ಚಪ್ಪಲಿ ಏಟು ಕೊಟ್ಟ 'ಮಹಾ' ಸಂಸದ ಕಪ್ಪು ಪಟ್ಟಿಗೆ!
ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧಾರ ತಾಳುವವರೆಗೂ ರವೀಂದ್ರ ಗಾಯಕ್ ವಾಡ್ ವಿಮಾನಯಾನ ಮಾಡುವಂತಿಲ್ಲ ಎಂದು ಫೆಡರೇಶನ್ ಹೇಳಿದೆ.
ಮುಂಬೈ, ಮಾರ್ಚ್ 24: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿ ಏಟು ಕೊಟ್ಟ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ನನ್ನು ಭಾರತೀಯ ವಿಮಾನಯಾನ ಫೆಡರೇಶನ್ ಕಪ್ಪು ಪಟ್ಟಿಗೆ ಸೇರಿಸಿದ್ದು, ಅವರಿಗೆ ಯಾವುದೇ ರೀತಿಯ ವಿಮಾನಯಾನಕ್ಕೆ ಅವಕಾಶ ನೀಡಬಾರದೆಂದು ನಿರ್ಧರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧಾರ ತಾಳುವವರೆಗೂ ಅವರು ವಿಮಾನಯಾನ ಮಾಡುವಂತಿಲ್ಲ ಎಂದು ಫೆಡರೇಶನ್ ಹೇಳಿದೆ.[ಚಪ್ಪಲಿ ಏಟು ಪ್ರಕರಣ: ಸಂಸದನಿಗೆ ಶಿವಸೇನೆ ನೋಟಿಸ್]

ಗುರುವಾರ ಬೆಳಗ್ಗೆ ( ಮಾರ್ಚ್ 23) ಪುಣೆಯಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ ವಾಡ್ ಏರ್ ಇಂಡಿಯಾದಿಂದ ತಮಗಾಗುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಅಲ್ಲಿನ ಸಿಬ್ಬಂದಿಯ ಬಳಿ ಹೇಳಿಕೊಂಡು, ಸಮಸ್ಯೆ ಈಡೇರುವವರೆಗೂ ವಿಮಾನ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿ ವಿಫಲರಾದ ಸಿಬ್ಬಂದಿ, ಸ್ವಲ್ಪ ಜೋರು ದನಿಯಲ್ಲಿ ಸಂಸದರೊಂದಿಗೆ ಮಾತನಾಡಿದ್ದಾರೆ. ತಕ್ಷಣವೇ ತಾಳ್ಮೆ ಕಳೆದುಕೊಂಡ 56 ವರ್ಷದ ಸಂಸದ ತಮ್ಮ ಚಪ್ಪಲಿಯಿಂದ ಸಿಬ್ಬಂದಿಗೆ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ, ತಾನು ಸಿಬ್ಬಂದಿಯನ್ನು 25 ಬಾರಿ ಹೊಡೆದಿದ್ದೇನೆಂದು ಮಾಧ್ಯಮಗಳ ಮುಂದೆಯೂ ಹೇಳಿಕೊಂಡು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ಷಮೆ ಕೇಳುವ ಆಯ್ಕೆ ಅವರಿಗಿದ್ದರೂ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರಿಂದ ಕೋಪಗೊಂಡ ಫೆಡರೇಶನ್ ಈ ನಿರ್ಧಾರವನ್ನು ತಾಳಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ, 'ಇಂದು (ಮಾರ್ಚ್ 24) ಅಪರಾಹ್ನ 4.15 ಕ್ಕೆ ವಿಮಾನದಲ್ಲೇ ಪುಣೆಗೆ ತೆರಳುತ್ತೇನೆ, ಏನಾಗುತ್ತದೋ ನೋಡೋಣ' ಎಂದು ತಮಗೆ ನಿಷೇಧ ಹೇರಿರುವ ಫೆಡರೇಶನ್ ಗೇ ಸವಾಲು ಎಸೆಯುವ ಮೂಲಕ ಗಾಯಕ್ ವಾಡ್ ಮತ್ತೊಂದು ವಿವಾದಕ್ಕೆ ನಾಂದಿಹಾಡಿದ್ದಾರೆ.












Click it and Unblock the Notifications