ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'
ಮುಂಬೈ, ಜುಲೈ 2: ಏಷ್ಯಾದಲ್ಲೇ ಅತಿದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಗೆ (ಬಿಎಂಸಿ) ದೊಡ್ದ ತಲೆನೋವಾಗಿ ಪರಿಣಮಿಸಿತ್ತು.
Recommended Video
ಸುಮಾರು 2.1 ಚದರ ಮೀಟರ್ ವ್ಯಾಪ್ತಿಯ ಧಾರಾವಿ ಕೊಳೆಗೇರಿಯಲ್ಲಿನ ಜನಸಂಖ್ಯೆ, ಕಡಿದಾದ ರಸ್ತೆಗಳು, ಆರೋಗ್ಯ ಕಡೆ ಗಮನ ಕೊಡದ ಜನರು, ಮೊದಮೊದಲು ಕೊರೊನಾ ವಾರಿಯರ್ಸ್ ಜೊತೆ ಸಹಕರಿಸುತ್ತಿರಲಿಲ್ಲ. ಲಾಕ್ ಡೌನ್ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ.
ಹಾಗಾಗಿ, ಅತಿ ವೇಗವಾಗಿ ಸೋಂಕು ಹರಡಿದರೆ, ಕೊರೊನಾ ನಿಯಂತ್ರಣ ಸಂಪೂರ್ಣ ಕೈತಪ್ಪಿ ಹೋಗುತ್ತಿತ್ತು. ಆದರೆ, ಮಹಾರಾಷ್ಟ್ರ ಮತ್ತು ವಾಣಿಜ್ಯ ನಗರ ಮುಂಬೈ ನಗರದ ಇತರ ಭಾಗದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದರೂ, ಧಾರಾವಿಯಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಮೇ ತಿಂಗಳಲ್ಲಿ ಧಾರಾವಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟಿದ್ದರೆ, ಜೂನ್ ತಿಂಗಳಲ್ಲಿ 274ಕ್ಕೆ ಇಳಿದಿದೆ. ಇದಕ್ಕೆ ಕಾರಣ, ಬಿಎಂಸಿ, ಅನುಸರಿಸಿದ ಹೊಸ ಪ್ರಯೋಗ. ಈಗ ಇದೇ ಮಾಡೆಲ್ ಅನ್ನು ಮುಂಬೈನ ಇತರ ಭಾಗಗಳಿಗೂ ಅನುಸರಿಸಲು ಬಿಎಂಸಿ ಆರಂಭಿಸಿದೆ. ಬಿಎಂಸಿ ಪ್ರಯೋಗಿಸಿದ ಅಂಶಗಳು, ಮುಂದೆ ಓದಿ..

ಧಾರಾವಿಯಲ್ಲಿ ಪ್ರಯೋಗಿಸಿದ ರ್ಯಾಪಿಡ್ ಆಕ್ಷನ್ ಪ್ಲಾನ್
ಧಾರಾವಿಯಲ್ಲಿ ಪ್ರಯೋಗಿಸಿದ ರ್ಯಾಪಿಡ್ ಆಕ್ಷನ್ ಪ್ಲಾನ್ ಅನ್ನು ಇಗ ಬಿಎಂಸಿ, ಮುಂಬೈನ ಇತರ ಭಾಗಗಳಲ್ಲೂ ಅನುಸರಿಸಲಾರಂಭಿಸಿದೆ. ಧಾರಾವಿ ಮತ್ತು ವರ್ಲಿ ಪ್ರದೇಶ, ಮುಂಬೈನ ಪ್ರಮುಖ ಹಾಟ್ ಸ್ಪಾಟ್ ಆಗಿದ್ದವು. ಈಗ ಈ ಎರಡೂ ಪ್ರದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಈಗ, ನಗರದ ಉತ್ತರ ಭಾಗದ ಬೊರಿವಿಲಿ, ಕಂಡ್ವಿಲಿ, ಮಲಾಡ್ ಭಾಗದಲ್ಲೂ ಇದೇ ಪ್ಲಾನ್ ಅನ್ನು ಅನುಸರಿಸಲು ಆರಂಭಿಸಿದೆ.

ಮೊಬೈಲ್ ಫೀವರ್ ಕ್ಲಿನಿಕ್ ಅಂಬುಲೆನ್ಸ್
ಧಾರಾವಿಯಲ್ಲಿ ಬಿಎಂಸಿ, ಐವತ್ತು ಮೊಬೈಲ್ ಫೀವರ್ ಕ್ಲಿನಿಕ್ ನ ಸಣ್ಣ ಘಟಕವನ್ನು ಅಂಬುಲೆನ್ಸ್ ನಲ್ಲಿ ತೆರೆದಿತ್ತು. ಸುಸಜ್ಜಿತ ವೈದ್ಯಕೀಯ ಉಪಕರಣ ಮತ್ತು ಸಿಬ್ಬಂದಿ ಜೊತೆ, ಪ್ರತೀ ಮನೆಮನೆಗೂ ತೆರಳಿ, ಜ್ವರ ಸೇರಿದಂತೆ ಹಲವು ತಪಾಸಣೆ ನಡೆಸಿ, ಶಂಕಿತರ ಗಂಟಲು ದ್ರವವನ್ನು ವಾರಿಯರ್ಸ್ ಗಳು ಸಂಗ್ರಹಿಸುತ್ತಿದ್ದರು.

ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್
ಬಿಎಂಸಿ, ಇದುವರೆಗೆ ಸುಮಾರು ಆರು ಲಕ್ಷ ಜನರನ್ನು ಪರಿಶೀಲನೆಗೆ ಒಳಪಡಿಸಿದೆ. ಸೋಂಕಿತರಿಗಾಗಿ, ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್, ಕ್ವಾರಂಟೈನ್ ಕೇಂದ್ರವನ್ನು ಈ ಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ರುಚಿ/ಶುಚಿಯಾದ ಊಟವನ್ನೂ ಬಿಎಂಸಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನೀಡುತ್ತಿದೆ. ಹೀಗಾಗಿ, ಗುಣಮುಖರಾಗುತ್ತಿರುವ/ ಬಿಡುಗಡೆಯಾಗುತ್ತಿರುವವರ ಸಂಖ್ಯೆ, ಜೂನ್ ತಿಂಗಳಲ್ಲಿ ಏರಿಕೆಯಾಗಿದೆ.

ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'
ಧಾರಾವಿ ಮಾಡೆಲ್ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದರಿಂದ, ಈಗ ಅದನ್ನೇ ಬಿಎಂಸಿ, ನಗರದ ಅತಿಹೆಚ್ಚು ಕೋವಿಡ್ ಸೋಂಕಿತರ ಪ್ರದೇಶಗಳಲ್ಲಿ ಅನುಸರಿಸಲು ಮುಂದಾಗಿದೆ. ಸ್ಥಳೀಯ ವೈದ್ಯರು, ಕೊರೊನಾ ವಾರಿಯರ್ಸ್, ಭಾರತೀಯ ಜೈನ ಸಂಘ, ದೇಶ್ ಅಪ್ನಾಯೆ ಫೌಂಡೇಶನ್, ಕ್ರೆಡಾಯಿ ಮುಂತಾದ ಸಂಸ್ಥೆಗಳು ಧಾರಾವಿಯಲ್ಲಿ ಸಹಾಯ ಹಸ್ತ ಚಾಚಿದಂತೆ, ನಗರದ ಉಳಿದ ಭಾಗದಲ್ಲೂ ಬಿಎಂಸಿ ಜೊತೆ ಕೈಜೋಡಿಸುತ್ತಿವೆ.












Click it and Unblock the Notifications