ಮುಂಬೈ ಏರ್ಪೋರ್ಟ್ ನಲ್ಲಿ ಹೊಸ ಕ್ರಮ: ದಿಗ್ಬಂಧನದಿಂದ ತಪ್ಪಿಸಿಕೊಳ್ಳಲು ಚಾನ್ಸೇ ಇಲ್ಲ!
ಮುಂಬೈ, ಮಾರ್ಚ್ 17: ವಿದೇಶಗಳಿಂದ ವಾಪಸ್ ಆಗುತ್ತಿರುವವರಿಗೆ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ ನಡೆಯುತ್ತಲೇ ಇದೆ. ವೈದ್ಯಕೀಯ ತಪಾಸಣೆ ವೇಳೆ ಕೊರೊನಾ ಶಂಕಿತರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸೂಚಿಸಲಾಗುತ್ತಿದೆ. ಅಂತಹ ಸೂಚನೆಗಳನ್ನು ಕೆಲವರು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಇಂದು ಮಹಾರಾಷ್ಟ್ರದಲ್ಲಿ ಹೊಸ ಕ್ರಮ ಜಾರಿಗೆ ತರಲಾಗಿದೆ.
ವಿದೇಶಗಳಿಂದ ಬರುವವರನ್ನು, ವೈದ್ಯಕೀಯ ತಪಾಸಣೆಗೆ ಒಳಪಡಿಸಿ 'ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು' ಎಂದು ಸೂಚಿಸಲಾಗಿರುವವರ ಎಡಗೈ ಮೇಲೆ ಸ್ಟ್ಯಾಂಪ್ ಹಾಕಲಾಗುತ್ತಿದೆ.
14 ದಿನಗಳ ಕಾಲ ಏನು ಮಾಡಿದರೂ ಅಳಿಸಲಾಗದ ಇಂಕ್ ಅನ್ನು ಸ್ಟ್ಯಾಂಪ್ ಗೆ ಬಳಸಲಾಗಿದ್ದು, ''ಪ್ರೌಡ್ ಟು ಪ್ರೊಟೆಕ್ಟ್ ಮುಂಬೈಕರ್ಸ್ (ಮುಂಬಯಿಗರನ್ನು ಸುರಕ್ಷಿತವಾಗಿರಿಸುತ್ತಿರುವುದಕ್ಕೆ ಹೆಮ್ಮೆ ಇದೆ) ಹೋಮ್ ಕ್ವಾರನ್ಟೈನ್ಡ್ ಟಿಲ್ 30 March 2020 (30 ಮಾರ್ಚ್ 2020 ರವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರಬೇಕು)'' ಎಂದು ಸ್ಟ್ಯಾಂಪ್ ಹಾಕಲಾಗಿದೆ

ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕಾದವರು ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸ್ಟ್ಯಾಂಪ್ ನಿಂದಾಗಿ ಅನಿವಾರ್ಯವಾಗಿ ಮನೆಯಲ್ಲಿಯೇ ಇರಬೇಕಾಗುತ್ತದೆ. ಒಂದು ವೇಳೆ ಸ್ಟ್ಯಾಂಪ್ ಹಾಕಿಸಿಕೊಂಡಿರುವ ವ್ಯಕ್ತಿ ಹೊರಗೆ ಕಾಣಿಸಿಕೊಂಡರೂ, ಸ್ಟ್ಯಾಂಪ್ ನೋಡಿದವರು ಕೂಡಲೆ ಮನೆಗೆ ಹೋಗುವಂತೆ ಒತ್ತಡ ಹಾಕಬೇಕು'' ಎಂದು ಆರೋಗ್ಯ ಸಚಿವ ರಾಜೇಶ್ ಟೋಪ್ ತಿಳಿಸಿದ್ದಾರೆ.
ಅಸಲಿಗೆ, ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಇಲ್ಲಿಯವರೆಗೂ ಮಹಾರಾಷ್ಟ್ರದಲ್ಲಿ 39ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಬೆಳಗ್ಗೆಯಷ್ಟೇ ಮಹಾರಾಷ್ಟ್ರದ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.












Click it and Unblock the Notifications