ಚುನಾವಣೆಗೂ ಮುನ್ನ ಶಿವಸೇನೆಗೆ ಭಾರೀ ಆಘಾತ, ರಾಜೀನಾಮೆ ನೀಡಿದ 26 ಮುಖಂಡರು!
ಮುಂಬೈ, ಅಕ್ಟೋಬರ್ 10: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಇರುವಾಗ ಶಿವಸೇನೆಗೆ ಭಾರೀ ಆಘಾತವಾಗುವಂಥ ಘಟನೆಯೊಂದು ನಡೆದಿದೆ.
ಸೀಟು ಹಂಚಿಕೆಯ ವಿಷಯದಲ್ಲಿ ಎದ್ದ ಭಿನ್ನಾಭಿಪ್ರಾಯದ ಕಾರಣ ಶಿವಸೇನೆಯ 26 ಕಾರ್ಪೋರೇಟರ್ ಗಳು ಮತ್ತು 300 ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದು, ಶಿವಸೇನೆಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಮಹಾರಾಷ್ಟ್ರದ ಕಲ್ಯಾಣ್ ಪೂರ್ವ ಕ್ಷೇತ್ರದಿಂದ ಶಿವಸೇನೆ ನಾಯಕ ಧನಂಜಯ್ ಬಾಡೊರೆ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ಕ್ಷೇತ್ರದ ಟಿಕೆಟ್ ಬಿಜೆಪಿ ಪಾಲಾಯಿತು. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಣಪತ್ ಕಲು ಗಾಯಕ್ವಾಡ್ ಸ್ಪರ್ಧಿಸುತ್ತಿದ್ದಾರೆ.

ಇದೀಗ ಧನಂಜಯ್ ಅವರನ್ನು ಬೆಂಬಲಿಸಿ ಶಿವಸೇನೆಯ 26 ಕಾರ್ಪೋರೇಟರ್ ಗಳು ರಾಜೀನಾಮೆ ನೀಡಿದ್ದಾರೆ.
"ಶಿವಸೇನೆ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ನಮಗೆ ಒಮ್ಮತವಿಲ್ಲ. ನಾವು ಪಕ್ಷದಲ್ಲೇ ಇದ್ದರೆ ಪಕ್ಷಕ್ಕೂ ಇರಿಸುಮುರಿಸುಂಟಾಗಬಹುದು. ಆದ್ದರಿಂದ ನಾವು ರಾಜೀನಾಮೆ ನೀಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಬಂಡಾಯ ಅಭ್ಯರ್ಥಿ ಧನಂಜರ್ ಬಾಡೊರೆ ಮಾತನಾಡಿ, "ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಯಾವುದೇ ಬದಲಾವಣೆಯಾಗಿಲ್ಲ. ಜನರು ಪ್ರತಿದಿನ ಸಂಕಷ್ಟ ಪಡುತ್ತಿದ್ದಾರೆ. ನಾನು ಎಂದಿಗೂ ಬಿಜೆಪಿ ಅಭ್ಯರ್ಥಿಯನ್ನು ನನ್ನ ಶಾಸಕ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದ್ದರಿಂದಲೇ ನಾನು ಅವರ ವಿರುದ್ಧ ಸ್ಪರ್ಧಿಸುತ್ತಿದ್ದೇನೆ" ಎಂದಿದ್ದಾರೆ.
ಪಕ್ಷದಲ್ಲಿ ಸೀಟು ಹಂಚಿಕೆಯ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ, ಶಿವಸೇನೆ ನಾಯಕರು ಹೇಳುತ್ತಿದ್ದರೂ ಅಲ್ಲಲ್ಲಿ ಇಂಥ ಆಂತರಿಕ ಭಿನ್ನಾಭಿಪ್ರಾಯಗಳು ಕಂಡುಬರುತ್ತಿರುವುದು ಸುಳ್ಳಲ್ಲ.
ಉಭಯ ಪಕ್ಷದ ಮುಖಂಡರೂ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬಂದಿದ್ದು, ಬಿಜೆಪಿ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150, ಶಿವಸೇನೆ 124 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ವಿಧಾನಸಭೆಗೆ ಮತದಾನ ಅಕ್ಟೋಬರ್ 21 ರಂದು ನಡೆಯಲಿದ್ದು, ಅ.24 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications