'ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೂ ಗಲ್ಲಿಗೇರಿಸಿ!'
ಮುಂಬೈ, ಏ. 11 : "ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಇಸ್ಲಾಂ ಹೇಳುತ್ತದೆ. ಆದರೆ, ಅತ್ಯಾಚಾರದಂಥ ಅಪರಾಧ ನಡೆದಾಗ ಪುರುಷರನ್ನು ಮಾತ್ರ ಗಲ್ಲಿಗೇರಿಸಲಾಗುತ್ತದೆ, ಮಹಿಳೆಯರಿಗೆ (ಶಿಕ್ಷೆ) ಏನೂ ಆಗುವುದೇ ಇಲ್ಲ. ಇದರಲ್ಲಿ ಮಹಿಳೆಯರ ತಪ್ಪೂ ಇರುತ್ತದೆ. ಅವರನ್ನು ಕೂಡ ಗಲ್ಲಿಗೇರಿಸಬೇಕು!"
ಇಂಥದೊಂದು ಹೇಳಿಕೆಯನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರ ಮೇಲೆ, ಸಮಾಜದ ಮೇಲೆ, ಕಾನೂನಿನ ಮೇಲೆ, ದೇಶದ ಬಗ್ಗೆ, ಕನಿಷ್ಠಪಕ್ಷ ತನ್ನ ಮೇಲೆ ಕೂಡ ಗೌರವವಿಲ್ಲದ ಮನುಷ್ಯ ಮಾತ್ರ ಹೇಳಲು ಸಾಧ್ಯ. ಇಂಥ ಹೀನಾಯಕಾರಿ ಹೇಳಿಕೆ ನೀಡಿದ್ದು, ಸಮಾಜವಾದಿ ಪಕ್ಷದ ಮಹಾರಾಷ್ಟ್ರದ ಧುರೀಣ ಅಬು ಅಜ್ಮಿ!

ಅತ್ಯಾಚಾರ ಎಸಗಿದ ಪುರುಷರನ್ನು ಗಲ್ಲಿಗೇರಿಸಬಾರದು ಎಂದು ಅವರದೇ ಪಕ್ಷದ ರಾಷ್ಟ್ರೀಯ ನಾಯಕ ಮುಲಾಯಂ ಸಿಂಗ್ ಯಾದವ್ ನೀಡಿದ ಹೇಳಿಕೆಗೆ ಅಬು ಅಜ್ಮಿಯ ಪ್ರತಿಕ್ರಿಯೆಯನ್ನು ಕೇಳಿದಾಗ ನೀಡಿದ ಉತ್ತರವಿದು. ಇಂಥವರನ್ನು ಆರಿಸಿದ ಕಳಿಸಿದ ಮತದಾರರಿಗೆ ಏನೆನ್ನಬೇಕು? ತಮಾಷೆಯೆಂದರೆ, ಈ ಪುರುಷನಿಗೂ ಮನೆಯಲ್ಲಿ ಐವರು ಪುತ್ರಿಯರಿದ್ದಾರೆ. ಅಪ್ಪನ ಇಂಥ ಹೇಳಿಕೆಗೆ ಮಕ್ಕಳೇನಂತಾರೋ? [ಅತ್ಯಾಚಾರಕ್ಕೆ ಕಾರಣ ಯಾರು?]
ಇದಕ್ಕೂ ಮೊದಲು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರು, ಹುಡುಗರಿಂದ ಇಂಥ ತಪ್ಪು (ಅತ್ಯಾಚಾರ) ಆಗುತ್ತಲೇ ಇರುತ್ತದೆ. ಅದರರ್ಥ ಅವರನ್ನು ಗಲ್ಲಿಗೇರಿಸಬೇಕೆ? ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಟ್ವಿಟ್ಟರಲ್ಲಿ ಛೀಥೂ ಎಂದು ಮುಲಾಯಂ ಸಿಂಗ್ ಮೇಲೆ ಉಗಿಯುತ್ತಿದ್ದಾರೆ.
ಅಬು ಅಜ್ಮಿ ನೀಡಿದ ಮತ್ತೊಂದು ಹೇಳಿಕೆ ಹೀಗಿದೆ... "ಭಾರತದಲ್ಲಿ ಸಮ್ಮತಿಯಿಂದ ಸಂಭೋಗ ನಡೆದರೆ ಸರಿ ಅಂತೀರಿ, ಆದರೆ, ಅದೇ ಮಹಿಳೆ ಆರೋಪ ಮಾಡಿದರೆ ತಪ್ಪು ಅಂತೀರಿ! ಇಂದಿನ ಹುಡುಗಿಯರು ಸ್ಪರ್ಶಿಸಿದರೂ ಆರೋಪಿಸುತ್ತಾರೆ, ಸ್ಪರ್ಶಿಸದಿದ್ದರೂ ಆರೋಪಿಸುತ್ತಾರೆ. ಇದರಿಂದ ಪುರುಷರ ಗೌರವ ಮುಕ್ಕಾಗುತ್ತಿದೆ. ಸಮ್ಮತಿ ಇದ್ದರೂ ಸರಿ ಅಥವಾ ಇಲ್ಲದಿದ್ದರೂ ಸರಿ ಅತ್ಯಾಚಾರವಾದರೆ ಮಹಿಳೆಯನ್ನೂ ಗಲ್ಲಿಗೇರಿಸಬೇಕು!"
ಇಂಥ ಸಮಸ್ಯೆಗೆ ಪರಿಹಾರವೇನು ಎಂದು ಕೇಳಿದಾಗ, "ಯಾವುದೇ ಮಹಿಳೆ, ಮದುವೆಯಾಗಿರಲಿ, ಮದುವೆಯಾಗಿಲ್ಲದಿರಲಿ, ಯಾವುದೇ ಪುರುಷನೊಂದಿಗೆ ಹೋದರೆ ಇಬ್ಬರನ್ನೂ ಗಲ್ಲಿಗೇರಿಸಬೇಕು. ಪುರುಷನೊಂದಿಗೆ ಹೋಗಲು ಮಹಿಳೆಗೆ ಅನುಮತಿ ನೀಡಲಾಗಿದ್ದರೂ ಆಕೆಯನ್ನೂ ಗಲ್ಲಿಗೇರಿಸಬೇಕು" ಎಂದು ಬೊಗಳಿದ್ದಾನೆ.
ಅಬು ಅಜ್ಮಿ ನೀಡಿದ ಹೇಳಿಕೆಗೆ, ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅವರ ಮಗ ಫರ್ಹಾನ್ ಅಜ್ಮಿ ಅಸಮ್ಮತಿ ಸೂಚಿಸಿದ್ದಾರೆ. "ಅತ್ಯಾಚಾರಿ ಪುರುಷರನ್ನು ನೂರು ಬಾರಿ (!?) ಗಲ್ಲಿಗೇರಿಸಬೇಕು. ನನಗೂ ಐವರು ಸಹೋದರಿಯರಿದ್ದಾರೆ. ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications