ಉಳಿಯಲಿದೆಯೇ ಮಹಾರಾಷ್ಟ್ರ ಸರ್ಕಾರ? ಯಾರ ಬಳಿ ಎಷ್ಟು ಶಾಸಕರಿದ್ದಾರೆ?
ಮುಂಬೈ, ನವೆಂಬರ್ 26: ಮಹಾರಾಷ್ಟ್ರ ರಾಜಕಾರಣ ಕಳೆದ ಒಂದು ವಾರದಿಂದ ಊಹಿಸಲಸಾಧ್ಯ ತಿರುವುಗಳನ್ನು ಪಡೆದು ಕೊನೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.
ನವೆಂಬರ್ 23 ರ ಶನಿವಾರ ಬೆಳ್ಳಂಬೆಳಿಗ್ಗೆ ಬಿಜೆಪಿ ಹಾಗೂ ಎನ್ಸಿಪಿ ಯ ಬಂಡಾಯ ಶಾಸಕರು ಸೇರಿ ಆತುರಾತುರವಾಗಿ ಸರ್ಕಾರ ರಚನೆ ಮಾಡಿ, ದೇವೇಂದ್ರ ಫಡ್ನವೀಸ್ ಸಿಎಂ ಆಗಿ, ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿಯೇ ಬಿಟ್ಟರು. ಈ ಬೆಳವಣಿಗೆಯನ್ನು ಅಮಿತ್ ಶಾ ಮಾಸ್ಟರ್ ಸ್ಟ್ರೋಕ್ ಎಂದು ಬಿಂಬಿಸಲಾಗಿತ್ತು.
ಆದರೆ ಕೇವಲ ಮೂರೇ ದಿನದಲ್ಲಿ ಪರಿಸ್ಥಿತಿ ಬುಡಮೇಲಾಗಿದ್ದು, ಶಾಸಕಾಂಗದಲ್ಲಿ ಆದ ತಪ್ಪನ್ನು ನ್ಯಾಯಾಂಗ ಸರಿಪಡಿಸುವ ಪ್ರಯತ್ನ ಮಾಡಿದೆ. ಸುಪ್ರೀಂಕೋರ್ಟ್ ಇಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಬಹುಮುಖ್ಯ ತೀರ್ಪು ನೀಡಿದ್ದು, ನಾಳೆಯೇ (ನವೆಂಬರ್ 27) ಬಿಜೆಪಿ-ಎನ್ಸಿಪಿ ಬಂಡಾಯ ಶಾಸಕರ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದಿದೆ.

ಸುಪ್ರೀಂ ತೀರ್ಪಿನ ಬಳಿಕ ಲೆಕ್ಕಾಚಾರ ಉಲ್ಟಾ
ಕಳೆದ ಮೂರು ದಿನದಿಂದ ಬಿಜೆಪಿ ಹಿಡಿದಲ್ಲಿದ್ದಂತೆ ಕಾಣುತ್ತಿದ್ದ ಪರಿಸ್ಥಿತಿ ಈಗ ಎನ್ಸಿಪಿ-ಶಿವಸೇನಾ-ಕಾಂಗ್ರೆಸ್ನ ಪಕ್ಷದಲ್ಲಿರುವಂತೆ ಗೋಚರವಾಗುತ್ತಿದೆ. ಸುಪ್ರೀಂ ತೀರ್ಪಿನ ನಂತರ ಲೆಕ್ಕಾಚಾರಗಳು ತೀವ್ರವಾಗಿದ್ದು, ಎಷ್ಟು ಜನ ಶಾಸಕರು ಯಾವ ಕಡೆಗೆ ಇದ್ದಾರೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.

ಯಾವ ಪಕ್ಷ ಎಷ್ಟು ಸ್ಥಾನ ಗೆದ್ದಿವೆ?
ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು 105 ಸ್ಥಾನಗಳೊಟ್ಟಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆಯು 56, ಎನ್ಸಿಪಿ 54, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿತ್ತು. 13 ಪಕ್ಷೇತರರು ಗೆಲುವು ಸಾಧಿಸಿದ್ದರು. ಇದರ ಜೊತೆಗೆ ಬಹುಜನ ವಿಕಾಸ್ ಅಗಾಧಿ 3, ಓವೈಸಿಯ ಎಐಎಂಐಎಂ 2, ಸಮಾಜವಾದಿ ಪಕ್ಷ 2, ಪ್ರಹಾರ್ ಜನಶಕ್ತಿ ಪಕ್ಷ 2, ಸಿಪಿಐಎಂ 1, ಇತರ ಆರು ಪಕ್ಷಗಳು ತಲಾ ಒಂದೊಂದು ಸ್ಥಾನ ಗೆದ್ದಿವೆ.

ಹೊಟೆಲ್ನಲ್ಲಿ ಭದ್ರವಾಗಿದ್ದಾರೆ ಮೂರು ಪಕ್ಷಗಳ ಶಾಸಕರು
ಶಿವಸೇನಾ ಟ್ವಿಟ್ಟರ್ನಲ್ಲಿ ಹೇಳಿಕೊಂಡಿರುವಂತೆ ಎನ್ಸಿಪಿ-ಕಾಂಗ್ರೆಸ್-ಶಿವಸೇನಾ ಮತ್ತು ಇತರೆ ಪಕ್ಷಗಳ ಶಾಸಕರು ಸೇರಿ ಅವರ ಬಳಿ 162 ಶಾಸಕರ ಬಲ ಇದೆಯಂತೆ. ಈ ಎಲ್ಲ ಶಾಸಕರು ಮುಂಬೈನ ಹೊಟೆಲ್ನಲ್ಲಿ ಭದ್ರವಾಗಿದ್ದಾರೆ.

ಬಿಜೆಪಿ ಬಳಿ 105 ಸ್ವಂತ ಶಾಸಕರಿದ್ದಾರೆ
ಬಿಜೆಪಿ ಬಳಿ 105 ಶಾಸಕರಿದ್ದು ಎನ್ಸಿಪಿ ಬಂಡಾಯ ಶಾಸಕರು ಕೇವಲ 6 ಜನರಷ್ಟೆ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕೆಲವು ಸಣ್ಣ ಪಕ್ಷಗಳು ಹಾಗೂ ಕೆಲವು ಪಕ್ಷೇತರರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ ಸ್ಪಷ್ಟ ಸಂಖ್ಯೆಯನ್ನು ಬಿಜೆಪಿ ಹೊರಗೆಡವಿಲ್ಲ.

145 ಶಾಸಕರ ಬಲ ಬೇಕು ಅಧಿಕಾರ ಹಿಡಿಯಲು
ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬರೋಬ್ಬರಿ 145 ಶಾಸಕರ ಬಲ ಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಬಳಿ ಅಷ್ಟು ಸ್ಥಾನಗಳಿಲ್ಲ. ಓವೈಸಿ ಪಕ್ಷ, ಸಿಪಿಐಎಂ ಸೇರಿದಂತೆ ಇನ್ನೂ ಕೆಲವು ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲ ಪಡೆದಿರುವ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಬಳಿ ಬಹುಮತ ಸಾಬೀತು ಪಡಿಸುವಷ್ಟು ಶಾಸಕರು ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ?
ನಾಳೆ ಸಂಜೆ 5 ಗಂಟೆಗೆ ಬಹುಮತ ಸಾಬೀತು ಮಾಡಬೇಕೆಂದು ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದೆ. ಅಗತ್ಯ ಶಾಸಕರ ಬಲವಿಲ್ಲದ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡುವುದು ಬಹುತೇಕ ನಿಶ್ಚಯ ಎನ್ನಲಾಗುತ್ತಿದೆ.












Click it and Unblock the Notifications