'ಡಿ ಕಂಪನಿ'ಗೆ ಆಘಾತ, ದುಬೈನಿಂದ ಭಾರತಕ್ಕೆ ಛೋಟಾ ಶಕೀಲ್ ಆಪ್ತ ಅಹ್ಮದ್ ರಾಜಾ
ಮುಂಬೈ, ಜುಲೈ 17: ಡಿ ಕಂಪನಿಯ ಮುಖ್ಯ ಹವಾಲಾ ವ್ಯವಹಾರ ನೋಡಿಕೊಳ್ಳುತ್ತಿದ್ದ ಅಹ್ಮದ್ ರಾಜಾನನ್ನು ವಿಚಾರಣೆಗಾಗಿ ಭಾರತಕ್ಕೆ ಗಡಿಪಾರು ಮಾಡುತ್ತಿರುವುದಾಗಿ ದುಬೈ ಸರ್ಕಾರ ಹೇಳಿದೆ. ಈ ಮೂಲಕ ಮುಂಬೈ ಪೊಲೀಸ್ ಹಾಗೂ ಭಾರತದ ತನಿಖಾ ಸಂಸ್ಥೆಗಳಿಗೆ ಭಾರಿ ಜಯ ದೊರಕಿದ್ದಂತಾಗಿದೆ.
ಭೂಗತ ಪಾತಕಿ ದಾವೂದ್ಇಬ್ರಾಹಿಂನ ಡಿ ಕಂಪನಿಯ ಮುಂಬೈ, ಪುಣೆ ವ್ಯವಹಾರಗಳನ್ನು ನಿಭಾಯಿಸುತ್ತಿದ್ದ ಅಹ್ಮದ್ ರಾಜಾ ಅಲಿಯಾಸ್ ಅಫ್ರೋಜ್ ವದಾರಿಯಾರನ್ನು ವಿಚಾರಣೆಗೊಳಪಡಿಸಲು ಮುಂಬೈ ಪೊಲೀಸರು ಬಹುದಿನಗಳಿಂದ ಕಾದಿದ್ದಾರೆ. ಛೋಟಾ ಶಕೀಲ್ ಆಪ್ತ ಸಹಚರನಾದ ಅಹ್ಮದ್ ರಾಜಾನನ್ನು ಕಳೆದ ತಿಂಗಳು ದುಬೈನಲ್ಲಿ ಬಂಧಿಸಲಾಗಿತ್ತು.
ತಕ್ಷಣವೇ ಅಹ್ಮದ್ ರಾಜಾನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತದ ತನಿಖಾ ಸಂಸ್ಥೆಗಳು ಮನವಿ ಸಲ್ಲಿಸಿದ್ದರೂ, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು, ದುಬೈ ಸರ್ಕಾರ ತೀರ್ಮಾನ ಕೈಗೊಳ್ಳಲು ಕೊಂಚ ತಡವಾಗಿದೆ.

ಮುಂಬೈ, ಥಾಣೆ ಅಲ್ಲದೆ ಸೂರತ್ ನಲ್ಲಿರುವ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ, ಈತನ ವಿರುದ್ಧ ಹಲವು ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕಾಗಿ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು.
'ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ' ಎಂದು ಅಮೆರಿಕ ಖಚಿತಪಡಿಸಿದ ನಂತರ, ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ವಿರುದ್ಧ ಕ್ರಮ ಜರುಗಿಸಲು ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಸಭೆಗೆ ಭಾರತ ಮನವಿ ಸಲ್ಲಿಸಿತ್ತು.
ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ಬಳಿಕ ದಾವೂದ್ ಇಬ್ರಾಹಿಂ ವಿರುದ್ಧ ಆದೇ ರೀತಿ ನಿರ್ಬಂಧ ಹೇರಿಕೆಗಾಗಿ ಭಾರತ ಒತ್ತಾಯಿಸಿದೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಮುಖ್ಯವಾಗಿ ಡಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ನಕಲಿ ನೋಟು ಜಾಲ, ಐಎಸ್ಐನ ಅಕ್ರಮ ಮಾದಕ ದ್ರವ್ಯ ವ್ಯವಹಾರ, ಮನಿ ಲಾಂಡ್ರಿಂಗ್ ಸೇರಿದಂತೆ ಅನೇಕ ಭೂಗತ ಪಾತಕಗಳಲ್ಲಿ ತೊಡಗಿಕೊಂಡಿದೆ.












Click it and Unblock the Notifications