ಸಂಸದೆ ನವನೀತ್ ರಾಣಾಗೆ ಭೂಗತ ಜಗತ್ತಿನ ಸಂಪರ್ಕವಿದೆ : ಸಂಜಯ್ ರಾವತ್
ಮುಂಬೈ, ಏಪ್ರಿಲ್ 28 : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲಿಸಾ ಪಠಣೆ ಮಾಡುವುದಾಗಿ ಹೇಳಿ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ರಾಣಾ ವಿರುದ್ದ ಮತ್ತೊಂದು ಆರೋಪ ಕೇಳಿ ಬಂದಿದೆ.
ಬಂಧಿತೆ ನವನೀತ್ ರಾಣಾಗೆ ಭೂಗತ ಜಗತ್ತಿನ ಸಂಪರ್ಕವಿದೆ ಎಂದು ಶಿವಸೇನೆ ಆರೋಪಿಸಿದೆ. ಅಲ್ಲದೆ ಫೈನಾನ್ಶಿಯರ್ ಮತ್ತು ಬಿಲ್ಡರ್ ಯೂಸೂಫ್ ಲಕಡವಾಲಾ ಅವರಿಂದ 80 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆ ಆಗಬೇಕು ಎಂದು ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಲಕಡಾವಾಲಾರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮುಂಬೈ ಅರ್ಥರ್ ರೋಡ್ ಜೈಲಿನಲ್ಲಿ ಲಕಡವಾಲಾ ಸಾವನ್ನಪ್ಪಿದ್ದರು.
ಅಲ್ಲದೆ 1993 ರಲ್ಲಿ ಮುಂಬೈನಲ್ಲಿ ಸಂಭವಿಸಿದ ಸರಣಿ ಸ್ಪೋಟಗಳ ಹಿಂದೆ ಭೂಗತ ಜಗತ್ತಿನ ಕೈವಾಡವಿತ್ತು. ಅದರಂತೆ ಈಗ ಹನುಮಾನ್ ಚಾಲೀಸಾ ಪಠಣೆಯ ಹಿಂದೆಯೂ ಭೂಗತ ಜಗತ್ತಿನ ಕೈವಾಡವಿದೆ ಎಂದು ಸಂಜಯ್ ರಾವತ್ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂಜಯ್ ರಾವತ್, 'ಅಕ್ರಮ ಹಣ ವರ್ಗಾವಣೆ ಹಾಗೂ ಡಿ ಗ್ಯಾಂಗ್ ಜೊತೆಗಿನ ಸಂರ್ಪಕದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಯೂಸೂಫ್ ಲಕಡವಾಲಾ ಅವರನ್ನು ಬಂಧಿಸಿತ್ತು. ಆದರೆ ಆತ ವಿಚಾರಣೆ ವೇಳೆ ಜೈಲಿನಲ್ಲಿ ಸಾವನ್ನಪ್ಪಿದ್ದ. ಆದರೆ, ಪ್ರಶ್ನೆ ಏನೆಂದರೆ ಇಡಿ ಈ ಪ್ರಕರಣದ ವಿರುದ್ದ ತನಿಖೆ ನಡೆಸಿತಾ? ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ,'' ಎಂದು ಟ್ವೀಟ್ ಮಾಡಿದ್ದಾರೆ.
Recommended Video
'ಇನ್ನು ಇಷ್ಟೆಲ್ಲಾ ಆರೋಪಗಳಿದ್ದರೂ ಸಹ ಬಿಜೆಪಿ ನವನೀತ್ ರಾಣಾ ಹಾಗೂ ಪತಿ ರವಿ ರಾಣಾ ಅವರನ್ನ ರಕ್ಷಿಸಲು ಪ್ರಯತ್ನಿಸುತ್ತಿದೆ. ಭೂಗತ ಜಗತ್ತಿನ ಸಂಪರ್ಕ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದ ಯೂಸುಫ್ ಬಳಿ ನವನೀತ್ 80 ಲಕ್ಷ ಕೂಡ ಪಡೆದಿದ್ದಾರೆ. ಅಲ್ಲದೆ ಯೂಸುಫ್ ಬಳಿ ಇದ್ದ ಅಕ್ರಮ ಹಣ ನವನೀತ್ ಬ್ಯಾಂಕ್ ಖಾತೆಯಲ್ಲಿದೆ. ಅಕ್ರಮ ಹಣದಲ್ಲಿ ಠಾಣಾ ದಂಪತಿಗಳ ಪಾಲು ಸಹ ಇದೆ. ಇಡಿ ಅವರು ಯಾವಾಗ ವಿಚಾರಣೆಗೆ ಒಳಪಡಿಸುತ್ತದೆ. ಡಿ ಗ್ಯಾಂಗ್ ಸದಸ್ಯರನ್ನು ಯಾಕೆ ರಕ್ಷಿಸಲಾಗುತ್ತಿದೆ. ಮತ್ತು ಇಷ್ಟೆಲ್ಲಾ ಬೆಳವಣಿಗೆಯಾಗುತ್ತಿದ್ದರೂ ಸಹ ಬಿಜೆಪಿ ಯಾಕೆ ಮೌನ ವಹಿಸುತ್ತಿದೆ.' ಎಂದು ಸಂಜಯ್ ರಾವತ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.