ವಾಂಖೆಡೆಗೆ 8 ಕೋಟಿ ರೂ. ಎಂದು ಗೋಸಾವಿ ಹೇಳಿದ್ದರ ಸಾಕ್ಷ್ಯಾಧಾರವಿದೆ - ಪ್ರಭಾಕರ್
ಮುಂಬೈ ಅಕ್ಟೋಬರ್ 26: ಮುಂಬೈ ಕ್ರೂಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮುಂಬೈ ಡ್ರಗ್ಸ್ ಪ್ರಕರಣದ ಎನ್ಸಿಬಿ ತನಿಖಾಧಿಕಾರಿ ಸಮೀರ್ ವಾಂಖೆಡೆ ಅವರ ಮೇಲೆ ಆರೋಪಗಳ ಸುರಿ ಮಳೆಯೇ ಸುರಿಯುತ್ತಿದೆ. ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಿರಣ್ ಗೋಸಾವಿ ಅಂಗರಕ್ಷಕರಾಗಿರುವ ಪ್ರಭಾಕರ್ ಅವರು ಪ್ರಕರಣ ಕೈಬಿಡಲು ಸಮೀರ್ ಹಾಗೂ ಗೋಸಾವಿ ಮಧ್ಯೆ 25ಕೋಟಿ ಡೀಲ್ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ತಮ್ಮ ಬಳಿ ಇವೆ ಎಂದು ಪ್ರಭಾಕರ್ ಇಂದು ಹೇಳಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಆಪಾದಿತ ಖಾಸಗಿ ತನಿಖಾಧಿಕಾರಿ ಕೆಪಿ ಗೋಸಾವಿ ಫೋಟೋಗಳು ಭಾರೀ ವೈರಲ್ ಆಗಿದ್ದವು. ಇದಾದ ಬಳಿಕ ಗೋಸಾವಿ ತಲೆಮರಿಸಿಕೊಂಡಿದ್ದಾನೆ. ಇವರ ಪತ್ತೆ ಕಾರ್ಯವೂ ನಡೆಯುತ್ತಿದೆ. ಹೀಗಿರುವಾಗ ಪ್ರಭಾಕರ್ ಸಮೀರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಗೋಸಾವಿ ಹಾಗೂ ಸ್ಯಾಮ್ ಡಿ ಸೋಜಾ ನಡುವೆ ಪ್ರಕರಣ ಕೈಬಿಡಲು ದೊಡ್ಡ ಡೀಲ್ ನಡೆದಿತ್ತು. ಈ ಒಪ್ಪಂದದಲ್ಲಿ ಎಂಟು ಕೋಟಿ ಸಮೀರ್ ವಾಂಖೆಡೆಗೆ ಸೇರುತ್ತದೆ ಎಂದು ಗೋಸಾವಿ ಹೇಳಿದ್ದಾರೆ. ಸ್ಯಾಮ್ ಡಿಸೋಜಾ ಮೂಲಕ ಈ ಡೀಲ್ ಮಾಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ.
ಸ್ಯಾಮ್ ಡಿಸೋಜಾ ಯಾರು?
'ಸ್ಯಾಮ್ ಡಿಸೋಜಾ ಮಹಾರಾಷ್ಟ್ರದ ಮಾತ್ರವೇ ಅಲ್ಲ ಭಾರತದ ದೊಡ್ಡ ಅಕ್ರಮ ಹಣ ವರ್ಗಾವಣೆ ಮಾಡುವ ವ್ಯಕ್ತಿ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡುವುದೇ ಆತನ ಕಾರ್ಯ. ಆತನಿಗೆ ರಾಜಕಾರಣಿಗಳ, ಐಎಎಸ್-ಐಪಿಎಸ್ ಅಧಿಕಾರಿಗಳ ಸ್ನೇಹವಿದೆ. ಎನ್ಸಿಬಿ ಅಧಿಕಾರಿಗಳ ಸ್ನೇಹವೂ ಇವೆ. ಅವರೆಲ್ಲರ ಪರವಾಗಿ ಈತ ಅಕ್ರಮ ಹಣ ವಸೂಲಿ ಮಾಡಿ ಅದನ್ನು ವರ್ಗಾವಣೆ ಮಾಡುತ್ತಾನೆ. ಇದೇ ಅವನ ಕೆಲಸ. ಅಂಥಹಾ ವ್ಯಕ್ತಿ ಎನ್ಸಿಬಿ ಕಚೇರಿಯಲ್ಲಿ ಕುಳಿತಿದ್ದಾನೆ. ಇದೆಲ್ಲವೂ ಒಂದು ಚೈನ್ ಲಿಂಕ್ ಎನ್ನಲಾಗುತ್ತದೆ.
ಕೆಪಿ ಗೋಸಾವಿಯವರ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್, ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಅವರು 25 ಕೋಟಿ ರೂ. ಡೀಲ್ ಆಗಿತ್ತು. ಮಾತುಕತೆಯ ಬಳಿಕ 18 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ 8 ಕೋಟಿ ರೂ. ಸೇರಲಿದೆ ಎಂದು ಅವರು ಚರ್ಚಿಸುತ್ತಿದ್ದರು ಎಂದು ಸೈಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಪ್ರಭಾಕರ್ ಸೈಲ್ ಅವರು ತಾವು ಯಾವುದೇ ಒತ್ತಡದಿಂದ ಅಥವಾ ಹಣಕ್ಕಾಗಿ ಯಾವುದೇ ಹೇಳಿಕೆ ನೀಡುತ್ತಿಲ್ಲ ಮತ್ತು ಸಚಿವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಸೆಪ್ಟೆಂಬರ್ 6 ರಂದು ನನ್ನ ಮಗಳ ಹುಟ್ಟುಹಬ್ಬದಂದು ನಾನು ಗೋಸಾವಿಯಿಂದ ನನ್ನ ಸಂಬಳದ ಪ್ರಕಾರ 5,000 ರೂ. ಮತ್ತು ನಂತರ 15,000 ಮತ್ತು 3,000 ರೂ.ಗಳನ್ನು ಪಡೆದಿದ್ದೇನೆ...ಅದಕ್ಕಿಂತ ಹೆಚ್ಚಿನ ಹಣವನ್ನು ನಾನು ಪಡೆದಿಲ್ಲ. ನಾನು ಸತ್ಯವನ್ನು ಹೊರತರಲು ಪ್ರಯತ್ನಿಸುತ್ತಿದ್ದೇನೆ. ನಾನು ಯಾವುದೇ ಒತ್ತಡದಿಂದ ಅಥವಾ ಹಣಕ್ಕಾಗಿ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸಹರ್ ಪೊಲೀಸ್ ಠಾಣೆಯಲ್ಲಿ ನಾನು ದೂರು ದಾಖಲಿಸಿದ್ದೇನೆ. ಗೋಸಾವಿ ಶರಣಾಗತಿಗೆ ಅವಕಾಶ ಮಾಡಿಕೊಡಿ, ನಾನು ಮತ್ತೆ ಮಾತನಾಡುತ್ತೇನೆ" ಎಂದು ಪ್ರಭಾಕರ್ ಸೈಲ್ ಹೇಳಿದರು.
ಸೈಲ್ ಅವರು ಗೋಸಾವಿ ಶಾರುಖ್ ಖಾನ್ ಅವರ ಮ್ಯಾನೇಜರ್ ಅವರನ್ನು ಭೇಟಿಯಾಗಿರುವುದನ್ನು ನೋಡಿದ್ದಾರೆ ಮತ್ತು ಕ್ರೂಸ್ ದಾಳಿಯ ನಂತರ ವಾಂಖೆಡೆಯ ಸಮ್ಮುಖದಲ್ಲಿ "9-10 ಖಾಲಿ ಪುಟಗಳಿಗೆ" ಸಹಿ ಹಾಕುವಂತೆ ಕೇಳಲಾಯಿತು ಎಂದು ಹೇಳಿಕೊಂಡರು. ಕೆಪಿ ಗೋಸಾವಿ ಸಂಶಯಾಸ್ಪದವಾಗಿ ನಾಪತ್ತೆಯಾದ ನಂತರ ಸಮೀರ್ ವಾಂಖೆಡೆಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಪ್ರಭಾಕರ್ ಸೈಲ್ ಹೇಳಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಹೇಳಿಕೆಯ ಬಗ್ಗೆ ವಿಜಿಲೆನ್ಸ್ ತನಿಖೆಗೆ ಆದೇಶಿಸಿದೆ.
Recommended Video
ಅಕ್ಟೋಬರ್ 3 ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ನಡೆದ ದಾಳಿಯ ನಂತರ ಸಮೀರ್ ವಾಂಖೆಡೆ ಕೆಪಿ ಗೋಸಾವಿಯನ್ನು ತೋರಿಸುವ ಹಲವಾರು ಚಿತ್ರಗಳು ಕಾಣಿಸಿಕೊಂಡಿವೆ. ಪ್ರಕರಣದಲ್ಲಿ ಬಂಧಿತರಾದವರ ಜೊತೆಗೆ ಕೋಣೆಯಲ್ಲಿ ಸಮೀರ್ ವಾಂಖೆಡೆ ಮತ್ತು ಕೆಪಿ ಗೋಸಾವಿಯನ್ನು ಚಿತ್ರಗಳು ವೈರಲ್ ಆಗಿವೆ.