ಇನ್ನೂ ಭಾರೀ ಮಳೆ ಸುರಿಯಲಿದೆಯಂತೆ, ಮುಂಬೈ ಎಚ್ಚರ!
ಮುಂಬೈ, ಆಗಸ್ಟ್ 29 : ಮುಂಬೈನಲ್ಲಿ ಮಳೆ ಪರಿ ಹಚ್ಚಿಹೊಡೆಯುತ್ತಿದೆಯೆಂದರೆ ಬಾಂದ್ರಾ ವೊರ್ಲಿ ಸಮುದ್ರ ತಟದಲ್ಲಿ ಮುಂದೆ ನಿಂತವರು ಕಣ್ಣಿಗೆ ಕಾಣಿಸುತ್ತಿಲ್ಲ. ಕೇವಲ ಮೂರು ಗಂಟೆಗಳಲ್ಲಿ 65 ಮಿಮೀ ಮಳೆಯಾಗಿದೆಯೆಂದರೆ ಯಾವ ಪರಿ ಚಚ್ಚಿರಬಹುದು ಲೆಕ್ಕಹಾಕಿ.
ಕಳೆದ 10 ವರ್ಷಗಳಲ್ಲೇ ಸುರಿದ ಭಾರೀ ವರ್ಷಾಧಾರೆಗೆ ಮುಂಬೈ ಜನರು ತತ್ತರಿಸಿ ಹೋಗಿದ್ದಾರೆ. ಕಂಡಲ್ಲೆಲ್ಲ ನೀರೋ ನೀರು. ಬೀದಿಬೀದಿಯಲ್ಲಿ ಇಡಲಾಗಿದ್ದ ಗಣೇಶನ ಮೂರ್ತಿಗಳೆಲ್ಲ ಮಳೆ ನೀರಲ್ಲಿ ವಿಸರ್ಜನೆಗೊಂಡಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮುಂಬೈನಲ್ಲಿ ಕಳೆದ 12 ವರ್ಷಗಳಲ್ಲೇ ದಾಖಲೆ ಮಳೆ
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಇದೇರೀತಿ ಭಾರೀ ಮಳೆ ಸುರಿಯಲಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಕೂಡ ಏಳುವ ಸಾಧ್ಯತೆಯಿದೆ. ಹೀಗಾಗಿ ಸಮುದ್ರದ ಬಳಿ ವಿಹಾರಕ್ಕಾಗಲಿ, ಸಾಹಸ ಮಾಡಲಾಗಲಿ ಹೋಗಬಾರದೆಂದು ಕಟ್ಟೆಚ್ಚರ ನೀಡಲಾಗಿದೆ.
ಜನರಿಂದ ತುಂಬಿರುವ ಬಸ್ಸುಗಳು ಗಮ್ಯ ತಲುಪಲು ಪರದಾಡುತ್ತಿವೆ, ರೈಲುಗಳು ಹಲವೆಡೆಗಳಲ್ಲಿ ನಿಧಾನವಾಗಿವೆ, ಕೆಲವೆಡೆ ನಿಂತೇ ಹೋಗಿವೆ. ಇನ್ನು ವಿಮಾನ ಹಾರಾಟವನ್ನು ಕೂಡ ನಿಲ್ಲಿಸಲಾಗಿದೆ. ರಸ್ತೆಗಳು ಸಮುದ್ರವಾಗಿವೆ, ಮನೆಗಳು ಕೆರೆಗಳಾಗಿವೆ, ಆಸ್ಪತ್ರೆಗಳು ಕಾಲುವೆಗಳಂತಾಗಿವೆ. ಜನರು ಏನು ಮಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಾರೆ.
ಮುಖ್ಯಮಂತ್ರಿ ಪಕೋಡಾ ತಿನ್ನುತ್ತ ಕುಳಿತಿಲ್ಲ
ಈ ನಡುವೆ, ಎಲ್ಲ ಮುಖ್ಯಮಂತ್ರಿಗಳಂತೆ ಮಳೆಯಲ್ಲಿ ಪಕೋಡಾ ತಿನ್ನುತ್ತ ಬೆಚ್ಚಗೆ ಕೂಡದೆ, ಆಪತ್ತು ನಿರ್ವಹಣಾ ಕೇಂದ್ರಕ್ಕೆ ಬಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಜನರಿಗೆ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಅವಶ್ಯಕತೆ ಇಲ್ಲದಿದ್ದರೆ ಮನೆಯಿಂದ ಹೊರಬೀಳಬೇಡಿ, ಟ್ರಾಫಿಕ್ ಪೊಲೀಸರ ಆದೇಶ ಪಾಲಿಸಿ ಇತ್ಯಾದಿ.
ಉಪಯುಕ್ತ ಸಹಾಯವಾಣಿ ಇಲ್ಲಿದೆ
ಮುಂಬೈ ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ಎಮರ್ಜೆನ್ಸಿ ಸಂಖ್ಯೆ 1916. ಮುಂಬೈನ ಇತರ ಸಹಾಯವಾಣಿ ಈರೀತಿಯಿದೆ : ಸಿಆರ್ ಕಂಟ್ರೋಲ್ ರೂಮ್ - 022-22620173, ಡಬ್ಲ್ಯೂಆರ್ ಕಂಟ್ರೋಲ್ ರೂಮ್ - 022-23094064, ಟ್ರಾಫಿಕ್ ವಾಟ್ಸಾಪ್ ನಂಬರ್ - 8454999999.
ಮುಂಬೈ: ಆಸ್ಪತ್ರೆಗೆ ನುಗ್ಗಿದ ನೀರು; ರೋಗಿಗಳ ಪರದಾಟ
ಪೊಲೀಸರಿಂದ ಜನರಿಗೆ ಸಂದೇಶ ರವಾನೆ
ಅವಶ್ಯಕತೆಯಿದ್ದರೆ ಪೊಲೀಸರಿಗೆ ತುರ್ತಾಗಿ ಕರೆ ಮಾಡಿರಿ, ಅವರು ಸಹಾಯಕ್ಕೆ ಬರುತ್ತಾರೆ, ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ, ಏನು ಮಾಡಬೇಕೆಂದು ವಿಚಾರ ಮಾಡಿಯೇ ಮುಂದಡಿಯಿಡಿ, ಅವಶ್ಯತೆ ಇದ್ದರೆ ಮಾತ್ರ ಮನೆಯಿಂದ ಹೊರಡಿ ಇತ್ಯಾದಿ ಸಂದೇಶಗಳನ್ನು ಪೊಲೀಸರು ರವಾನಿಸುತ್ತಿದ್ದಾರೆ.
ಗುರುದ್ವಾರದಲ್ಲಿ ಉಚಿತ ಆಶ್ರಯ, ಊಟ
ಮುಂಬೈನಲ್ಲಿರುವ ಎಲ್ಲ ಗುರುದ್ವಾರಗಳು ತೆರೆದಿರುತ್ತವೆ, ಮಳೆಯಲ್ಲಿ ಸಿಲುಕಿದವರಿಗೆ ಬೇಕಿದ್ದ ಆಶ್ರಯ ನೀಡುವುದು ಮಾತ್ರವಲ್ಲ, ಆಹಾರವನ್ನು ಕೂಡ ಉಚಿತವಾಗಿ ಒದಗಿಸಲಾಗುವುದು ಎಂದು ಘೋಷಿಸಿದೆ. ಈಗಾಗಲೆ ಸಮುದ್ರದಲ್ಲಿ 3ರಿಂದ 4 ಮೀಟರ್ ಎತ್ತರದ ಅಲೆಗಳು ಏಳುತ್ತಿರುವ ವರ್ತಮಾನ ಬಂದಿದೆ.
'ಮನೆಯಲ್ಲೇ ಇರಿ, ಹೊರಗೆ ಬರಬೇಡಿ': ಮುಂಬೈ ವಾಸಿಗಳಿಗೆ ಸೂಚನೆ
ಕಟ್ಟಿದ ತೆರಿಗೆಯೆಲ್ಲ ಚರಂಡಿಪಾಲು
ಮುಂಬೈ ಮಹಾನಗರ ಪಾಲಿಕೆಗೆ ನಾವು ಕಟ್ಟುತ್ತಿರುವ ತೆರಿಗೆ ಇಡೀ ದೇಶದಲ್ಲಿಯೇ ಅತೀ ಹೆಚ್ಚಿನದು, ಇಂದಿನ ಸ್ಥಿತಿ ನೋಡಿದರೆ ನಾವು ನೀಡಿದ ಹಣವೆಲ್ಲ ಚರಂಡಿಯಲ್ಲಿ ಕೊಚ್ಚಿಹೋಗಿದೆ ಎಂದು ಟ್ವಿಟ್ಟಿಗರೊಬ್ಬರು ಪಾಲಿಕೆಯ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಪಾಲಿಗೆ ಇಂಥ ಮಳೆ ಎದುರಿಸಲು ಸಿದ್ಧವಾಗಿರಲಿಲ್ಲ ಎಂಬುದು ಇಂದಿನ ಪರಿಸ್ಥಿತಿಯಿಂದ ಸಾಬೀತಾಗಿದೆ.
ರೈಲು ನಿಲ್ದಾಣಗಳಲ್ಲಿ ಸ್ಥಿತಿ ಅಯೋಮಯ
ರೈಲು ನಿಲ್ದಾಣಗಳಲ್ಲಿ ಸ್ಥಿತಿಯಂತೂ ಅಯೋಮಯವಾಗಿದೆ. ರೈಲು ಹಳಿಗಳ ಮೇಲೆ ಚಲಿಸಬೇಕೋ, ಬೋಟಿನಂತೆ ನೀರಿನಲ್ಲಿ ತೇಲಬೇಕೋ ತಿಳಿಯದಾಗಿದೆ. ಪ್ಲಾಟ್ ಫಾರಂ ಮಟ್ಟಕ್ಕೆ ನೀರು ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದೆ. ಜನರು ಬೇರೆ ದಾರಿಯಿಲ್ಲದೆ ಛತ್ರಿ ಹಿಡಿದುಕೊಂಡು ನಿಂತು ನೋಡುತ್ತಿದ್ದಾರಷ್ಟೆ. ಕನ್ನಡಿಗರಿದ್ದರೆ, ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು... ಹಾಡುತ್ತ ನಿಂತಿರುತ್ತಾರೆ.