ಥಾಣೆಯಲ್ಲಿ ದಾವೂದ್ ಇಬ್ರಾಹೀಂ ಸಹೋದರನ ಬಂಧನ
ಮುಂಬೈ, ಸೆಪ್ಟೆಂಬರ್ 19: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಸಹೋದರ ಇಕ್ಬಾಲ್ ಕಸ್ಕರ್, ಸೋಮವಾರ (ಸೆ. 18) ಮಹಾರಾಷ್ಟ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮಹಾರಾಷ್ಟ್ರ ಪೊಲೀಸ್ ಇಲಾಖೆಯ ದರೋಡೆ ನಿಗ್ರಹ ದಳವು ಥಾಣೆಯಲ್ಲಿ ಸೋಮವಾರ ನಡೆಸಿದ ಕಾರ್ಯಾಚರಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆಂದು ಇಲಾಖೆ ತಿಳಿಸಿದೆ.

ಈತನ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ, ಎನ್ ಕೌಂಟರ್ ಸ್ಪೆಷಾಲಿಸ್ಟ್ ಪ್ರದೀಪ್ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಆತನನ್ನು ಬಂಧಿಸಲಾಗಿದೆ.
ಶರ್ಮಾ ಅವರನ್ನು ಇತ್ತೀಚೆಗಷ್ಟೇ, ದರೋಡೆ ನಿಗ್ರಹ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. 'ಇಂಡಿಯಾ ಟುಡೇ' ವರದಿಯ ಪ್ರಕಾರ, ಇಕ್ಬಾಲ್ ಕಸ್ಕರ್, ಥಾಣೆಯಲ್ಲಿನ ಕೆಲವು ಉದ್ಯಮಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದನೆಂದು ಹೇಳಲಾಗಿದೆ.
ಈತನ ಕಾಟ ತಾಳಲಾರದ ಉದ್ಯಮಿಯೊಬ್ಬ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ. ಹಾಗಾಗಿ, ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸೋಮವಾರ, ಈತನ ಖಚಿತ ಸುಳಿವು ಸಿಕ್ಕ ನಂತರ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಹೇಳಲಾಗಿದೆ.












Click it and Unblock the Notifications