ಅನಿಲ್ ದೇಶ್ಮುಖ್ ವಿರುದ್ಧ ಎಫ್ಐಆರ್ ಏಕಿಲ್ಲ?: ಪರಮ್ ಬೀರ್ ಸಿಂಗ್ಗೆ ಕೋರ್ಟ್ ಪ್ರಶ್ನೆ
ಮುಂಬೈ, ಮಾರ್ಚ್ 31: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಹಾಗೂ ಸುಲಿಗೆಯ ಗಂಭೀರ ಆರೋಪಗಳನ್ನು ಮಾಡಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಏಕೆ ದೂರು ದಾಖಲಿಸಿರಲಿಲ್ಲ ಎಂದು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪರಮ್ ಬೀರ್ ಸಿಂಗ್ ಏಕೆ ಪೊಲೀಸರಿಗೆ ದೂರು ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಮೊದಲು ಪೊಲೀಸ್ ಅಧಿಕಾರಿಯೇ ವಿನಾ ಯಾವುದೇ ಸಾಮಾನ್ಯ ವ್ಯಕ್ತಿಯಲ್ಲ ಎಫ್ಐಆರ್ ದಾಖಲಾಗದೆ ಮಧ್ಯಪ್ರವೇಶಿಸಲು ಮತ್ತು ತನಿಖಾ ಸಂಸ್ಥೆ ಅದರ ತನಿಖೆ ನಡೆಸಬೇಕು ಎಂದು ಸೂಚಿಸಲು ಕೋರ್ಟ್ಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿತು.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ತನಿಖೆಗೆ ಸಮಿತಿ ರಚನೆ
'ನೀವು ಹಿರಿಯ ಪೊಲೀಸ್ ಅಧಿಕಾರಿ. ನೀವು ಸಾಮಾನ್ಯ ಮನುಷ್ಯರಲ್ಲ. ಯಾವುದೇ ತಪ್ಪುಗಳ ವಿರುದ್ಧ ದೂರು ದಾಖಲಿಸುವುದು ನಿಮ್ಮ ಕರ್ತವ್ಯ. ನಿಮ್ಮ ಬಾಸ್ರಿಂದ ಅಪರಾಧ ನಡೆಯುತ್ತಿದೆ ಎನ್ನುವುದು ತಿಳಿದಿದ್ದರೂ ನೀವು ಮೌನವಾಗಿದ್ದಿರಿ' ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಅಸಮಾಧಾನ ವ್ಯಕ್ತಪಡಿಸಿದರು.
'ಸೂಕ್ತ ಹಾಗೂ ಸಮರ್ಪಕವಾದ ಕ್ರಮ ಏನೆಂದರೆ ನೀವು ಮೊದಲು ದೂರು ದಾಖಲಿಸುವುದಾಗಿರುತ್ತದೆ. ಪೊಲೀಸರು ಎಫ್ಐಆರ್ ದಾಖಲಿಸದೆ ಇದ್ದರೆ, ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಭರ್ತಿ ಮಾಡಲು ನಿಮಗೆ ಆಯ್ಕೆ ಇರುತ್ತದೆ' ಎಂದು ಕೋರ್ಟ್ ಹೇಳಿತು.
ಈ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳಲು ತಮ್ಮ ಕಕ್ಷಿದಾರ ಬಯಸಿದ್ದಾರೆ ಎಂದು ಪರಮ್ ಬೀರ್ ಸಿಂಗ್ ಪರ ವಕೀಲ ವಿಕ್ರಮ್ ನಂಕಾನಿ ವಾದಿಸಿದರು. 'ಇದು ಕಾನೂನಿನ ಪ್ರಕಾರ ನಡೆಯಬೇಕಿರುವ ಪ್ರಕ್ರಿಯೆ. ನೀವು ಕಾನೂನಿಗಿಂತಲೂ ಮೇಲೆ ಎಂದು ಹೇಳುತ್ತಿದ್ದೀರಾ?' ಎಂದು ನ್ಯಾಯಾಲಯ ತೀಕ್ಷ್ಣವಾಗಿ ಪ್ರಶ್ನಿಸಿತು.
ಪರಮ್ಬೀರ್ ಸಿಂಗ್ ದೆಹಲಿಯಲ್ಲಿ ಯಾರನ್ನು ಭೇಟಿಯಾಗಿದ್ದಾರೆಂದು ಗೊತ್ತು: ನವಾಬ್ ಮಲಿಕ್
ರಾಜ್ಯ ಆಡಳಿತದ ಉನ್ನತ ಹುದ್ದೆಯ ವಿರುದ್ಧವೇ ಆರೋಪ ಇರುವುದರಿಂದ ಬಾಂಬೆ ಹೈಕೋರ್ಟ್ಗೆ ದೂರು ಸಲ್ಲಿಸಲು ಸಂಪರ್ಕಿಸದ ಹೊರತು ಅವರಿಗೆ ಬೇರೆ ಆಯ್ಕೆ ಇರಲಿಲ್ಲ ಎಂದು ನಂಕಾನಿ ಹೇಳಿದರು.
ಪೊಲೀಸ್ ಅಧಿಕಾರಿಗಳು ಸುಲಿಗೆ ಮಾಡುವಂತೆ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿರುವಂತೆ, ದೇಶ್ಮುಖ್ ಹೇಳಿಕೆ ನೀಡುವಾಗ ಸಿಂಗ್ ಅಲ್ಲಿಯೇ ಹಾಜರಿದ್ದರೇ? ಇಲ್ಲದಿದ್ದರೆ ಅದು ಗಾಳಿ ಸುದ್ದಿ ಅಗಿರುತ್ತದೆಯಷ್ಟೇ ಎಂದು ನ್ಯಾಯಪೀಠ ಹೇಳಿತು.
ಸಿಂಗ್ ಅವರ ಆರೋಪಕ್ಕೆ ಪೂರಕವಾಗಿ ದೇಶ್ಮುಖ್ ಅವರು ಕರೆಸಿಕೊಂಡಿದ್ದರು ಎನ್ನಲಾದ ಯಾವ ಪೊಲೀಸ್ ಅಧಿಕಾರಿಯೂ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ. ಎಫ್ಐಆರ್ ದಾಖಲಿಸದೆ ಈ ಪ್ರಕರಣದಲ್ಲಿ ಸ್ವತಂತ್ರ ಸಂಸ್ಥೆಯೊಂದರ ತನಿಖೆಗೆ ಆದೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.