ಕಸ್ಟಡಿಯಿಂದ ಐಎಂ ಉಗ್ರ ಉಸ್ಮಾನಿ ಪರಾರಿ
ಮುಂಬೈ, ಸೆ.20: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿರುವ ಆರೋಪಿ ಅಫ್ಜಲ್ ಉಸ್ಮಾನಿ ಶುಕ್ರವಾರ ಮುಂಬೈ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ಉಗ್ರ ಉಸ್ಮಾನಿಯನ್ನು ಮೋಕಾ ಕೋರ್ಟಿಗೆ ಕರೆದೊಯ್ಯುವ ಎಸ್ಕೇಪ್ ಆಗಿದ್ದಾನೆ.
2008ರ ಅಹಮದಾಬಾದಿನ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಉಸ್ಮಾನಿ ಪ್ರಮುಖ ಆರೋಪಿಯಾಗಿದ್ದಾರೆ. ಇತ್ತೀಚೆಗೆ ನೇಪಾಳ-ಭಾರತ ಗಡಿಭಾಗದಲ್ಲಿ ಸೆರೆ ಸಿಕ್ಕ ಉಗ್ರ ಯಾಸಿನ್ ಭಟ್ಕಳ ಕೂಡಾ ವಿಚಾರಣೆ ಸಂದರ್ಭದಲ್ಲಿ ಉಸ್ಮಾನಿ ಹೆಸರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
2008ರಲ್ಲಿ ಅಫ್ಜಲ್ ಉಸ್ಮಾನಿಯನ್ನು ಬಂಧಿಲಾಗಿತ್ತು. ಈ ಹಿಂದೆ ಕೂಡಾ ಪೊಲೀಸ್ ಕಸ್ಟಡಿಯಿಂದ ಉಸ್ಮಾನಿ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದ. 2008ರಲ್ಲಿ ಸೂರತ್, ಅಹಮಾದ್ ಸೇರಿದಂತೆ ಅನೇಕ ಕಡೆ ನಡೆದ ವಿಧ್ವಂಸಕ ಕೃತ್ಯಗಳಲ್ಲಿ ಈತನ ಕೈವಾಡ ಇರುವ ಶಂಕೆಯ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು.

ಕಾರುಗಳನ್ನು ಅಪಹರಿಸುವುದರಲ್ಲಿ ಈತ ನಿಷ್ಣಾತನಾಗಿದ್ದ.ಇಂಡಿಯನ್ ಮುಜಾಹಿದ್ದೀನ್ ನಂಟು ಹೊಂದಿದ್ದರೂ ಉಸ್ಮಾನಿ ಮೂಲತಃ ಐಎಂನ ಉಗ್ರನಲ್ಲ ಎನ್ನಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ ಬಾಂಬ್ ಇಟ್ಟು ಸ್ಫೋಟಗೊಳಿಸುವುದು ಇವನ ವಿಶೇಷತೆಯಾಗಿತ್ತು. ಮುಂಬೈ ಹಾಗೂ ಸುತ್ತಲ ಪ್ರದೇಶದಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಅಡ್ಡಾಗಳು ಹಾಗೂ ಅಡಗುತಾಣಗಳ ಬಗ್ಗೆ ಉಸ್ಮಾನಿ ಮಹತ್ವದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದ
ಈಗ ಕೋರ್ಟ್ ಆವರಣದಿಂದ ಉಸ್ಮಾನಿ ಎಸ್ಕೇಪ್ ಆಗಿದ್ದು, ಈತನ ಪತ್ತೆಗಾಗಿ ಮುಂಬೈ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. 2008ರ ಅಹಮದಾಬಾದಿನ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಆರೋಪಿಗಳ ಜತೆ ಉಸ್ಮಾನಿಯನ್ನು ಕೋರ್ಟಿಗೆ ಕರೆದೊಯ್ಯಲಾಗುತ್ತಿತ್ತು.
ರಾಯಗಢ ಜಿಲ್ಲೆಯ ತಲೊಜಾ ಜೈಲಿನಿಂದ ದಕ್ಷಿಣ ಮುಂಬೈನಲ್ಲಿರುವ ಸೆಷನ್ಸ್ ಕೋರ್ಟಿಗೆ ಆರೋಪಿಗಳನ್ನು ಹಾಜರುಪಡಿಸಬೇಕಾಗಿತ್ತು, ಅಷ್ಟರಲ್ಲಿ ಉಸ್ಮಾನಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ. ಉಸ್ಮಾನಿ ಹೇಗೆ ಎಸ್ಕೇಪ್ ಆದ ಎಂಬ ವಿವರ ಇನ್ನೂ ಸಿಗಬೇಕಿದೆ.












Click it and Unblock the Notifications