ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ, 25 ಶಾಸಕರು ಬಿಜೆಪಿಗೆ?
ಮುಂಬೈ, ಜೂನ್ 09: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಿರೀಕ್ಷೆಯಂತೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರ್ಷಾಂತ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯುಂಟಾಗಿದೆ. ಕಾಂಗ್ರೆಸ್ ಅಷ್ಟೇ ಅಲ್ಲದೆ ಎನ್ ಸಿಪಿ ಮುಖಂಡರು ಕೂಡಾ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಶಾಸಕ ಅಬ್ದುಲ್ ಸತ್ತಾರ್ ಅವರು ಬಿಜೆಪಿ ಸೇರುವ ಸುಳಿವು ಸಿಕ್ಕಿದೆ. ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡಿರುವ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಿಜೆಪಿ ಸೇರುವುದು ಖಚಿತವಾಗಿದೆ.
2019ರ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯನ್ನು ಮಹಾರಾಷ್ಟ್ರ ಎದುರಿಸಲಿದ್ದು, ಅಷ್ಟರಲ್ಲಿ ಕಾಂಗ್ರೆಸ್- ಎನ್ ಸಿಪಿ ಬಲ ಕುಗ್ಗಿಸುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ.
ಸುಮಾರು 25 ಶಾಸಕರು ಸದ್ಯ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ, ಈ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ವೇಳೆಯಲ್ಲಿ ಟಿಕೆಟ್ ಹಂಚಿಕೆಯಿಂದ ಅನೇಕ ಕಾಂಗ್ರೆಸ್ಸಿಗರು ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ನಡುವಿನ ತಿಕ್ಕಾಟದ ಲಾಭ ಬಿಜೆಪಿಗೆ ಸಿಗುವ ಲಕ್ಷಣಗಳಿವೆ.

ಸಚಿವ ಗಿರೀಶ್ ಮಹಾಜನ್ ಹೇಳಿಕೆ
ಕಾಂಗ್ರೆಸ್ ಹಾಗೂ ಎನ್ ಸಿಪಿಗೆ ಸೇರಿದ ಸುಮಾರು 25 ಶಾಸಕರು ನನ್ನ ಬಳಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಬಗ್ಗೆ ಖಚಿತಪಡಿಸಿಕೊಂಡಿದ್ದೇನೆ, ಇನ್ನು ಕೆಲವು ಫೋನ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಕೆಲವರು ಮೂರನೆ ವ್ಯಕ್ತಿಗಳ ಮೂಲಕ ಸಂದೇಶ ಕಳಿಸಿದ್ದಾರೆ. ಒಟ್ಟಾರೆ, 25 ಕ್ಕೂ ಅಧಿಕ ಮಂದಿ ಶಾಸಕರು ಇಷ್ಟರಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.

ವಿಪಕ್ಷ ನಾಯಕರಾಗಿದ್ದ ರಾಧಕೃಷ್ಣ ವಿಖೇ ಪಾಟೀಲ್
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುಜಯ್ ಅವರ ಹಾದಿಯಲ್ಲೇ ಸಾಗಿದ ಅವರ ತಂದೆ ರಾಧಾಕೃಷ್ಣ ವಿಖೆ ಪಾಟೀಲ್ ಅವರನ್ನು ಜೂನ್ ತಿಂಗಳಿನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ದೇವೇಂದ್ರ ಫಡ್ನವೀಸ್ ಮುಂದಾಗಿದ್ದಾರೆ. ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವಿಖೆ ಪಾಟೀಲ್ ಕುಟುಂಬದವರು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಸ್ವಜನಪಕ್ಷಪಾತವನ್ನು ಖಂಡಿಸಿ, ಕಾಂಗ್ರೆಸ್ ತೊರೆದಿದ್ದರು.

ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿಗೆ
ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ದೇವೇಂದ್ರ ಫಡ್ನವೀಸ್ ಗೆ ನನ್ನ ಬೆಂಬಲ ಎಂದಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ರೌಸಾಹೇಬ್ ಡನ್ವೆ ಅವರ ಪುತ್ರ, ಔರಂಗಬಾದ್ನಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಜಾಧವ್ ಅವರಿಗೆ ಔರಂಗಾಬಾದ್ನ ಶಾಸಕರಾಗಿರುವ ಸತ್ತಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಈಗ ವಿಖೇ ಪಾಟೀಲ್ ಜೊತೆ ಕಾಣಿಸಿಕೊಂಡಿದ್ದು, ಇನ್ನಷ್ಟು ಕಾಂಗ್ರೆಸ್ ಶಾಸಕರನ್ನು ತಮ್ಮ ಜೊತೆ ಬಿಜೆಪಿಗೆ ಕರೆದೊಯ್ಯಲಿದೆ ಎನ್ನಲಾಗಿದೆ.

ಅಶೋಕ್ ಚವಾಣ್ ಗೆ ಆಘಾತ ಕಾದಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಅವರಿಗೆ ಭಾರಿ ಆಘಾತ ಕಾದಿದೆ. ಅವರ ಸುತ್ತಾ ಮುತ್ತಾ ಇರುವ ನಂಬಿಕಸ್ಥರು ಇಷ್ಟರಲ್ಲೇ ತಮ್ಮ ನಿಷ್ಠೆ ಬದಲಾಯಿಸಿ ರಾಜ್ಯದ ಉಳಿತಿಗಾಗಿ ಬಿಜೆಪಿ ಸೇರಲಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಧಾನಿ ಮೋದಿ ನಾಯಕತ್ವದ ಮೇಲೆ ವಿಶ್ವಾಸವಿಟ್ಟುಕೊಂಡು ಬೇರೆ ಪಕ್ಷಗಳಿಂದ ಬಿಜೆಪಿಗೆ ಬರುತ್ತಿದ್ದಾರೆಯೇ ಹೊರತೂ ಯಾವುದೇ ಆಮಿಷ, ಮಂತ್ರಿ ಸ್ಥಾನದ ಭರವಸೆಯನ್ನು ನಾವು ನೀಡುತ್ತಿಲ್ಲ ಎಂದು ಮಹಾಜನ್ ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications