ಕೊರೊನಾ ವಿರುದ್ಧದ ಹೋರಾಟ "ಸರ್ಜಿಕಲ್ ಸ್ಟ್ರೈಕ್"ನಂತಿರಬೇಕು; ಕೋರ್ಟ್ ತರಾಟೆ
ಮುಂಬೈ, ಜೂನ್ 09: ಸಮಾಜಕ್ಕೆ ಶತ್ರುವಾಗಿರುವ ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೋರಾಟ "ಸರ್ಜಿಕಲ್ ಸ್ಟ್ರೈಕ್"ನಂತೆ ಇರಬೇಕು ಎಂದಿರುವ ಬಾಂಬೆ ಹೈಕೋರ್ಟ್, ವೈರಿ/ವೈರಸ್ ಹೊರಬರಲಿ ಎಂದು ಕಾಯುವ ಬದಲು ಅವಿತಿರುವ ಶತ್ರುವನ್ನು ಹುಡುಕಿ ಕೊಲ್ಲಬೇಕು ಎಂದು ಹೇಳಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ಜಿ.ಎಸ್. ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೇಂದ್ರ್ ಸರ್ಕಾರದ ನೂತನ "ಮನೆ ಸಮೀಪ ಲಸಿಕಾ ಅಭಿಯಾನ"ದ ಕುರಿತು ಮಾತನಾಡುತ್ತಾ ಈ ಹೇಳಿಕೆ ನೀಡಿದೆ.
"ಕೊರೊನಾ ಸೋಂಕು ನಮ್ಮೆಲ್ಲರ ಅತಿ ದೊಡ್ಡ ಶತ್ರು. ಅದನ್ನು ಬಗ್ಗು ಬಡಿಯಬೇಕಿದೆ. ನಮ್ಮ ಶತ್ರು ಕೆಲವು ಪ್ರದೇಶಗಳನ್ನು ಆವರಿಸಿಕೊಂಡಿದೆ. ನಮ್ಮ ಜನರು ಇದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ, ಎಂದರೆ ಕೇಂದ್ರ ಸರ್ಕಾರದ ಹೋರಾಟ ಈ ಸಮಯದಲ್ಲಿ ಸರ್ಜಿಕಲ್ ಸ್ಟ್ರೈಕ್ನಂತೆ ಇರಬೇಕು. ಆದರೆ ನೀವು ಗಡಿಯಲ್ಲಿ ಹೊರಬರುವ ಶತ್ರುಗಳಿಗಾಗಿ ಕಾಯುತ್ತಾ ನಿಂತಂತೆ ಕಾಣುತ್ತಿದೆ. ಶತ್ರುಗಳ ಕೋಟೆಯನ್ನು ಪ್ರವೇಶಿಸಿ ನಾಶಪಡಿಸುತ್ತಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಕೇಂದ್ರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

"ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕಾಗಿ ಹಲವು ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಆದರೆ ಅದು ವಿಳಂಬವಾಗುತ್ತಿರುವ ಕಾರಣ ಜನರಿಗೆ ತಲುಪುತ್ತಿಲ್ಲ. ಹಲವು ಮಂದಿ ಜೀವ ಕಳೆದುಕೊಳ್ಳುವಂತಾಗಿದೆ" ಎಂದಿದ್ದಾರೆ.
75 ವರ್ಷ ಮೇಲ್ಪಟ್ಟವರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ಜಾರಿಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ ವಕೀಲರಾದ ಧೃತಿ ಕಪಾಡಿಯಾ ಹಾಗೂ ಕುನಾಲ್ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೈಗೆತ್ತಿಕೊಂಡ ಪೀಠ ಈ ಹೇಳಿಕೆಗಳನ್ನು ನೀಡಿದೆ.
ಮಂಗಳವಾರ ಈ ಸಂಬಂಧ ಮಾತನಾಡಿದ್ದ ಕೇಂದ್ರ ಸರ್ಕಾರ, ಮನೆ ಮನೆಗೆ ತೆರಳಿ ಲಸಿಕೆ ನೀಡಲು ಸಾಧ್ಯವಿಲ್ಲ. ಆದರೆ ಮನೆ ಸಮೀಪ ಲಸಿಕೆ ನೀಡಬಹುದು ಎಂದು ತಿಳಿಸಿತ್ತು.
ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಹಾಗೂ ಒಡಿಶಾದಂಥ ರಾಜ್ಯಗಳು ಹೇಗೆ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುತ್ತಿವೆ ಎಂಬ ಉದಾಹರಣೆ ನೀಡಿದ ನ್ಯಾಯಾಲಯ, ಏಕೆ ಇನ್ನಿತರ ರಾಜ್ಯಗಳಲ್ಲೂ ಈ ರೀತಿ ಲಸಿಕೆ ನೀಡಲು ಉತ್ತೇಜನ ನೀಡಬಾರದು ಎಂದು ಪ್ರಶ್ನಿಸಿದೆ.
ಎಷ್ಟೋ ರಾಜ್ಯಗಳು ಮನೆ ಬಾಗಿಲಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿದ್ಧವಾಗಿವೆ. ಆದರೆ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯುತ್ತಿವೆ. ಹೀಗಾಗಿ ಈ ಕುರಿತು ಮತ್ತೊಮ್ಮೆ ಚಿಂತಿಸಬೇಕು ಎಂದು ಜಂಟಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ನಿರ್ದೇಶನ ನೀಡಿದೆ. ಜೂನ್ 11ಕ್ಕೆ ವಿಚಾರಣೆ ಮುಂದೂಡಿದೆ.












Click it and Unblock the Notifications