ಭಾರಿ ಮಳೆಗೆ ತತ್ತರಿಸಿದ ಮಹಾನಗರಿ ಮುಂಬೈ : ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
ಮುಂಬೈ, ಜುಲೈ 7: ಮುಂಬೈನಲ್ಲಿ ಸತತ ನಾಲ್ಕನೇ ದಿನವಾದ ಗುರುವಾರವೂ ಭಾರಿ ಮಳೆ ಮುಂದುವರಿದಿದ್ದು, ನಗರದ ಬಹುತೇಕ ಭಾಗಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ. ಸತತ ನಾಲ್ಕನೇ ದಿನವೂ ಸುರಿಯುತ್ತಿರುವ ಮಳೆಯಿಂದಾಗಿ ಹಳಿ ಮೇಲೆ ಗೋಡೆ ಕುಸಿದಿದ್ದು, ಕೇಂದ್ರ ರೈಲ್ವೆ ಮಾರ್ಗದಲ್ಲಿ ಸ್ಥಳೀಯ ರೈಲು ಸಂಚಾರ ವಿಳಂಬವಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ವ್ಯಕ್ತಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಇದಲ್ಲದೇ, ಪಾಲ್ಘರ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾರೀ ಮಳೆಯಿಂದಾಗಿ ಕನಿಷ್ಠ 32 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ, ಹಲವು ರಸ್ತೆಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಚುನಾಭಟ್ಟಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ 15 ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದರು.
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
ಭಾರಿ ಮಳೆಯ ಕಾರಣ ಸಮುದ್ರದಲ್ಲಿ ಭಾರಿ ಅಲೆಗಳು ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನ ಎಲ್ಲಾ ಬೀಚ್ಗಳನ್ನು ಸಾರ್ವಜನಿಕರಿಗೆ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ತೆರೆಯಲಾಗುವುದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ಮುಂಬೈ, ಥಾಣೆ, ಪಾಲ್ಘರ್ ನಲ್ಲಿ ರೆಡ್ ಅಲರ್ಟ್
ಗುರುವಾರ ಬೆಳಿಗ್ಗೆ 10 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪಾಲ್ಘರ್ ಜಿಲ್ಲೆಯಲ್ಲಿ 89.27 ಮಿಮೀ ಮಳೆಯಾಗಿದೆ, ವಾಡಾ ತಾಲೂಕಿನಲ್ಲಿ ಗರಿಷ್ಠ 135 ಮಿಮೀ ಮಳೆಯಾಗಿದೆ. ಜುಲೈ 9 ರವರೆಗೆ ರಾಯಗಡ, ರತ್ನಗಿರಿ ಮತ್ತು ಸಿಂಧುದುರ್ಗಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 10 ರವರೆಗೆ ಮುಂಬೈ ಮತ್ತು ಥಾಣೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈ, ಥಾಣೆ ಮತ್ತು ಪಾಲ್ಘರ್ನಲ್ಲಿ ಶುಕ್ರವಾರ ರೆಡ್ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬೈನ ಜಯಂತ್ ಸರ್ಕಾರ್ ಹೇಳಿದ್ದಾರೆ. ಕಳೆದ 3-4 ದಿನಗಳಲ್ಲಿ, ಮಾನ್ಸೂನ್ನ ಅನುಕೂಲಕರ ಪರಿಸ್ಥಿತಿಯಿಂದಾಗಿ ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ ಎಂದು ಅವರು ಹೇಳಿದರು. ಮುಂದಿನ 4-5 ದಿನಗಳವರೆಗೆ ಇದೇ ರೀತಿ ಮಳೆಯಾಗುತ್ತದೆ ಎಂದು ಅವರು ಹೇಳಿದರು.
ಮುಂಬೈನ ಹಲವೆಡೆ ಸಂಚಾರ ಅಸ್ತವ್ಯಸ್ತ
ದಕ್ಷಿಣ ಮುಂಬೈನ ಮಸೀದಿ ಮತ್ತು ಸ್ಯಾಂಡ್ಹರ್ಸ್ಟ್ ರಸ್ತೆ ನಿಲ್ದಾಣಗಳ ನಡುವಿನ ಟ್ರ್ಯಾಕ್ನಲ್ಲಿ ಗೋಡೆಯ ಒಂದು ಸಣ್ಣ ಭಾಗವು ಕುಸಿದಿದ್ದರಿಂದ ಹಾರ್ಬರ್ ಲೈನ್ನ ಡೌನ್ (ಉತ್ತರ-ಬೌಂಡ್) ಟ್ರ್ಯಾಕ್ನಲ್ಲಿ ರೈಲು ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ನೀಲಂ ಜಂಕ್ಷನ್, ಡಿಯೋನಾರ್, ಮಂಖ್ರುದ್ ರೈಲ್ವೇ ಸೇತುವೆ, ಎವರಾರ್ಡ್ ನಗರ, ಅಂಟಾಪ್ ಹಿಲ್, ಚೆಂಬೂರ್, ದಾದರ್ ಟಿಟಿ ಜಂಕ್ಷನ್, ಹಿಂದ್ಮಾತಾ ಜಂಕ್ಷನ್, ಸಕ್ಕರ್ ಪಂಚಾಯತ್, ವಡಾಲ, ಕಿಂಗ್ಸ್ ಸರ್ಕಲ್, ಮಾಟುಂಗಾ, ಕುರ್ಲಾ ಬಳಿ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲ್ಘರ್ನಲ್ಲಿ ಪಂಡರತರ ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದು ಕನಿಷ್ಠ 12 ಗ್ರಾಮಗಳನ್ನು ಸಂಪರ್ಕ ಕಳೆದುಕೊಂಡಿವೆ. ವಸಾಯಿ ತಾಲೂಕಿನ ಉಸ್ಗಾಂವ್ಗೆ ಪಂಡರತರ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
ಕಳೆದ 24 ಗಂಟೆಯಲ್ಲಿ 107 ಮಿ.ಮೀ. ಮಳೆ
ಜುಲೈ 4 ರಿಂದ ಮುಂಬೈ ಭಾರಿ ಮಳೆಯಿಂದ ತತ್ತರಿಸಿದೆ. ಕಳೆದ 24 ಗಂಟೆಗಳಲ್ಲಿ, ದಕ್ಷಿಣ ಮುಂಬೈನಲ್ಲಿ ಸರಾಸರಿ 107 ಮಿ.ಮೀ. ಮಳೆಯಾಗಿದೆ. ಪೂರ್ವ ಉಪನಗರಗಳಲ್ಲಿ 172 ಮಿ.ಮೀ. ಮತ್ತು ಪಶ್ಚಿಮದಲ್ಲಿ 152 ಮಿ.ಮೀ. ಮಳೆ ದಾಖಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬುಧವಾರ ನಡೆದ ಸಭೆಯೊಂದರಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಬಿಎಂಸಿ ನಡುವೆ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲು ಮತ್ತು ಮುಂಬೈನಲ್ಲಿ ನೀರು ತುಂಬುವುದು ಮತ್ತು ಉಪನಗರ ರೈಲು ಸೇವೆಗಳ ಅಡಚಣೆಯ ಬಗ್ಗೆ ಮಾಹಿತಿ ಪ್ರಸಾರ ಮಾಡಲು ಸೂಚಿಸಿದ್ದಾರೆ.
ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ
ಚಿಪ್ಲುನ್ ಬಳಿಯ ಪರಶುರಾಮ್ ಘಾಟ್ ವಿಭಾಗದಲ್ಲಿ ಭೂಕುಸಿತದ ನಂತರ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಬದಲಾಯಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸೋಮವಾರ ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿದ ಪರಶುರಾಮ್ ಘಾಟ್ನ ಬದಲಾಗಿ ಚಿರ್ಣಿ-ಲೋಟೆ-ಕಲಂಬಸ್ತೆ ರಸ್ತೆಯ ಮೂಲಕ ವಾಹನಗಳು ಸಂಚರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳನ್ನು ತೆಗೆಯುವ ಕಾರ್ಯ ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಘಾಟ್ ಸಂಚಾರವನ್ನು ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.
Recommended Video