ಸರ್ಕಾರಿ ಆಸ್ಪತ್ರೆಗೆ ಬರುವ ಮೃತದೇಹಗಳಿಗೆ ಆಂಟಿಜೆನ್ ಪರೀಕ್ಷೆ
ಮುಂಬೈ, ಸೆಪ್ಟೆಂಬರ್ 15: ಇನ್ನು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗೆ ತರುವ ಮೃತದೇಹಗಳನ್ನು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ತ್ವರಿತ ಆಂಟಿಜೆನ್ ಪರೀಕ್ಷೆ ನಡೆಸಬೇಕು.
ಮೃತಪಟ್ಟ ವ್ಯಕ್ತಿಯು ಕೊರೊನಾ ವೈರಸ್ಗೆ ತುತ್ತಾಗಿದ್ದರೇ ಎಂಬುದನ್ನು ತಿಳಿಯಲು ಪರೀಕ್ಷೆ ನಡೆಸಬೇಕು. ಕ್ಷಯ ರೋಗದ ಪತ್ತೆಗೆ ನಡೆಸುವ ಟ್ರೂನ್ಯಾಟ್/ಸಿಬಿಎನ್ಎಎಟಿ ಪರೀಕ್ಷೆಯನ್ನು ಮೃತದೇಹಗಳ ತ್ವರಿತ ಹಸ್ತಾಂತರಕ್ಕೆ ಅನುಕೂಲವಾಗುವಂತೆ ಕೋವಿಡ್ ಪರೀಕ್ಷೆಗೆ ಬಳಸಬಹುದು ಎಂದು ಮಹಾರಾಷ್ಟ್ರ ಸರ್ಕಾರದ ಸೂಚನೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 20 ಲಕ್ಷಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಹಾಗೂ 29,114ಕ್ಕಿಂತ ಹೆಚ್ಚು ಕೋವಿಡ್ ಸಾವುಗಳು ವರದಿಯಾಗಿವೆ. ಮುಂಬೈ, ಪುಣೆ ಮತ್ತು ಥಾಣೆಗಳಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿವೆ. ಆಸ್ಪತ್ರೆಯ ಶವಾಗಾರಗಳು ಭರ್ತಿಯಾಗುತ್ತಿವೆ. ಸಾಸೋನ್ ಜನರಲ್ ಆಸ್ಪತ್ರೆಯೊಂದರಲ್ಲಿಯೇ ದಿನಕ್ಕೆ 40-45ರಷ್ಟು ಸಾವುಗಳು ವರದಿಯಾಗುತ್ತಿವೆ. ಅದರಲ್ಲಿ ಕನಿಷ್ಠ 15 ಮಂದಿ ಆಸ್ಪತ್ರೆಗೆ ದಾಖಲಾಗುವಾಗಲೇ ಮೃತಪಟ್ಟಿರುತ್ತಾರೆ. ನಾಗಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರತಿದಿನ ಕನಿಷ್ಠ 5-10 ಮೃತದೇಹಗಳು ಬರುತ್ತಿವೆ. ಮುಂದೆ ಓದಿ.

ಮೃತದೇಹ ವಿಲೇವಾರಿಗೆ ಸಹಕಾರಿ
ಕೋವಿಡ್ 19 ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಪ್ರತಿ ಸಾವು ಕೊರೊನಾ ವೈರಸ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಆಂಟಿಜೆನ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಒಂದೆರಡು ಗಂಟೆಗಳ ಒಳಗೇ ಅದರ ಫಲಿತಾಂಶ ಬರಲಿದೆ. ಇದರಿಂದ ಆಸ್ಪತ್ರೆಗಳು ಮೃತದೇಹಗಳನ್ನು ಬೇಗನೆ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಫಾರೆನ್ಸಿಕ್ ಪರೀಕ್ಷೆಗೆ ನಿರ್ಬಂಧ
ಆಂಟಿಜೆನ್ ಟೆಸ್ಟ್ ವೇಳೆ ಸುಳ್ಳು ಫಲಿತಾಂಶಗಳನ್ನು ನೀಡಬಹುದು ಎಂಬ ಕಳವಳದ ಬಗ್ಗೆ ಆಗಸ್ಟ್ 21ರಂದು ಹೊಸ ಸುತ್ತೋಲೆ ಹೊರಡಿಸಲಾಗಿತ್ತು. ಇದರಿಂದ ಸಾವಿನ ಕಾರಣ ನೀಡಲು ಮರಣೋತ್ತರ ಪರೀಕ್ಷೆ ನಡೆಸುವ ಸಂಕಷ್ಟಕ್ಕೆ ವಿಧಿವಿಜ್ಞಾನ ಆರೋಗ್ಯ ಕಾರ್ಯಕರ್ತರು ಸಿಲುಕಿದ್ದರು. ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಶವಾಗಾರದ ಸಿಬ್ಬಂದಿ ಆರೋಗ್ಯ ಸಮಸ್ಯೆಗೆ ಒಳಗಾಗುವ ಅಪಾಯ ಹೆಚ್ಚಿರುವುದರಿಂದ ಫಾರೆನ್ಸಿಕ್ ಮರಣೋತ್ತರ ಪರೀಕ್ಷೆ ನಡೆಸಬಾರದು.

ಮೆಡಿಕೋ ಲೀಗಲ್ ಶವಪರೀಕ್ಷೆ
ಆಸ್ಪತ್ರೆಯಲ್ಲಿನ ಸಾವು ಮತ್ತು ಕೊರೊನಾ ವೈರಸ್ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದವರ ಸಾವುಗಳ ಮರಣೋತ್ತರ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಮರಣಕ್ಕೆ ಕಾರಣದ ಪ್ರಮಾಣ ಪತ್ರ ನೀಡಬಹುದು. ಆಸ್ಪತ್ರೆಗೆ ತರಲಾಗುವ ಶಂಕಿತ ಕೋವಿಡ್ 19 ರೋಗಗಳ ಮೃತದೇಹಗಳನ್ನು ವೈದ್ಯರು ಮೆಡಿಕೋ ಲೀಗಲ್ ಪ್ರಕರಣಗಳೆಂದು ಶವಾಗಾರಕ್ಕೆ ಕಳುಹಿಸಬಹುದು. ಪೊಲೀಸರ ಸಮ್ಮುಖದಲ್ಲಿ ಸಾವಿಗೆ ಕಾರಣ ಹಾಗೂ ಸ್ವರೂಪವನ್ನು ತಿಳಿಯಲು ಮೆಡಿಕೋ ಲೀಗಲ್ ಮರಣೋತ್ತರ ಪರೀಕ್ಷೆ ನಡೆಸಬೇಕು. ಇಲ್ಲಿ ವಿಧಿವಿಜ್ಞಾನ ಮರಣೋತ್ತರ ಪರೀಕ್ಷೆ ಅಗತ್ಯವಿಲ್ಲ ಎಂದು ಮಾರ್ಗಸೂಚಿ ಹೇಳಿತ್ತು.
Recommended Video

ಮೃತದೇಹಕ್ಕೆ ಗೌರವ ಸಿಗಬೇಕು
ಈಗ ಸರ್ಕಾರದ ಹೊಸ ಸುತ್ತೋಲೆ ಪ್ರಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಪ್ರತಿ ಪ್ರಕರಣವನ್ನು ಆಂಟಿಜೆನ್ ಟೆಸ್ಟ್ ನಡೆಸುವ ಮೂಲಕ ಪರೀಕ್ಷಿಸಬೇಕು. ನೆಗೆಟಿವ್ ಬಂದಲ್ಲಿ ಮರಣಕ್ಕೆ ಕಾರಣ ಕಂಡುಹಿಡಿಯುವ ಇತರೆ ಪರೀಕ್ಷೆಗಳನ್ನು ನಡೆಸಬೇಕು. ಸಾವುಗಳಿಗೆ, ಮುಖ್ಯವಾಗಿ ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟವರ ದೇಹಕ್ಕೆ ಸೂಕ್ತ ಗೌರವ ಸಿಗುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications