ಟ್ರಸ್ಟ್ ವಿಚಾರವಾಗಿ ಕೌಟುಂಬಿಕ ಕಲಹ: ಬಾಬಾ ಆಮ್ಟೆ ಮೊಮ್ಮಗಳು ಶೀತಲ್ ಆತ್ಮಹತ್ಯೆ
ಚಂದ್ರಾಪುರ್, ನವೆಂಬರ್ 30: ಖ್ಯಾತ ಸಾಮಾಜಿಕ ಹೋರಾಟಗಾರ ಬಾಬಾ ಆಮ್ಟೆ ಅವರ ಮೊಮ್ಮಗಳು ಡಾ. ಶೀತಲ್ ಆಮ್ಟೆ ಕಾರಜಿಗಿ (39) ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹ ಬೀದಿಗೆ ಬಂದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಂದ್ರಾಪುರ ಜಿಲ್ಲೆಯ ಆನಂದವನ ಆಶ್ರಮದಲ್ಲಿ ಅವರು ಸೋಮವಾರ ಬೆಳಿಗ್ಗೆ ವಿಷದ ಚುಚ್ಚುಮದ್ದನ್ನು ಚುಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ಸಾವು ಆತ್ಮಹತ್ಯೆಯೇ, ಅಲ್ಲವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎನ್. ಆರ್. ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್; ಹೇಳಿದ್ದೇನು?
ವಿಷದ ಚುಚ್ಚುಮದ್ದು ದೇಹ ಪ್ರವೇಶಿಸಿದ್ದರಿಂದ ಅಸ್ವಸ್ಥರಾಗಿದ್ದ ಶೀತಲ್ ಅವರನ್ನು ಚಂದ್ರಾಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಸಾವಿನ ಸುತ್ತ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಶೀತಲ್ ಅವರು ತಮ್ಮ ಹಿರಿಯ ಅಣ್ಣ ಕೌಸ್ತುಭ್ ವಿರುದ್ಧ ಅಕ್ರಮಗಳ ಆರೋಪ ಮಾಡಿದ್ದರು. ಹೀಗಾಗಿ ಐದು ವರ್ಷಗಳ ಹಿಂದೆಯೇ ಅವರು ಟ್ರಸ್ಟ್ಗೆ ರಾಜೀನಾಮೆ ನೀಡಿದ್ದರು. ಮುಂದೆ ಓದಿ. (ಚಿತ್ರಗಳು: ಶೀತಲ್ ಆಮ್ಟೆ ಅವರ ಫೇಸ್ಬುಕ್ ಪುಟ).
ಕುಟುಂಬದ ವಿರುದ್ಧವೇ ಆರೋಪ
ಬಾಬಾ ಆಮ್ಟೆ ಅವರು ವರೋರಾದಲ್ಲಿ ಸ್ಥಾಪಿಸಿದ್ದ ಮಹಾರೋಗಿ ಸೇವಾ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶೀತಲ್ ಅವರು ಇತ್ತೀಚೆಗೆ ಟ್ರಸ್ಟ್ನ ಸದಸ್ಯರು ಮತ್ತು ಆಮ್ಟೆ ಕುಟುಂಬದ ವಿರುದ್ಧ ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ಶೀತಲ್ ಅವರ ಆರೋಪದ ಕುರಿತು ಬಾಬಾ ಆಮ್ಟೆ ಅವರ ಮಕ್ಕಳಾದ ವಿಕಾಸ್, ಪ್ರಕಾಶ್ ಮತ್ತು ಅವರ ಪತ್ನಿಯರಾದ ಭಾರತಿ ಮತ್ತು ಮಂದಾಕಿನಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು.
ಫೇಸ್ ಬುಕ್ ವಿಡಿಯೋ ಮಾಡಿದ್ದ ಶೀತಲ್
ಶೀತಲ್ ಅವರ ತಂದೆ ವಿಕಾಸ್ ಮತ್ತು ಚಿಕ್ಕಪ್ಪ ಪ್ರಕಾಶ್ ಆಮ್ಟೆ ಅವರು ಕೌಸ್ತುಭ್ ಅವರನ್ನು ಮರಳಿ ಟ್ರಸ್ಟ್ಗೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಶೀತಲ್ ಮತ್ತು ಅವರ ಪತಿ ಗೌತಮ್ ಕರಜಿಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಫೇಸ್ಬುಕ್ನಲ್ಲಿ ವಿಡಿಯೋ ಮಾಡಿದ್ದ ಶೀತಲ್, ಪ್ರಕಾಶ್ ಆಮ್ಟೆ ಮತ್ತು ಅವರ ಮಗ ಅನಿಕೇತ್ ಹಾಗೂ ಇತರರ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದರು. ಬಳಿಕ ಆ ಪೋಸ್ಟ್ಅನ್ನು ಅಳಿಸಿ ಹಾಕಿದ್ದರು.
ಹುಟ್ಟುಹಬ್ಬದ ದಿನವೇ ಆತ್ಮಹತ್ಯೆ ಮಾಡಿಕೊಂಡ 12 ವರ್ಷದ ಬಾಲಕ
ಸಮಸ್ಯೆ ಬಗೆಹರಿದಿದೆ ಎಂದಿದ್ದ ಶೀತಲ್
ಕಳೆದ ವಾರ ಹೇಳಿಕೆ ಪ್ರಕಟಿಸಿದ್ದ ಶೀತಲ್ ತಂದೆ ವಿಕಾಸ್, ಚಿಕ್ಕಪ್ಪ ಪ್ರಕಾಶ್ ಮತ್ತು ಚಿಕ್ಕಮ್ಮ ಮಂದಾಕಿನಿ ಅವರು ಆನಂದವನಕ್ಕೆ ಶೀತಲ್ ಕೊಡುಗೆಯನ್ನು ಶ್ಲಾಘಿಸಿದ್ದರು. ಆದರೆ ಅವರ ಆರೋಪಗಳನ್ನು ನಿರಾಕರಿಸಿದ್ದರು. ಆಕೆ ಮಾನಸಿಕವಾಗಿ ಒತ್ತಡದಲ್ಲಿದ್ದು, ಖಿನ್ನತೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದರು. ಭಾನುವಾರ ಪತ್ರಕರ್ತರೊಬ್ಬರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದ ಶೀತಲ್, 'ಸಮಸ್ಯೆ ಬಗೆಹರಿದಿದೆ. ಕೌಸ್ತುಭ್ ಅವರನ್ನು ಟ್ರಸ್ಟ್ಗೆ ಮರಳಿ ತರಲಾಗುವುದು' ಎಂದು ಹೇಳಿದ್ದರು.
ಕುಷ್ಠ ರೋಗಿಗಳ ಸೇವೆ
ಚಂದ್ರಾಪುರ ಜಿಲ್ಲೆಯ ವರೋರಾದಲ್ಲಿ ಜನಿಸಿದ್ದ ಬಾಬಾ ಆಮ್ಟೆ ಅವರು ಮಹಾರೋಗಿ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅದರ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಕುಷ್ಠರೋಗಿಗಳ ಸೇವೆ ಮಾಡಿದ್ದಕ್ಕಾಗಿ ಅವರಿಗೆ ಪದ್ಮವಿಭೂಷಣ ಮತ್ತು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗಳು ದೊರಕಿದ್ದವು. 2008ರಲ್ಲಿ ಅವರು ನಿಧನರಾಗಿದ್ದರು.