ಶಹಬ್ಬಾಶ್ ಮೋದೀಜಿ ಎಂದ ರಾಷ್ಟ್ರಪತಿ ಪ್ರಣಬ್!
ಇದೇ ಜುಲೈ ತಿಂಗಳಿನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಪ್ರಣಬ್ ಮುಖರ್ಜಿ ಪ್ರಧಾನಿ ಮೋದಿ ಕುರಿತು ಏನೆಲ್ಲಾ ಮಾತನಾಡಿದರು ಅನ್ನೋದನ್ನ ಒಮ್ಮೆ ಓದಿ...
ಮುಂಬೈ, ಮಾರ್ಚ್ 18: ಪ್ರಧಾನಿ ನರೇಂದ್ರ ಮೋದಿಯವರ ತ್ವರಿತ ಕಲಿಕೆಯಿಂದ ನಾನು ಪ್ರಭಾವಿತನಾಗಿದ್ದೇನೆ. ನಿಜಕ್ಕೂ ಅವರು ಯಾವುದೇ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಜಾಣ್ಮೆಯನ್ನು ಕಂಡು ಸಂತೋಷವಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಧಾನಿಯ ಗುಣಗಾನ ಮಾಡಿದ್ದಾರೆ. [ಭಾರತದ ಮುಂದಿನ ರಾಷ್ಟ್ರಪತಿ ಲಾಲ್ ಕೃಷ್ಣ ಅಡ್ವಾಣಿ?]
ಇಂಡಿಯಾ ಟುಡೇ ವತಿಯಿಂದ ಮುಂಬೈ ನಲ್ಲಿ ನಡೆದ ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಭಾಗವಹಿಸಿದ್ದ ಅವರು ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಅವರು ಪ್ರಧಾನಿ ಮೋದಿಯವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. [ಪುಟಾಣಿ ಆರಾಧ್ಯ ಕರೆಗೆ ಸ್ಪಂದಿಸುತ್ತಾರಾ ಪ್ರಧಾನಿ ಮೋದಿ?]
ಇದೇ ಜುಲೈ ತಿಂಗಳಿನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಪ್ರಣಬ್ ಮುಖರ್ಜಿ ಪ್ರಧಾನಿ ಮೋದಿ ಕುರಿತು ಏನೆಲ್ಲಾ ಮಾತನಾಡಿದರು ಅನ್ನೋದನ್ನ ಮುಂದೆ ಓದಿ...
ಮೋದಿ ಮೋಡಿಗೆ ಪ್ರಣಬ್ ಬೆರಗು!
ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮೊದಲು ಸಂಸತ್ತಿನ ಕಾರ್ಯಚಟುವಟಿಕೆಯ ಬಗ್ಗೆ ಯಾವುದೇ ಅನುಭವವಿಲ್ಲದಿದ್ದರೂ ಸಂಕೀರ್ಣ ಎನ್ನಿಸುವ ಅಂತಾರಾಷ್ಟ್ರೀಯ ವಿಷಯಗಳನ್ನೂ ಬಹುಬೇಗನೆ ಗ್ರಹಿಸಿಕೊಳ್ಳುತ್ತಾರೆ. ಅವರ ತ್ವರಿತ ಕಲಿಕೆಯನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತೆ.
ಅವರ ಬುದ್ಧಿವಂತಿಕೆಗೆ ಹ್ಯಾಟ್ಸ್ ಆಫ್
ಚರಣ್ ಸಿಂಗ್ ರಿಂದ ಹಿಡಿದು ಚಂದ್ರಶೇಖರ್ ಅವರವರೆಗೂ ಎಲ್ಲ ಪ್ರಧಾನಿಗಳೂ ಸಂಸತ್ತಿನ ಕಾರ್ಯಚಟುವಟಿಕೆಯ ಅನುಭವವಿದ್ದು ಆ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಪ್ರಧಾನಿ ಮೋದಿ ಒಂದು ಪ್ರಾದೇಶಿಕ ಸರ್ಕಾರದಿಂದ ಬಂದು ಸಂಕೀರ್ಣವಾದ ಆರ್ಥಿಕ ವಿಷಯಗಳ ಬಗ್ಗೆಯೂ ಲೀಲಾಜಾಲವಾಗಿ ಮಾತನಾಡುವುದು ಮೆಚ್ಚುವ ಸಂಗತಿ.
ಪ್ರಭಾವ ಬೀರಿದ ಪ್ರಧಾನಿಗಳು
ನಾನು ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಅವರಲ್ಲಿ ಜವಹರಲಾಲ್ ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಈ ಐವರು ಪ್ರಧಾನಿಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ.
ಸಹಮತದ ಆಳ್ವಿಕೆಗೆ ನನ್ನದೂ ಸಹಮತವಿದೆ
ಮೋದಿಯವರು ಪಂಚರಾಜ್ಯಗಳ ಚುನಾವಣೆಯ ನಂತರ ಬಹುಮತದ ಆಳ್ವಿಕೆಗಿಂತ ಸಹಮತದ ಆಳ್ವಿಕೆಯತ್ತ ನಮ್ಮ ಗಮನವಿರಲಿ ಎಂದಿರುವುದು ನನಗೆ ತೃಪ್ತಿ ನೀಡಿದೆ. ಈ ಮಾತಿಗೆ ನನ್ನದೂ ಸಹಮತವಿದೆ.
ಅಧಿವೇಶನ ಅಡ್ಡಿಪಡಿಸುವವರ ಕುರಿತು ವಿಷಾದ
ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಅಡ್ಡಿಪಡಿಸುವವರ ಬಗ್ಗೆ ನನಗೆ ಅಸಮಾಧಾನವಿದೆ. ಪ್ರತಿಯೊಬ್ಬ ರಾಜಕಾರಣಿಯ ವ್ಯಕ್ತಿತ್ವ ನಿರ್ಧಾರವಾಗುವುದೇ ಆತ ಸಂಸತ್ತಿನಲ್ಲಿ ತನ್ನ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಂಡಿದ್ದಾನೆ ಎಂಬುದರ ಮೇಲೆ. ಅದನ್ನು ಎಲ್ಲ ಸಂಸದರೂ ಅರಿತು, ಸಭ್ಯತೆಯಿಂದ ವರ್ತಿಸಬೇಕು ಎಂದು ಸಹ ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.