ಪತ್ನಿಯಿಂದಲೇ ಪತಿಯ ಹತ್ಯೆ: ನಿಜವಾದ ಕಾರಣವೇನು?
ಮುಂಬೈ, ಏಪ್ರಿಲ್ 25: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ದಿ. ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ತಿವಾರಿ ಅವರ ಹತ್ಯೆ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆಯುತ್ತಿದೆ.
ಕುಡಿದ ಮತ್ತಿನಲ್ಲಿದ್ದ ಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ನಂತರ ಅಪೂರ್ವ ತಿವಾರಿ 'ವೈವಾಹಿಕ ಬದುಕಿನಲ್ಲಿ ಸಮಾಧಾನವಿಲ್ಲದಿರುವುದೇ ಈ ಕೊಲೆಗೆ ಕಾರಣ' ಎಂದಿದ್ದರು. ಆದರೆ ಕೊಲೆಗೆ ಇವಿಷ್ಟೇ ಕಾರಣವಲ್ಲ ಎಂದು ಮೃತ ರೋಹಿತ್ ತಾಯಿ ಉಜ್ವಲ ಶರ್ಮಾ ಹೇಳಿದ್ದಾರೆ.
"ಅಪೂರ್ವ ಅವರಿಗೆ ವಿವಾಹೇತರ ಸಂಬಂಧ ಇತ್ತು. ಮತ್ತು ಅವರು ರೋಹಿತ್ ಅವರ ಆಸ್ತಿಯ ಮೇಲೆ ಕಣ್ಣು ಹಾಕಿದ್ದರು. ಹಣದ ಆಸೆ ಮತ್ತು ಅನೈತಿಕ ಸಂಬಂಧವೇ ಈ ಹತ್ಯೆಗೆ ಕಾರಣ" ಎಂದು ಉಜ್ವಲ ಶರ್ಮಾ ಹೇಳಿದ್ದಾರೆ.

ರೋಹಿತ್ ಶೇಖರ್ ತಿವಾರಿ ಅವರು ಏಪ್ರಿಲ್ 16 ರಂದು ಅಪರಾಹ್ನ 4 ಗಂಟೆಯ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರ ಬೆಡ್ ರೂಮಿನಲ್ಲಿ ಪತ್ತೆಯಾಗಿದ್ದರು. ಮೂಗಿನಲ್ಲಿ ರಕ್ತಸೋರುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅವರು ದಾರಿಯಲ್ಲೇ ಅಸುನೀಗಿದ್ದರು. ಮೇಲ್ನೋಟಕ್ಕೆ ಇದನ್ನು ಹೃದಯಾಘಾತ ಎಂದು ವೈದ್ಯರು ತಿಳಿಸಿದ್ದರು.
ಆದರೆ ಅಸಲಿ ಕಾರಣ ಬೇರೆಯೇ ಇದೆ ಎಂಬ ಅನುಮಾನ ಅವರನ್ನು ಕೂಲಂಕಷವಾಗಿ ವೈದ್ಯಕೀಯ ಪರೀಕ್ಷೆನಡೆಸಿದಾಗ ಆರಂಭವಾಗಿತ್ತು. ವೈದ್ಯಕೀಯ ವರದಿ, ಇದು ಸಹಜ ಸಾವಲ್ಲ ಎಂದಿತ್ತು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು, ರೋಹಿತ್ ಪತ್ನಿ ಅಪೂರ್ವ ಮತ್ತು ಮನೆಕೆಲಸದವರನ್ನು ವಿಚಾರಣೆಗೊಳಪಡಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಅಪೂರ್ವ, ತಾವೇ ಪತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. "ವೈವಾಹಿಕ ಜೀವನ ಸಮಾಧಾನಕರವಾಗಿರಲಿಲ್ಲವಾದ್ದರಿಂದ ಮತ್ತು ಪತಿಯ ಕುಡಿತದ ಚಟದಿಂದ ಬೇಸತ್ತಿದ್ದರಿಂದ ಅವರನ್ನು ಕೊಂದೆ" ಎಂದು ಅಪೂರ್ವ ಒಪ್ಪಿಕೊಂಡಿದ್ದರು.












Click it and Unblock the Notifications