ಅನಿಲ್ ದೇಶ್ಮುಖ್ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ ED
ಮುಂಬೈ, ಸೆಪ್ಟೆಂಬರ್ 06: ಭ್ರಷ್ಟಾಚಾರ ಆರೋಪ ಹೊತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎನ್ಸಿಪಿ ಮುಖಂಡ ಅನಿಲ್ ದೇಶ್ಮುಖ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶ್ಮುಖ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ)ದಿಂದ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.
ಇನ್ನೊಂದೆಡೆ ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅನಿಲ್ ಅವರು ಕಾನೂನು ಸಮರ ಮುಂದುವರೆಸಿದ್ದಾರೆ. ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಐದು ಬಾರಿ ಸಮನ್ಸ್ ಕಳಿಸಲಾಗಿತ್ತು. ಅನಿಲ್ ಅವರ ಇಬ್ಬರು ಆಪ್ತರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೊಳಪಡಿಸಿತ್ತು. ಆದರೆ, ಅನಿಲ್ ಅವರು ಸಮನ್ಸ್ಗೆ ಉತ್ತರಿಸಿರಲಿಲ್ಲ, ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ, ದೇಶಬಿಟ್ಟು ತೆರಳದಂತೆ ತಡೆಯಲು ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.

ಸಮನ್ಸ್ಗೆ ಉತ್ತರಿಸುವ ಅಗತ್ಯವಿಲ್ಲ
ಸಮನ್ಸ್ಗೆ ಉತ್ತರಿಸುವ ಅಗತ್ಯವಿಲ್ಲ, ಕಾನೂನು ಮೂಲಕ ಪರಿಹರಿಸಿಕೊಳ್ಳಲಾಗುವುದು ಎಂದಿದ್ದ ಅನಿಲ್ ಅವರಿಗೆ ಸುಪ್ರೀಂಕೋರ್ಟ್ ನಿಂದಲೂ ಮಧ್ಯಂತರ ಪರಿಹಾರ ಸಿಕ್ಕಿರಲಿಲ್ಲ. ಒತೆಗೆ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಂದ್, ಸಹಾಯಕ ಕುಂದನ್ ಶಿಂಧೆ ಬಂಧಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಹಾಕಿರುವುದು ಹಿನ್ನಡೆಯಾಗಿದೆ. ಅನಿಲ್ ಅವರ ಪರ ವಕೀಲ ಅನಂದ್ ದಾಗಾ ಅವರನ್ನು ಸಿಬಿಐ ಬಂಧಿಸಿದೆ. ಏಪ್ರಿಲ್ 21ಕ್ಕೆ ಎಫ್ಐಆರ್ ಹಾಕಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯವು ತನಿಖೆ ಮುಂದುವರೆಸಿದೆ.

ಪ್ರಕರಣದ ಹಿನ್ನೆಲೆ
ಪ್ರತಿ ತಿಂಗಳು 100 ಕೋಟಿ ವಸೂಲಿ ಮಾಡಿ ನೀಡುವಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್ಮುಖ್ ಆದೇಶಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಪರಮ್ ಬೀರ್ ಸೇರಿದಂತೆ ಅನೇಕರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಯಶ್ರೀ ಪಾಟೀಲ್ ಎಂಬುವವರ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದ ನ್ಯಾಯಾಲಯ, ಪರಮ್ ಬೀರ್ ಸಿಂಗ್, ವಕೀಲರಾದ ಘನಶ್ಯಾಮ್ ಉಪಾಧ್ಯಾಯ್ ಮತ್ತು ಮೋಹನ್ ಭಿಡೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಲಂಚದ ಬಗ್ಗೆ ಪ್ರಸ್ತಾಪಿಸಿ ಅನಿಲ್ ವಿರುದ್ಧ ಆರೋಪ ಮಾಡಲಾಗಿದೆ. ಈ ಬಗ್ಗೆ ಅನಿಲ್ ದೇಶ್ ಮುಖ್ ಸ್ಪಷ್ಟನೆ ನೀಡಿ, ಆರೋಪಗಳನ್ನು ತಳ್ಳಿ ಹಾಕಿದ್ದರು.

ಸಿಎಂಗೆ ಬರೆದಿದ್ದ ಪತ್ರ
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಪತ್ರ ಬರೆದಿದ್ದು, 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.
ಮುಂಬೈ ಹುಕ್ಕಾ ಪಾರ್ಲರ್ ಸಭೆ ಮುಂಬೈ ಹುಕ್ಕಾ ಪಾರ್ಲರ್ಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ನಂತರ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ ಅವರು ಎಸಿಪಿ ಪಾಟೀಲ್ ಅವರನ್ನುದ್ದೇಶಿಸಿ ʼಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್, ರೆಸ್ಟೋರೆಂಟ್ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ ಎಂದು ತಿಳಿಸಿದರು. ದೇಶ್ಮುಖ್ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ ED

ಮಾಹಿತಿ ಹಂಚಿಕೊಂಡಿದ್ದ ಪಾಟೀಲ್
ಈ ಮಾಹಿತಿಯನ್ನು ಪಾಟೀಲ್ ನನ್ನೊಂದಿಗೆ ಹಂಚಿಕೊಂಡಿದ್ದರು. ಆಂಟೀಲಿಯಾ (ಮುಕೇಶ್ ಅಂಬಾನಿ ಅವರ ಮನೆ) ಘಟನೆ ಕುರಿತು ಕೆಲ ದಿನಗಳ ಹಿಂದೆ ತಾವು (ಮುಖ್ಯಮಂತ್ರಿ ಉದ್ಧವ್ ಠಾಕ್ರೆ) ಕರೆದಿದ್ದ ಸಭೆಯಲ್ಲಿ ಗೃಹಸಚಿವ(ಅನಿಲ್ ದೇಶ್ ಮುಖ್ )ರ ಹಲವು ಅಕ್ರಮಗಳನ್ನು ನಿಮ್ಮ ಗಮನಕ್ಕೆ ತಂದೆ. ಉಪಮುಖ್ಯಮಂತ್ರಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಸೇರಿದಂತೆ ವಿವಿಧ ಸಚಿವರಿಗೂ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಮಾಹಿತಿ ನೀಡುವಾಗ ಕೆಲವು ಸಚಿವರಿಗೆ ನಾನು ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಮೊದಲೇ ಮಾಹಿತಿ ಇರುವುದನ್ನು ಗಮನಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.



Click it and Unblock the Notifications







