಲ್ಲ. ನಮ್ಮ ಭೇಟಿಯ ಬಗ್ಗೆ ಮುಖ್ಯಮಂತ್ರಿಯವರಿಗೂ ತಿಳಿದಿದೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಮುಂಬೈ ಉಪನಗರದಲ್ಲಿ ಇರುವ ಪಂಚತಾರಾ ಹೋಟೆಲ್ ನಲ್ಲಿ ಸಂಸದ ಸಂಜಯ್ ರಾವತ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಮಾಡಿದ್ದರು. ಶಿವಸೇನೆ ಮತ್ತು ಎನ್ ಸಿಪಿ ನಡುವಿನ ರಾಜಕೀಯ ತಿಕ್ಕಾಟದ ನಡುವೆ ಉಭಯ ನಾಯಕರ ಭೇಟಿಯೂ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿತ್ತು.












Click it and Unblock the Notifications