ಬಂಜಾರ ಸಮುದಾಯದ ಧಾರ್ಮಿಕ ಮುಖಂಡ ರಾಮರಾವ್ ಮಹಾರಾಜ್ ನಿಧನ
ಮುಂಬೈ, ಅಕ್ಟೋಬರ್ 31: ಬಂಜಾರ ಸಮುದಾಯದ ಹಿರಿಯ ಧಾರ್ಮಿಕ ಮುಖಂಡ ರಾಮರಾವ್ ಮಹಾರಾಜ್ ಅವರು ಸುದೀರ್ಘ ಸಮಯದ ಅನಾರೋಗ್ಯದ ಬಳಿಕ ಶನಿವಾರ ಬೆಳಿಗ್ಗೆ ನಿಧನರಾದರು. ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಬಂಜಾರ ಸಮುದಾಯದ ಪ್ರಮುಖ ಸ್ವಾಮಿಗಳಾದ ರಾಮರಾವ್ ಮಹಾರಾಜ್, ದೇಶದಾದ್ಯಂತ 12 ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ರಾಜಕೀಯ ನಾಯಕರ ಜತೆ ಆಪ್ತ ಒಡನಾಟವಿತ್ತು.
ರಾಮರಾವ್ ಮಹಾರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ರಾಮರಾವ್ ಬಾಪು ಮಹಾರಾಜ್ ಅವರನ್ನು ಅವರ ಸಮಾಜಸೇವೆ ಮತ್ತು ಶ್ರೀಮಂತ ಆಧ್ಯಾತ್ಮಿಕ ಜ್ಞಾನದ ಸಲುವಾಗಿ ಸ್ಮರಿಸಲಾಗುವುದು. ಅವರು ಬಡತನ ನಿರ್ಮೂಲನೆ ಮತ್ತು ಮಾನವ ಸಂಕಷ್ಟಗಳನ್ನು ನಿವಾರಿಸಲು ಅನವರತ ಪ್ರಯತ್ನ ಮಾಡಿದ್ದರು. ಕೆಲವು ತಿಂಗಳ ಹಿಂದೆ ಅವರನ್ನು ಭೇಟಿಯಾಗುವ ಗೌರವ ನನಗೆ ಸಿಕ್ಕಿತ್ತು' ಎಂದು ಮೋದಿ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಸಹ ರಾಮರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಇಡೀ ಬದುಕನ್ನು ಬಡವರು ಮತ್ತು ಕೆಳವರ್ಗದವರನ್ನು ಮೇಲೆತ್ತುವ ಕಾರ್ಯಕ್ಕೆ ಮೀಸಲಿಟ್ಟಿದ್ದರು ಎಂದು ತಿಳಿಸಿದ್ದಾರೆ.
ರಾಮರಾವ್ ಮಹಾರಾಜ್ ಅವರ ಅಂತ್ಯಸಂಸ್ಕಾರವು ಕಾನೂನಿನ ನಿಯಮಾವಳಿಗೆ ಅನುಗುಣವಾಗಿ ಸೋಮವಾರ ಮಹಾರಾಷ್ಟ್ರದ ವಾಷಿಮ್ ಜಿಲ್ಲೆಯಲ್ಲಿರುವ ಪೊಹ್ರಾದೇವಿ ಧಾರ್ಮಿಕ ಸ್ಥಳದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications