'ನಮಗೆ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲ'
ಬೆಂಗಳೂರು, ಜನವರಿ 27 : 'ನಮಗೆ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲ. ಇಸ್ಲಾಂ ಧರ್ಮದ ರಕ್ಷಣೆಗಾಗಿ ಯುವಕರು ಐಎಸ್ಐಎಸ್ ಸೇರುತ್ತಿದ್ದಾರೆ. ನಮ್ಮನ್ನು ಬಂಧಿಸಿದರೆ ಮತ್ತೊಬ್ಬರು ಸಂಘಟನೆಯನ್ನು ಮುನ್ನಡೆಸುತ್ತಾರೆ' ಎಂದು ಉಗ್ರ ಮುದಬ್ಬೀರ್ ಮುಷ್ತಾಖ್ ಎನ್ಐಎ ವಿಚಾರಣೆ ವೇಳೆ ಹೇಳಿದ್ದಾನೆ.
ಕಳೆದ ವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಮುಂಬೈನಲ್ಲಿ ಮುದಬ್ಬೀರ್ ಮುಷ್ತಾಖ್ನನ್ನು ಎನ್ಐಎ ಬಂಧಿಸಿದ್ದು, ಜನವರಿ 30ರ ವರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]

ಎನ್ಐಎ ಅಧಿಕಾರಿಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಮುದಬ್ಬೀರ್ ಮುಷ್ತಾಖ್, 'ನಮ್ಮನ್ನು ಬಂಧಿಸಿದರೆ ಸಂಘಟನೆಗೆ ಹಿನ್ನಡೆ ಉಂಟಾಗುವುದಿಲ್ಲ. ನಾವಲ್ಲದಿದ್ದರೆ ಮತ್ತೊಬ್ಬರು ಸಂಘಟನೆಯನ್ನು ದೇಶವ್ಯಾಪಿ ವಿಸ್ತರಿಸುತ್ತಾರೆ' ಎಂದು ಹೇಳಿದ್ದಾನೆ. [ಉಗ್ರರ ಬಳಿ ಸುಧಾರಿತ ಸ್ಫೋಟಕ ಪತ್ತೆ]
ಎನ್ಐಎ, ಕೇಂದ್ರ ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ತನಿಖಾ ತಂಡಗಳು ಮುಷ್ತಾಖ್ ವಿಚಾರಣೆ ನಡೆಸುತ್ತಿವೆ. ವಿಚಾರಣೆ ವೇಳೆಯಲ್ಲಿ 'ಸಂಘಟನೆಗೆ ತಾನು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಮುಷ್ತಾಖ್ ಹೇಳಿದ್ದಾನೆ. ಭಾರತದ ಯುವಕರು ಹಣಕ್ಕಾಗಿ ಸಂಘಟನೆ ಸೇರುತ್ತಿಲ್ಲ, ಧರ್ಮದ ರಕ್ಷಣೆಗಾಗಿ ಸೇರುತ್ತಿದ್ದಾರೆ' ಎಂದು ತಿಳಿಸಿದ್ದಾನೆ.
ಮುಷ್ತಾಖ್ ಬಂಧಿಸುವ ವೇಳೆ ಎನ್ಐಎ ಅಧಿಕಾರಿಗಳು 2.37 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 6 ಲಕ್ಷ ರೂ.ಗಳ ವರ್ಗಾವಣೆ ಆತನ ಖಾತೆಯಿಂದ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಣ ಎಲ್ಲಿಂದ ಬಂತು? ಎಂದು ಅಧಿಕಾರಿಗಳು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು, ಬೆಂಗಳೂರು, ತುಮಕೂರಿನಲ್ಲಿಯೂ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಒಟ್ಟು 5 ಉಗ್ರರನ್ನು ಎನ್ಐಎ ವಿಚಾರಣೆ ನಡೆಸುತ್ತಿದೆ.












Click it and Unblock the Notifications