ತೌಕ್ತೆ ಚಂಡಮಾರುತ: ಬಾರ್ಜ್ ಪಿ305ನಲ್ಲಿದ್ದ 184 ಜನರನ್ನು ರಕ್ಷಿಸಿದ ನೌಕಾಪಡೆ
ಮುಂಬೈ, ಮೇ 19: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ 'ಪಿ 305' ಬಾರ್ಜ್ನಲ್ಲಿದ್ದ 184 ಜನರನ್ನು ಈವರೆಗೂ ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದ ಈ 184 ಜನರನ್ನು ಹೊತ್ತ ಐಎನ್ಎಸ್ ಕೊಚ್ಚಿ ಭಾರತೀಯ ನೌಕಾಪಡೆಯ ಹಡಗು ಬುಧವಾರ ಮುಂಜಾನೆ ಮುಂಬೈ ಬಂದರಿಗೆ ತಲುಪಿದೆ. ಮುಂಬೈನ ಸಮುದ್ರ ತೀರದಲ್ಲಿ ಸೋಮವಾರ 'ಪಿ 305' ಹೆಸರಿನ ಬಾರ್ಜ್ ಚಂಡಮಾರುತದ ಹೊಡೆತಕ್ಕೆ ಸಿಲುಕಿತ್ತು.
ಈ ಬಗ್ಗೆ ಎಎನ್ಐ ವರದಿ ಮಾಡಿದ್ದು ರಕ್ಷಣಾ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿದೆ. ಈ ಮಾಹಿತಿಯ ಪ್ರಕಾರ ಐಎನ್ಎಸ್ ಟೆಗ್, ಐಎನ್ಎಸ್ ಬೆತ್ವಾ, ಐಎನ್ಎಸ್ ಬಿಯಾಸ್, ಪಿ8ಐ ಏರ್ಕ್ರಾಫ್ಟ್ ಹಾಗೂ ಸೀಕಿಂಗ್ ಹೆಲೋಸ್ ಮೂಲಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಈ ಬಾರ್ಜ್ನಲ್ಲಿ ಒಟ್ಟು 273 ಸಿಬ್ಬಂದಿಗಳು ಇದ್ದರು.
ತೌಕ್ತೆ ಚಂಡಮಾರುತ: ಹಲವು ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಮುಂಬೈನಿಂದ ಸುಮಾರು 35-40 ಮೈಲಿ ದೂರದಲ್ಲಿ ಬಾರ್ಜ್ ಪಿ 305 ತೊಂದರೆಯಲ್ಲಿರುವ ಬಗ್ಗೆ ಮಾಹಿತಿ ಬಂದಿತ್ತು. ಆ ಸಂದರ್ಭದಲ್ಲಿ ಚಂಡಮಾರುತ ಮುಂಬೈನ ಪಶ್ಚಿಮಕ್ಕೆ ಹಾದುಹೋಗುತ್ತಿತ್ತು. ನಾವು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಪರಿಸ್ಥಿತಿಯ ಉಸ್ತುವಾರಿ ವಹಿಸಿಕೊಂಡೆವು ಎಂದು ಐಎನ್ಎಸ್ ಕೊಚ್ಚಿಯ ಕಮಾಂಡಿಂಗ್ ಆಫೀಸರ್ಕ್ಯಾಪ್ಟನ್ ಸಚಿನ್ ಸಿಕ್ವೇರಾ ಮಾಹಿತಿ ನೀಡಿದ್ದಾರೆ.
"ಎಸ್ಎಸ್-3 ಹಡಗಿನಲ್ಲಿದ್ದ 196 ಜನ ಹಾಗೂ ಸಾಗರ್ ಭೂಷಣ್ನಲ್ಲಿದ್ದ 101 ಜನರು ಸುರಕ್ಷಿತವಾಗಿದ್ದಾರೆ. ಓಎನ್ಜಿಸಿ ಮತ್ತು ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ಹಡಗುಗಳು ಬಾರ್ಜ್ಗಳನ್ನು ತೀರಕ್ಕೆ ಎಳೆತರುವ ಕಾರ್ಯವನ್ನು ನಡೆಸುತ್ತಿದೆ. ಐಎನ್ಎಸ್ ತಲ್ವಾರ್ ಕೂಡ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನಿಯೋಜನೆಯಾಗಿದೆ ಎಂದು ನೌಕಾಪಡೆಯ ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ.
ತೌಕ್ತೆ; ಭಟ್ಕಳ, ಅಂಕೋಲಾದಲ್ಲಿ ಹಾನಿ ಪರಿಶೀಲಿಸಿದ ಸಚಿವರು
ಇನ್ನು ತೌಕ್ತೆ ಚಂಡಮಾರುತ ತನ್ನ ತೀವ್ರತೆಯನ್ನು ಕಳೆದುಕೊಂಡಿದ್ದರೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಇದು ಸವಾಲಾಗಲಿದೆ.