ದೇವೇಗೌಡರ ಚಿತ್ರ ಮನೇಲಿಟ್ಟು ಪೂಜಿಸುತ್ತೇನೆ: ಎಚ್.ವಿಶ್ವನಾಥ್
ಮುಂಬೈ, ಜುಲೈ 27: ಮೈತ್ರಿ ಸರ್ಕಾರವನ್ನು ಜರಿದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿ ತಂಗಿರುವ ಅತೃಪ್ತ ಶಾಸಕರ ಮುಖ್ಯಸ್ಥ ಎಚ್.ವಿಶ್ವನಾಥ್ ಅವರು ದೇವೇಗೌಡ ಅವರು ಬಗ್ಗೆ ಹೇಳಿಕೆ ನೀಡಿದ್ದಾರೆ.
ಮುಂಬೈನಿಂದಲೇ ಖಾಸಗಿ ಸುದ್ದಿವಾಹಿಸಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಎಚ್.ವಿಶ್ವನಾಥ್ ಅವರು, 'ದೇವೇಗೌಡ ಅವರ ಫೋಟೊವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ' ಎಂದು ಹೇಳಿದ್ದಾರೆ.
ರಾಜಕೀಯವಾಗಿ ಮೂಲೆಗುಂಪಾಗಿದ್ದಾಗ ದೇವೇಗೌಡ ಅವರು ನನಗೆ ರಾಜಕೀಯ ಪುನರ್ ಜೀವನ ಕೊಟ್ಟರು, ಜೆಡಿಎಸ್ ಚಿಹ್ನೆಯಿಂದಲೇ ನಾನು ಗೆದ್ದುಬಂದೆ, ಅನುಭವದ ಆಧಾರದಲ್ಲಿ ರಾಜ್ಯಾಧ್ಯಕ್ಷ ಪಟ್ಟ ಸಹ ಕೊಟ್ಟರು' ಎಂದು ವಿಶ್ವನಾಥ್ ಹೇಳಿದ್ದಾರೆ.

ಆದರೆ ರಾಜ್ಯಾಧ್ಯಕ್ಷನನ್ನಾಗಿ ನನ್ನನ್ನು ನಡೆಸಿಕೊಂಡಿದ್ದು ಮಾತ್ರ ನನಗೆ ತೀವ್ರ ಘಾಸಿಗೊಳಿಸಿತು, ಹಾಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ.
ನಮ್ಮ ಪಕ್ಷ ಆಡಳಿತದಲ್ಲಿದ್ದರೂ ಪಕ್ಷದ ರಾಜ್ಯಾಧ್ಯಕ್ಷನಾದ ನನಗೆ ಸೂಕ್ತ ಗೌರವ ಪಕ್ಷದಲ್ಲಿ ಸಿಗಲಿಲ್ಲ. ಅಧ್ಯಕ್ಷ ಹುದ್ದೆಗೆ ಕೂರಿಸಿ ಕಾರನ್ನು ಕೊಟ್ಟ ಪಕ್ಷದ ಮುಖಂಡರು ಚುನಾವಣೆ ಸಂದರ್ಭದಲ್ಲಿ ಓಡಾಡಲು ಕಾರಿಗೆ ಡಿಸೇಲ್ ಹಾಕಿಸಿಕೊಳ್ಳಲು ಹಣ ಕೊಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಓಡಾಡಲು ಕನಿಷ್ಟ 5 ಲಕ್ಷ ಹಣ ಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಮೂರು ಬಾರಿ ಕೇಳಿದರೂ ಅವರು ಕೇವಲ ಆಶ್ವಾಸನೆ ನೀಡಿದರಷ್ಟೇ ಹೊರತು ಸ್ಪಂದಿಸಲಿಲ್ಲ ಎಂದು ವಿಶ್ವನಾಥ್ ದೂರಿದ್ದಾರೆ.
ಅವಮಾನಗಳಿಂದಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ರಾಜೀನಾಮೆ ನೀಡಿದ ನಂತರವೂ ಸಹ ಕುಮಾರಸ್ವಾಮಿ ಸೇರಿದಂತೆ ಯಾರೂ ಇದರ ಬಗ್ಗೆ ವಿಚಾರಸಲಿಲ್ಲ, ಬದಲಾಗಿ ಅಧಿಕಾರ ಹಸ್ತಾಂತರದ ಬಗ್ಗೆಯೇ ಮಾತನಾಡಿದರು ಇದು ಇನ್ನಷ್ಟು ಬೇಸರಕ್ಕೆ ನೂಕಿತು ಎಂದು ಹೇಳಿದರು.












Click it and Unblock the Notifications