ಗಣೇಶ ಚತುರ್ಥಿ 2022: ಮುಂಬೈಯಲ್ಲಿಂದು ಲಾಲ್ ಬೌಚಾ ಗಣೇಶ ಮೂರ್ತಿ ವಿಸರ್ಜನೆ
ಮುಂಬೈ ಸೆಪ್ಟೆಂಬರ್ 09: ಮಹಾರಾಷ್ಟ್ರದ ಮುಂಬೈಯಲ್ಲಿಂದು ಲಾಲ್ ಬೌಚಾ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು ಸಾಕಷ್ಟು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಜೊತೆಗೆ ಗಣೇಶನ ಮೂರ್ತಿಯನ್ನು ಹತ್ತು ದಿನಗಳವರೆಗೆ ಪೂಜಿಸಲಾಗುತ್ತದೆ. ಗಣೇಶನ ಪೂಜೆಗೆ ಹತ್ತನೇ ದಿನವಾದ ಇಂದು (ಸೆಪ್ಟೆಂಬರ್ 9) ಮೆರವಣಿಗೆ ಮೂಲಕ ಸಾಗಿಸಿ ವಿಸರ್ಜನೆ ಮಾಡಲಾಗುತ್ತದೆ. ಜೊತೆಗೆ ಗಣೇಶನ ಪೂಜೆಯಲ್ಲಿ ರಾಜ್ಯದ ಗಣ್ಯ ವ್ಯಕ್ತಿಗಳು ಭಾಗಿಯಾಗಲಿದ್ದಾರೆ.
ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗುತ್ತಾರೆ. ಹೀಗಾಗಿ ಮುಂಬೈ ಪೊಲೀಸರು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಮುಂಬೈ ಪೊಲೀಸ್ ಜಂಟಿ ಸಿಪಿ (ಎಲ್ & ಒ) ವಿಶ್ವಾಸ್ ನಂಗ್ರೆ ಪಾಟೀಲ್ ಪ್ರಕಾರ, ಸಂಚಾರದ ಮೇಲೆ ನಿಗಾ ಇಡಲಾಗುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಿದ್ಧತೆ ನಡೆದಿದೆ.
"ಇಂದು ಗಣೇಶ ಮೂರ್ತಿ ವಿಸರ್ಜನೆ ದೃಷ್ಟಿಯಿಂದ ಸಾಕಷ್ಟು ಪಡೆ ನಿಯೋಜಿಸಲಾಗಿದೆ. ನಾವು ಸನ್ನದ್ಧರಾಗಿದ್ದೇವೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಅಗತ್ಯವಾದ ಸಾಧನಗಳನ್ನು ಹೊಂದಿದ್ದೇವೆ. ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜನಸಂದಣಿಯು ದೊಡ್ಡದಾಗಿರುತ್ತದೆ. ನಾವು ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಸುರಕ್ಷತೆ ಮುಖ್ಯವಾಗಿದೆ" ಎಂದು ಪೊಲೀಸ್ ಅಧಿಕಾರಿ ಪಾಟೀಲ್ ಹೇಳಿದರು.
BMCಯಿಂದ ಗಣೇಶ ವಿಸರ್ಜನೆಗೆ ವ್ಯವಸ್ಥೆ
ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (BMC) ಮುಂಬೈನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಕೃತಕ ಕೊಳಗಳನ್ನು ಮಾಡಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮುಳುಗಿಸಲು BMC ನಾಗರಿಕರನ್ನು ಕೃತಕ ಕೊಳಗಳಲ್ಲಿ ಮುಳುಗಿಸುವಂತೆ ಕೇಳಿಕೊಂಡಿದೆ. ಈ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದೆ.
ಪೌರಕಾರ್ಮಿಕರ ಪ್ರಕಾರ, 162 ಕೃತಕ ಕೊಳಗಳು ಮತ್ತು 73 ನೈಸರ್ಗಿಕ ಇಮ್ಮರ್ಶನ್ ಸೈಟ್ಗಳು ಮೂರ್ತಿ ವಿಸರ್ಜನೆಗೆ ಲಭ್ಯವಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಪೌರಾಯುಕ್ತ ರಮಾಕಾಂತ್ ಬಿರಾದಾರ್, "162 ಕೃತಕ ಕೊಳಗಳು ಮತ್ತು 73 ನೈಸರ್ಗಿಕ ಇಮ್ಮರ್ಶನ್ ಸೈಟ್ಗಳಿವೆ. ಲೈಫ್ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ" ಎಂದಿದ್ದಾರೆ.
ಸೆಪ್ಟೆಂಬರ್ 9 ರಂದು ಗಣೇಶ ಮೂರ್ತಿಗಳ ವಿಸರ್ಜನೆ
ಗಣೇಶ ಚತುರ್ಥಿ ಆಗಸ್ಟ್ 31 ರಂದು ಪ್ರಾರಂಭವಾದ ಹತ್ತು ದಿನಗಳ ಹಬ್ಬವಾಗಿದೆ ಮತ್ತು ಸೆಪ್ಟೆಂಬರ್ 9 ರಂದು ಗಣೇಶ ಮೂರ್ತಿಗಳನ್ನು ವಿಸರ್ಜನದೊಂದಿಗೆ ಕೊನೆಗೊಳ್ಳುತ್ತದೆ. ಈ ಹಬ್ಬವು ಗಣೇಶನ ಜನ್ಮವನ್ನು ಸೂಚಿಸುತ್ತದೆ. ಎರಡು ವರ್ಷಗಳ ಕೋವಿಡ್ನ ನಂತರ ಮುಂಬೈನ ಲಾಲ್ಬಾಗ್ಚಾ ರಾಜಾಗೆ ದೇಶಾದ್ಯಂತದ ಭಕ್ತರು ನೆರೆದಿದ್ದರು.
ಗಣೇಶ ಚತುರ್ಥಿ ಅಥವಾ ಗಣಪತಿ ಉತ್ಸವವು ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ತಿಂಗಳ ಭಾದ್ರಪದದ ನಾಲ್ಕನೇ ದಿನದಂದು ಪ್ರಾರಂಭವಾಗುತ್ತದೆ, ಮಹಾರಾಷ್ಟ್ರ ಮತ್ತು ಪಶ್ಚಿಮ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಗಣೇಶನ ಆಶೀರ್ವಾದವನ್ನು ಪಡೆಯಲು ಲಕ್ಷಾಂತರ ಭಕ್ತರು ಪಂಡಲ್ಗಳಲ್ಲಿ ಸೇರುವುದರೊಂದಿಗೆ ಹೆಚ್ಚಿನ ಸಂಭ್ರಮದಿಂದ ಆಚರಿಸಲಾಗುತ್ತದೆ.
ಇದು ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಗಣೇಶನು ತನ್ನ ತಾಯಿ ಪಾರ್ವತಿಯೊಂದಿಗೆ ಭೂಮಿಗೆ ಆಗಮಿಸುತ್ತಾನೆ ಮತ್ತು ಜನರಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಜನರು ತಮ್ಮ ಮನೆಗಳಲ್ಲಿ, ದೇವಾಲಯಗಳಲ್ಲಿ ಮತ್ತು ಪಂದಳಗಳಲ್ಲಿ ಗಣೇಶನನ್ನು ಪೂಜಿಸುತ್ತಾರೆ.
ಬೀದಿ ಬೀದಿಗಳಲ್ಲಿ ಬಾನೆತ್ತರದ ಗಣಪತಿಯ ಪ್ರತಿಮೆ
ಮನೆ, ಬೀದಿಗಳಲ್ಲಿ, ದೇವಾಲಯಗಳಲ್ಲಿ ವಿಧ ವಿಧವಾದ ಗಣಪತಿಯನ್ನು ತಂದು ಕೂಡಿಸಿ, ವಿಶೇಷವಾದ ಪೂಜೆಗಳು ಮತ್ತು ಮೋದಕಗಳನ್ನು ನೈವೇದ್ಯಕ್ಕೆ ಇಟ್ಟು ಆರಾಧಿಸಲಾಗುತ್ತದೆ. ಭಾರತದಾದ್ಯಂತ ಗಣೇಶನನ್ನು ಆರಾಧಿಸಲಾಗುತ್ತದೆಯಾದರೂ, ಮುಂಬೈ ಗಣೇಶೋತ್ಸವ ಒಂದು ಕೈ ಮೇಲು ಎಂದೇ ಹೇಳಬಹುದು. ಮಹಾರಾಷ್ಟ್ರದ ಬೀದಿ ಬೀದಿಗಳಲ್ಲಿ ಬಾನೆತ್ತರದ ಗಣಪತಿಯ ಪ್ರತಿಮೆಯು ನಿಜವಾಗಿಯೂ ಬೆರಗುಗೊಳಿಸುತ್ತದೆ.
ಮುಂಬೈನಲ್ಲಿ ತುಂಬಾ ಫೇಮಸ್ ಲಾಲ್ ಬೌಚಾ ರಾಜ. ಏನಿದು ಲಾಲ್ ಬೌಚಾ ರಾಜ ಎಂದು ಆಶ್ಚರ್ಯಗೊಳ್ಳುತ್ತಿದ್ದೀರಾ? 2020 ರಲ್ಲಿ ಸುಮಾರು 86 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಲಾಲ್ ಬೌಚಾ ರಾಜ ಭಕ್ತರಿಗೆ ದರ್ಶನ ಭಾಗ್ಯವನ್ನು ಕರುಣಿಸಲಿಲ್ಲ. ಕಾರಣ ಕೋವಿಡ್ 19 ಮಹಾಮಾರಿಯ ಪರಿಣಾಮ ಗಣೇಶನ ಸಂಭ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು 2022 ರಲ್ಲಿ ಲಾಲ್ ಬೌಚಾ ರಾಜ ಮುಂಬೈನಲ್ಲಿ ತನ್ನ ವೈಭವಕ್ಕೆ ಸಾಕ್ಷಿಯಾಗಿದ್ದಾನೆ.
18 ರಿಂದ 20 ಅಡಿ ಎತ್ತರದ ಮೂರ್ತಿ
ಮುಂಬೈನ ಬೀದಿಗಳಲ್ಲಿ ಲಾಲ್ ಬೌಚಾ ರಾಜ (ಗಣಪತಿ) ನನ್ನು ಲಕ್ಷಾಂತರ ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾಗತಿಸಿದರು. ಮುಂಬೈ ಮಹಾನಗರದಲ್ಲಿ ಈ ಲಾಲ್ ಬೌಚಾ ರಾಜ ಅತ್ಯಂತ ಫೇಮಸ್ ಎಂದೇ ಹೇಳಬಹುದು. ಇದೊಂದು ಸಾರ್ವಜನಿಕ ಗಣೇಶೋತ್ಸವ ಮಂಡಲದ ಗಣೇಶನ ಮೂರ್ತಿಯಾಗಿದೆ. 1934 ರಲ್ಲಿ ಮುಂಬೈನ ಲಾಲ್ಬಾಗ್ ಮಾರುಕಟ್ಟೆಯಲ್ಲಿ ಸ್ಥಾಪಿಸಲಾಯಿತು. ಲಾಲ್ ಬೌಚಾ ರಾಜನನ್ನು ಸ್ಥಳೀಯರ ಗುಂಪು ಮತ್ತು ಮೀನುಗಾರರು ಸ್ಥಾಪಿಸಿ ಆರಾಧಿಸಿದರು ಎನ್ನಲಾಗುತ್ತದೆ.
ಇನ್ನು ಈ ಗಣೇಶನ ಸೊಗಸಾದ ವಿಗ್ರಹವನ್ನು ಸುಮಾರು 89 ವರ್ಷಗಳಿಂದ ಕಾಂಬ್ಳಿ ಕುಟುಂಬದವರು ವಿಗ್ರಹವನ್ನು ತಯಾರಿಸಿ ರಕ್ಷಿಸುತ್ತಾ ಬಂದಿದ್ದಾರೆ. ಲಾಲ್ ಬೌಚಾ ರಾಜ ಎಂದು ಕರೆಯಲ್ಪಡುವ ಈ ವಿಗ್ರಹವನ್ನು ರತ್ನಾಕರ್ ಕಾಂಬ್ಳಿ ಕುಟುಂಬವು ಅತ್ಯಂತ ಕಾಳಜಿ ಮತ್ತು ನಿಖರತೆಯಿಂದ ತಯಾರಿಸುತ್ತಾರೆ. ನಿಮಗೆಲ್ಲಾ ತಿಳಿದಿರುವ ಹಾಗೆ ಮುಂಬೈನಲ್ಲಿ ಗಣಪತಿಯ ಮೂರ್ತಿಗಳು ಅತ್ಯಂತ ಎತ್ತರದಲ್ಲಿರುತ್ತವೆ. ಅದೇ ರೀತಿ ಈ ಲಾಲ್ ಬೌಚಾ ರಾಜ ಮೂರ್ತಿಯ ಎತ್ತರವು ಕೂಡ ಸುಮಾರು 18 ರಿಂದ 20 ಅಡಿ ಎತ್ತರದಲ್ಲಿರುತ್ತವೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದ ಲಾಲ್ ಬೌಚಾ ರಾಜ (ಗಣೇಶನ ಮೂರ್ತಿ) ಯನ್ನಿಟ್ಟು ಸಂಭ್ರಮಿಸಲು ಅಡ್ಡಿಯಾಯಿತು. ಇದು ಸುಮಾರು 86 ವರ್ಷಗಳಿಂದ ಸತತವಾಗಿ ಯಾವುದೇ ಕಾರಣದಿಂದಲೂ ನಿಲ್ಲಿಸದೇ ನಡೆಸಿಕೊಂಡು ಬಂದಿದ್ದ ಗಣೇಶೋತ್ಸವಕ್ಕೆ ತಡೆಯನ್ನುಂಟು ಮಾಡಿತು. ಗಣೇಶನನ್ನು ಸಂತೃಪ್ತಿಗೊಳಿಸಿದ ನಂತರ ಗಣೇಶ ಚತುರ್ಥಿ ಹಬ್ಬದ ಕೊನೆಯ ದಿನದಂದು ಅತ್ಯಂತ ಸಂಭ್ರಮ ಸಡಗರದಿಂದ ಗಣಪತಿಯನ್ನು ವಿಸರ್ಜನೆಗೆ ತಯಾರಿ ನಡೆಸಲಾಗುತ್ತದೆ. ಇನ್ನು ವಿಸರ್ಜನೆ ಮಾಡುವುದಕ್ಕಿಂತ ಮುಂಚೆ ಗಣೇಶನನ್ನು ಬೀದಿ ಬೀದಿಗಳಲ್ಲಿ, ದೇವಾಲಯಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕೊನೆಗೆ ಮೂರ್ತಿಯನ್ನು ಅರಬ್ಬಿ ಸಮುದ್ರದಲ್ಲಿ ಅದರ ಅಂತಿಮ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.