Breaking; ಐಆರ್ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆ
ಮುಂಬೈ, ಮೇ 30; ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದ ಐಆರ್ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆಯಾಗಿದೆ.
ಸೋಮವಾರ ಎನ್ಸಿಬಿ ಮುಂಬೈ ವಿಭಾಗದ ಮಾಜಿ ವಲಯ ನಿರ್ದೇಶಕ ಸಮೀರ್ ವಾಖಂಡೆಯನ್ನು ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ. 2008ನೇ ಬ್ಯಾಚ್ ಐಆರ್ಎಸ್ ಅಧಿಕಾರಿ ಸಮೀರ್ ವಾಖಂಡೆ 2020ರ ಸೆಪ್ಟೆಂಬರ್ನಿಂದ ಎನ್ಸಿಬಿಯಲ್ಲಿದ್ದರು.
2021ರ ಡಿಸೆಂಬರ್ 31ರಂದು ಅವರ ಎನ್ಸಿಬಿ ಅವಧಿ ಮುಕ್ತಾಯಗೊಂಡಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಂಡಿದ್ದರು. ಈಗ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಕಳೆದ ವರ್ಷ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು. ಶಾರೂಖ್ ಪುತ್ರ ಹಲವು ದಿನಗಳ ಕಾಲ ಜೈಲುವಾಸ ಅನುಭವಿಸುವಂತೆಯೂ ಆಗಿತ್ತು.
ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು ಸಮೀರ್ ವಾಖಂಡೆ. ಈ ಪ್ರಕರಣದ ಬಳಿಕ ಸಮೀರ್ ವಾಖಂಡೆ ದೇಶಾದ್ಯಂತ ಸುದ್ದಿಯಾದರು. ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ವಾಖಂಡೆ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು.
ಆರ್ಯನ್ ಖಾನ್ ಪ್ರಕರಣದಲ್ಲಿ 25 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬುದು ಸೇರಿದಂತೆ ವೈಯಕ್ತಿಕ ವಿಚಾರಗಳನ್ನು ಸಹ ಮುಂದಿಟ್ಟುಕೊಂಡು ಆರೋಪ ಮಾಡಿದರು. ಆರೋಪಗಳಿಗೆ ಸಮೀರ್ ವಾಖಂಡೆ ದಿಟ್ಟವಾಗಿಯೇ ಉತ್ತರ ನೀಡಿದ್ದರು.
ಈ ಪ್ರಕರಣದಲ್ಲಿ ಆರ್ಯನ್ ಖಾನ್ಗೆ ಕಳೆದ ವಾರ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. ಸಮೀರ್ ವಾಖಂಡೆ ಸಹ ಸದ್ಯ ಎನ್ಸಿಬಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ.












Click it and Unblock the Notifications