ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡದಂತೆ ತಡೆನೀಡಲು ನಕಾರ
ಮುಂಬೈ, ಅಕ್ಟೋಬರ್ 26 : ಹಿಂದಿಯ ಖ್ಯಾತ ನಟ ಅಲೋಕ್ ನಾಥ್ ವಿರುದ್ಧ ಲೇಖಕಿ ವಿನ್ತಾ ನಂದಾ ಅವರು ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ಅಲೋಕ್ ನಾಥ್ ಅವರ ಹೆಂಡತಿ ಮಾಡಿದ್ದ ಮನವಿಯನ್ನು ಮುಂಬೈನ ದಿಂಡೋಶಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಇನ್ನೂ ವಿಚಾರಣೆ ನಡೆಯುತ್ತಿರುವ ಈ ಹಂತದಲ್ಲಿ ವಿನ್ತಾ ನಂದಾ ವಿರುದ್ಧ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಚಿತ್ರಕಥೆ ಬರೆಯುವ ವಿನ್ತಾ ನಂದಾ ಅವರು ಸುಳ್ಳಿನ ಕಥೆಯನ್ನು ಹೆಣೆದಿದ್ದಾರೆ. ಸಿಕ್ಕಾಪಟ್ಟೆ ಕುಡಿದು ಹ್ಯಾಂಗೋವರ್ ನಲ್ಲಿದ್ದರೂ ನೋವಾಗುತ್ತದೆ ಎಂದು ಅಲೋಕ್ ಪರ ವಕೀಲರು ವಾದಿಸಿದ್ದಾರೆ.
20 ವರ್ಷಗಳ ಹಿಂದೆ ಅಂದು ಉತ್ತುಂಗದಲ್ಲಿದ್ದ ಹಿಂದಿ ನಟ ಅಲೋಕ್ ನಾಥ್ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ವಿನ್ತಾ ನಂದಾ ಅವರು #MeToo ಅಭಿಯಾನದಡಿ ಆರೋಪ ಹೊರಿಸಿದ್ದರು. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ಸಾಕಷ್ಟು ಹಾಂಗಾಮಾ ಎಬ್ಬಿಸಿದೆ.

ಇದರಿಂದ ತಮ್ಮ ಮಾನಕ್ಕೆ ಧಕ್ಕೆಯಾಗಿದ್ದು, ಇನ್ನು ಮುಂದೆ ಬಹಿರಂಗವಾಗಿ ಅತ್ಯಾಚಾರ ನಡೆದಿರುವ ಬಗ್ಗೆ ವಿನ್ತಾ ನಂದಾ ಅವರು ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ಅಲೋಕ್ ನಾಥ್ ಅವರ ಹೆಂಡತಿ ಆಶು ಸಿಂಗ್ ಅವರು ಮನವಿ ಸಲ್ಲಿಸಿದ್ದರು. ಅವರು ಅಲೋಕ್ ನಾಥ್ ಪರವಾಗಿ ವಿನ್ತಾ ನಂದಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ.
ತಮ್ಮ ಇಲ್ಲಸಲ್ಲದ ಆರೋಪ ಹೊರಿಸಿದ ತಪ್ಪಿಗಾಗಿ ಬಹಿರಂಗ ಕ್ಷಮೆ ವಿನ್ತಾ ನಂದಾ ಅವರು ಕೋರಬೇಕು ಮತ್ತು ಪರಿಹಾರಾರ್ಥವಾಗಿ 1 ರುಪಾಯಿ ದಂಡವನ್ನೂ ನೀಡಬೇಕೆಂದು ಮಾನನಷ್ಟ ಮೊಕದ್ದಮೆಯಲ್ಲಿ ಆಗ್ರಹಿಸಲಾಗಿದೆ. ವಿನ್ತಾ ನಂದಾ ಅವರು ಕೂಡ ಅಲೋಕ್ ನಾಥ್ ವಿರುದ್ಧ ಕೇಸನ್ನು ದಾಖಲಿಸಿದ್ದಾರೆ.
ಈ ಮಿಟೂ ಅಭಿಯಾನ ಇಡೀ ಭಾರತದಾದ್ಯಂತ ಬಿರುಗಾಳಿಯನ್ನು ಎಬ್ಬಿಸಿದೆ. ಚಿತ್ರರಂಗ ಮಾತ್ರವಲ್ಲ, ಪತ್ರಿಕಾರಂಗ, ರಾಜಕೀಯ, ಸಾಫ್ಟ್ ವೇರ್ ಕಂಪನಿ, ಆಡ್ ಕಂಪನಿ, ಕ್ರೀಡಾ ವಲಯ, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತಿವೆ. ಕೆಲವರು ತಮ್ಮ ಆರೋಪಗಳನ್ನು ಸೋಷಿಯಲ್ ಮೀಡಿಯಾಗೆ ಮಾತ್ರ ಸೀಮಿತಗೊಳಿಸಿದ್ದರೆ, ಕೆಲವರು ಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.












Click it and Unblock the Notifications