ಶರದ್ ಪವಾರ್ ಗೆ ರಾಷ್ಟ್ರಪತಿಯಾಗುವ ಆಫರ್ ನೀಡಿದೆಯೇ ಎನ್ಡಿಎ?
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅಸ್ಥಿರತೆ ನಡುವೆ ''ಮಹಾ ಡೀಲ್" ನಡೆದುಹೋಗಿದೆ ಎಂಬ ಸುದ್ದಿ ಬಂದಿದೆ. ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವೊಂದು ಏರ್ಪಟ್ಟಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಭಾರಿ ಆಫರ್ ಸಿಕ್ಕಿದೆ ಎನ್ನಲಾಗಿದೆ.
Recommended Video
ರಾಜಕೀಯ ಪಡಸಾಲೆಯಲ್ಲಿ ಹಬ್ಬಿರುವ ಈ ಗುಸುಗುಸು ಸುದ್ದಿ ಸ್ವಲ್ಪ ಅರಗಿಸಿಕೊಳ್ಳಲು ಕಷ್ಟವಾದರೂ, ಅಚ್ಚರಿಪಡಬೇಕಾದ್ದು ಏನು ಇಲ್ಲ, ಹಿಂದೆಲ್ಲ ಇಂಥ ಅಚ್ಚರಿ ನಡೆಯನ್ನು ಮೋದಿ ನೇತೃತ್ವ ಎನ್ಡಿಎ ಇಟ್ಟಿದೆ, ಇಡುತ್ತಾ ಬಂದಿದೆ. ಸದ್ಯದ ಮಾಹಿತಿಯಂತೆ ಶರದ್ ಪವಾರ್ ಗೆ ರಾಷ್ಟ್ರಪತಿಯಾಗುವ ಆಫರ್ ಸಿಕ್ಕಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರ ಅವಧಿ 2022 ತನಕ ಇರಲಿದೆ.ಜೂನ್ 2017ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಾನಕ್ಕೆ ಕೋವಿಂದ್ ರನ್ನು ಸೂಚಿಸಲಾಗಿತ್ತು. ಭಾರತದ 14ನೇ ರಾಷ್ಟ್ರಪತಿಯಾಗಿ ಜುಲೈ 2017ರಲ್ಲಿ ಕೋವಿಂದ್ ಅಧಿಕಾರ ವಹಿಸಿಕೊಂಡರು.
ಈ ವರ್ಷ ಬಿಜೆಪಿ ಮತ್ತೊಮ್ಮೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ, 2024ರ ತನಕ ಅಧಿಕಾರದಲ್ಲಿ ಇರುವ ಭರವಸೆ ಇದೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಕೋವಿಂದ್ ನಂತರ ರಾಷ್ಟ್ರಪತಿ ಸ್ಥಾನ
ಸದ್ಯದ ಗಾಳಿಸುದ್ದಿಗಳನ್ನು ನಂಬುವುದೇ ಆದರೆ ಬಿಜೆಪಿ ದೆಸೆಯಿಂದ 79 ವರ್ಷ ವಯಸ್ಸಿನ ಪವಾರ್ ಅವರು ಕೋವಿಂದ್ ನಂತರ ರಾಷ್ಟ್ರಪತಿ ಸ್ಥಾನಕ್ಕೇರಲಿದ್ದಾರೆ. ಇದಕ್ಕೂ ಮುನ್ನ ಎನ್ಸಿಪಿ ಬೆಂಬಲ ಪಡೆದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ನೆರವು ಕೋರಿದೆ.

ಮಹಾರಾಷ್ಟ್ರದಲ್ಲಿ ಅತಂತ್ರ ಸ್ಥಿತಿ
288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಿಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು.

ಮೋದಿ-ಶರದ್ ಪವಾರ್ ಭೇಟಿ ನಂತರ
ಇಷ್ಟೆಲ್ಲ ಗಾಳಿಸುದ್ದಿ ಹಬ್ಬಲು ಕಾರಣವಾಗಿದ್ದು, ಮೋದಿ ಅವರು ಎನ್ಸಿಪಿ ಹಾಗೂ ಬಿಜೆಡಿ ಸದಸ್ಯರ ನಡವಳಿಕೆಯನ್ನು ಹೊಗಳಿದ ಮೇಲೆ ಎಂಬುದನ್ನು ಮರೆಯುವಂತಿಲ್ಲ. ಬುಧವಾರದಂದು ಮೋದಿ ಹಾಗೂ ಶರದ್ ಪವಾರ್ ಸಂಸತ್ತಿನಲ್ಲಿ ಭೇಟಿ ಮಾಡಿದ್ದನ್ನು ಗಮನಿಸಬಹುದು.

ಒಂದೇ ಕಲ್ಲಿನಿಂದ ಎರಡು ಹಕ್ಕಿ
ಎನ್ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಮೂಲಕ ಶಿವಸೇನಾದ ಬಹುಕಾಲದ ಉಪಟಳಕ್ಕೆ ಹಾಗೂ ಕಾಂಗ್ರೆಸ್ಸಿನ ಅವಕಾಶಗಳಿಗೆ ಒಂದೇ ಬಾರಿಗೆ ಕಡಿವಾಣ ಹಾಕಬಹುದು. ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಉದ್ಯಮಿಗಳಿಂದಲೂ ಒತ್ತಡ
ಎನ್ಸಿಪಿ ಹಾಗೂ ಬಿಜೆಪಿ ನಡುವೆ ಮೈತ್ರಿ ಮೂಡಲು ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯ ದೊಡ್ಡ ದೊಡ್ಡ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ. ಅರಾಜಕತೆ, ಸರ್ಕಾರವಿಲ್ಲದ ರಾಜ್ಯದಿಂದ ವ್ಯಾಪಾರ, ವಹಿವಾಟಿಗೆ ಕೋಟ್ಯಂತರ ನಷ್ಟವಾಗುತಿದೆ ಎಂದು ತಮ್ಮ ವಾದ ಮಂಡಿಸಿದ್ದಾರೆ.












Click it and Unblock the Notifications