"ಮೊದಲು ಜೈಲಿನ ಆಹಾರ ಸೇವಿಸಿ": ಅನಿಲ್ ದೇಶಮುಖ್ ಮನವಿಗೆ ಕೋರ್ಟ್ ಹೇಳಿಕೆ
ಮುಂಬೈ, ನವೆಂಬರ್ 15: ಈ ತಿಂಗಳ ಆರಂಭದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ವೇಳೆ ವಿಶೇಷ ನ್ಯಾಯಾಲಯವು ಅನಿಲ್ ದೇಶಮುಖ್ ಅವರು ಮನೆ ಊಟಕ್ಕಾಗಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ. "ನೀವು ಮೊದಲು ಜೈಲಿನ ಆಹಾರವನ್ನು ತಿನ್ನಿರಿ. ನಂತರ ನಾನು ನಿಮ್ಮ ಮನವಿಯನ್ನು ಪರಿಗಣಿಸುತ್ತೇನೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದಾಗ್ಯೂ, 71 ವರ್ಷ ವಯಸ್ಸಿನವರ ಅನಿಲ್ ದೇಶಮುಖ್ ಅವರ ವೈದ್ಯಕೀಯ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಸಿಗೆಗಾಗಿ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ಸ್ವೀಕರಿಸಿದೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಏಪ್ರಿಲ್ 21ರಂದು ಸಿಬಿಐ ತಂಡದಿಂದ ಎನ್ಸಿಪಿ ನಾಯಕ ಅನಿಲ್ ದೇಶ್ ಮುಖ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪವನ್ನು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಅನಿಲ್ ದೇಶ್ಮುಖ್ಗೆ ಸುಮಾರು ಐದು ಬಾರಿ ಸಮನ್ಸ್ ಕಳುಹಿಸಿತ್ತು. ಆದರೆ ಅನಿಲ್ ದೇಶ್ಮುಖ್ ಹಾಜರಾಗಿರಲಿಲ್ಲ. ಹಾಗೆಯೇ ಸಮನ್ಸ್ಗೆ ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಈ ಹಿನ್ನೆಲೆ ಬಳಿಕ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು. ಲುಕ್ಔಟ್ ನೋಟಿಸ್ ಬಳಿಕ ಅನಿಲ್ ದೇಶ್ಮುಖ್ ತನ್ನ ವಿರುದ್ಧದ ಸಮನ್ಸ್ ರದ್ದು ಮಾಡುವಂತೆ ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್ ದೇಶ್ಮುಖ್ರ ಅರ್ಜಿಯನ್ನು ವಜಾ ಮಾಡಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮುಂದುವರಿಸುವಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿತ್ತು. ಇನ್ನು ಈ ಬೆನ್ನಲ್ಲೆ ಅನಿಲ್ ದೇಶ್ಮುಖ್ ತನ್ನ ವಿರುದ್ಧ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿರುವುದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅನಿಲ್ ದೇಶ್ಮುಖ್ 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಪರಮ್ ಬೀರ್ ಸಿಂಗ್ ಇದಕ್ಕೂ ಮುನ್ನ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪದಲ್ಲಿ ವಾಹನದಲ್ಲಿ ಸ್ಪೋಟಕ ಪತ್ತೆಯಾದ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ನಿಭಾವಣೆ ಮಾಡಿರಲಿಲ್ಲ ಎಂಬ ಕಾರಣದಿಂದಾಗಿ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದರು. ಆ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಈ ಪತ್ರವನ್ನು ಬರೆದಿದ್ದಾರೆ.
ಮುಂಬೈನ ಹುಕ್ಕಾ ಪಾರ್ಲರ್ಗಳ ಕುರಿತಾಗಿ ಸಭೆ ನಡೆಸಿದ್ದ ಸಂದರ್ಭದಲ್ಲಿ ಸಭೆಯ ಬಳಿಕ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ, "ಗೃಹ ಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್, ರೆಸ್ಟೋರೆಂಟ್ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ," ಎಂದು ತಿಳಿಸಿರುವುದಾಗಿ ಪತ್ರದಲ್ಲಿ ಆರೋಪ ಮಾಡಲಾಗಿದೆ. ಈ ಆರೋಪವನ್ನು ಮಾಜಿ ಸಚಿವ ಅನಿಲ್ ದೇಶ್ಮುಖ್ ನಿರಾಕರಿಸಿದ್ದಾರೆ. ವಿಚಾರಣೆ ವೇಳೆ ಅವರನ್ನು ಬಂಧಿಸಲಾಗಿತ್ತು.
ದೇಶಮುಖ್ ಅವರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ಆರೋಪಿ ಮಾಜಿ ಸಚಿವರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯ ಆರೋಪಿಯ ಹೆಚ್ಚಿನ ವಿಚಾರಣೆಯ ಅಗತ್ಯ ಇಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ದೇಶಮುಖ್ ಅವರನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.