ಗಂಟುಮೂಟೆ ಕಟ್ಟಿ ಸೋಲಾಪುರಕ್ಕೆ ಹೊರಟ ಶಿಂಧೆ
ಮುಂಬೈ, ಮೇ 22: ಕೇಂದ್ರ ಮಾಜಿ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದು, ಸ್ವಂತ ಊರಾದ ಮುಂಬೈ ತಲುಪಿಕೊಂಡಿದ್ದಾರೆ. ಹೀನಾಯ ಸೋಲು ಅನುಭವಿಸಿ ಇತಿಹಾಸ ನಿರ್ಮಿಸಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದಲ್ಲಿ ಅಧಿಕೃತ ನಿವಾಸ ಖಾಲಿ ಮಾಡಿದ ಮೊದಲ ಸಚಿವರಾಗಿದ್ದಾರೆ.
74 ವರ್ಷದ ಸುಶೀಲ್ ಕುಮಾರ್ ಸಾಂಬಾಜಿರಾವ್ ಶಿಂಧೆ ಅವರು ತಮ್ಮ ಜನ್ಮಸ್ಥಳವಾದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸೋತಿದ್ದರು. ಕೃಷ್ಣ ಮೆನನ್ ಮಾರ್ಗ್ ರಸ್ತೆಯಲ್ಲಿರುವ ಬಂಗಲೆಯನ್ನು ಸರಕಾರಕ್ಕೆ ಹಸ್ತಾಂತರಿಸಿದ್ದಾರೆ.

ಅಂದಹಾಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಫಲಿತಾಂಶ ಹೊರಬೀಳುವುದಕ್ಕೂ ಮುನ್ನವೇ ತಮ್ಮ ಮನೆ ಖಾಲಿ ಮಾಡಿದ್ದರು. ಅವರೀಗ ಮೋತಿಲಾಲ್ ನೆಹರೂ ಮಾರ್ಗ್ ರಸ್ತೆಯಲ್ಲಿರುವ ನಂಬರ್ 3 ಮನೆಗೆ ಶಿಫ್ಟ್ ಆಗಿದ್ದಾರೆ.
ನಿಯಮಗಳ ಪ್ರಕಾರ ಸಚಿವರುಗಳು ತಮ್ಮ ಅಧಿಕಾರ ಕಳೆದುಕೊಂಡ ಒಂದು ತಿಂಗಳೊಳಗಾಗಿ ಅಧಿಕೃತ ನಿವಾಸಗಳಿಂದ ವಾಸ್ತವ್ಯವನ್ನು ತೆರವುಗೊಳಿಸಬೇಕಾಗುತ್ತದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಎಲ್ಲಿದ್ದರೂ ಹುಡುಕಿತರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೂ ಸೇರಿದಂತೆ ಸುಶೀಲ್ ಕುಮಾರ್ ಶಿಂಧೆ ಅವರು ಗೃಹಸಚಿವರಾಗಿ ಅನೇಕ ವಿವಾವದಗಳನ್ನು ಸೃಷ್ಟಿಸಿದ್ದರು.
ಕೇಂದ್ರದಲ್ಲಿ ನಾನಾ ಕಾತೆಗಳ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರು ಈ ಹಿಂದೆ ಆಂಧ್ರ ರಾಜ್ಯಪಾಲರೂ ಸಹ ಆಗಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. 2006ರ ನಂತರ ದೆಹಲಿಗೆ ವಾಪಸಾಗಿ ಕೇಂದ್ರದಲ್ಲಿ ಇಂಧನ ಖಾತೆ ಸಚಿವರು ತದನಂತರ ಗೃಹ ಸಚಿವರಾಗಿ ಇದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.












Click it and Unblock the Notifications